ಬೆಂಗಳೂರು, ಸೆ. 20:
ಏಡ್ಸ್ ಇಂಜೆಕ್ಷನ್, ಅತ್ಯಾಚಾರ, ಹನಿ ಟ್ರ್ಯಾಪ್ ಸೇರಿದಂತೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒಕ್ಕಲಿಗರ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ನ ಎಲ್ಲಾ ಒಕ್ಕಲಿಗ ಸಚಿವ, ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹಲವು ಗಂಭೀರ ಆಪಾದನೆಗಳಿವೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಹಿತಿಗಳಿವೆ ಈ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಮನವಿ ಮಾಡಿದರು.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್ ಬಿಜೆಪಿ ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಏಡ್ಸ್ ಸೋಂಕನ್ನು ಅವರ ವಿರೋಧಿಗಳಿಗೆ ಹರಡಿಸುವ ಯತ್ನ ನಡೆದಿದೆ. ಅವರ ನೇತೃತ್ವದಲ್ಲಿ ಸೋಂಕನ್ನು ಹರಡಿಸುವ ಜಾಲವೇ ಸಕ್ರಿಯವಾಗಿದೆ ಈ ಬಗ್ಗೆ ವಿಶೇಷ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಮಾಜಿ ಮಂತ್ರಿ ಹಾಗೂ ಬಿಜೆಪಿ ಶಾಸಕ ಯಾರನ್ನೆಲಾ ಬಳಸಿಕೊಂಡು ಸೋಂಕನ್ನು ಹರಡಿಸಲಾಗಿದೆ. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತನಿಖೆ ಮೂಲಕ ಬಹಿರಂಗಗೊಳಿಸಬೇಕಿದೆ.ಶಒಕ್ಕಲಿಗ, ದಲಿತ ಹಾಗೂ ಮಹಿಳಾ ಸಮುದಾಯದ ವಿರುದ್ದ ಶಾಸಕ ಮುನಿರತ್ನ ಅವರು ಅವಹೇಳನ ಮಾಡಿದ್ದಾರೆ. ಶಾಸಕರ ಅವಹೇಳನಕಾರಿ ಮಾತುಗಳು ಜಗಜ್ಜಾಹೀರಾಗಿದೆ ಎಂದು ಹೇಳಿದರು.
ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ರಾಜಕೀಯಕ್ಕೂ ಹಾಗೂ ಮುನಿರತ್ನ ಅವರ ಮಾತಿಗೂ ಯಾವುದೇ ಸಂಬಂಧವಿಲ್ಲ ದೂರುದಾರರ ವಿರುದ್ಧ ಸಮುದಾಯದ ಹೆಸರಿನಲ್ಲಿ ಅತಿ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ದಲಿತ, ಒಕ್ಕಲಿಗ ಮತ್ತು ಮಹಿಳೆಯರನ್ನು ಬಹಳ ಕೀಳಾಗಿ ನೋಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣವಲ್ಲ. ಅವರ ಮನಸ್ಸಿನ ಮಾತುಗಳು. ಈ ರೀತಿ ಮಾತನಾಡಿ ಎಂದು ನಾವು ಹೇಳಿಲ್ಲ. ಹೊಸದಾಗಿ ಮುನಿರತ್ನ ಅವರ ಮೇಲೆ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಲಿ. ಆ ನಂತರ ಇದಕ್ಕೆ ಸೂಕ್ತ ಉತ್ತರ ಕೊಡುತ್ತೇವೆ” ಎಂದು ಹೇಳಿದರು.
ಅನೇಕ ಹೆಣ್ಣು ಮಕ್ಕಳನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಪ್ರಶ್ನೆ ಕೇಳಿದಾಗ “ಈ ರೀತಿಯ ಕೃತ್ಯಗಳನ್ನು ನನ್ನ ರಾಜಕೀಯ ಜೀವನದಲ್ಲಿ ಕೇಳಿರಲೇ ಇಲ್ಲ. ವಿದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದನ್ನು ಕೇಳಿದ್ದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇದರ ಮೂಲಕ ಬಿಜೆಪಿಯವರ ಬಣ್ಣವೂ ಬಯಲಾಗಬೇಕು” ಎಂದರು.
“ಮುನಿರತ್ನ ಅವರ ಹಿಂದೆ ನಿಂತಿರುವ ಸಿ.ಟಿ.ರವಿ, ಆರ್. ಅಶೋಕ್ ಹಾಗೂ ಕುಮಾರಸ್ವಾಮಿ ಅವರು ಇದಕ್ಕೆ ಹೇಳಿಕೆ ನೀಡಬೇಕು. ಕಾಂಗ್ರೆಸ್ ಅವರ ಮೇಲೆ ಈ ರೀತಿಯ ಅಸ್ತ್ರ ಪ್ರಯೋಗಿಸಿ ಎಂದು ಇವರುಗಳೇ ಕುಮ್ಮಕ್ಕು ನೀಡಿರಬಹುದು. ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು” ಎಂದರು.
ಒಕ್ಕಲಿಗ, ದಲಿತ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದರ ಬಗ್ಗೆ ಎರಡೂ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟವಾಗಬೇಕು. ಇಲ್ಲದಿದ್ದರೆ ದಾರಿಯಲ್ಲಿ ಹೋಗುವವರೆಲ್ಲಾ ಮಾತನಾಡಲು ಪ್ರಾರಂಭ ಮಾಡುತ್ತಾರೆ” ಎಂದರು.
“ನಾನು ನನ್ನ ಜೀವಮಾನದಲ್ಲಿ ಇಂತಹ ಪದಗಳನ್ನು ಕೇಳಿಲ್ಲ. ನಾವುಗಳು ಉತ್ತರಪ್ರದೇಶದಲ್ಲಿ ವಾಸಿಸುತ್ತಿಲ್ಲ. ನಾಗರೀಕತೆಯಿರುವ ಕರ್ನಾಟಕದಲ್ಲಿದ್ದೇವೆ. ಮುನಿರತ್ನ ಮಾಡಿರುವ ಕೃತ್ಯಗಳನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ” ಎಂದು ಹೇಳಿದರು.