ರಣರಂಗವಾದ ವಿಧಾನಸಭೆ,
ಬಿಜೆಪಿ ಸದಸ್ಯರು ಸಸ್ಪೆಂಡ್
ಬೆಂಗಳೂರು,ಮಾ.21:
ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಎಂದೆಂದೂ ಕಂಡರಿಯದ ವಿದ್ಯಮಾನಗಳು ಶುಕ್ರವಾರ ಸಂಭವಿಸಿದವು. ಆಡಳಿತ ಪ್ರತಿಪಕ್ಷ ಸದಸ್ಯರ ನಡುವಿನ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು.
ಸಭಾಧ್ಯಕ್ಷರ ಪೀಠದ ಪಕ್ಕದಲ್ಲಿ ನಿಂತು ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದೆಸೆಯುವ ಮೂಲಕ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.ಇದರಿಂದ ಸುಗಮ ಕಲಾಪ ಸಾಧ್ಯವಾಗದೆ ಸಭಾಧ್ಯಕ್ಷ ಯು.ಟಿ.ಖಾದರ್ ಸದನವನ್ನು ಅಲ್ಪಕಾಲದವರೆಗೆ ಮುಂದೂಡಿದರು.
ಇದಾದ ನಂತರ ಮತ್ತೆ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿ ಸಭಾಧ್ಯಕ್ಷರ ಪೀಠಕ್ಕೆ ಆಗೌರವ ತೋರಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯ ಕಲಾಪದಿಂದ ಆರು ತಿಂಗಳವರೆಗೆ ಅಮಾನತುಗೊಳಿಸಿ ಸಭಾಧ್ಯಕ್ಷ ಯು ಟಿ ಖಾದರ್ ಆದೇಶಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು ಈ ವೇಳೆ ತಕ್ಷಣವೇ ಎದ್ದು ನಿಂತ ಬಿಜೆಪಿಯ ಅರಗ ಜ್ಞಾನೇಂದ್ರ ಸುನಿಲ್ ಕುಮಾರ್ ಮತ್ತು ಡಾ. ಅಶ್ವತ್ ನಾರಾಯಣ ಹನಿ ಟ್ರ್ಯಾಪ್ ವಿಷಯ ಪ್ರಸ್ತಾಪಿಸಿದರು.
ಸಹಕಾರ ಮಂತ್ರಿ ರಾಜಣ್ಣ ಅವರು ತಮ್ಮನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ನಡೆಸಿದ ಪ್ರಯತ್ನದ ಬಗ್ಗೆ ಸದನದಲ್ಲಿಯೇ ಬಹಿರಂಗಪಡಿಸಿದ್ದಾರೆ. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ ಹೀಗಾಗಿ ಇದನ್ನು ನ್ಯಾಯಾಂಗ ತನಿಖೆ ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,
ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ . ಈಗಾಗಲೇ ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸುವುದಾಗಿ ಗೃಹ ಮಂತ್ರಿಗಳು ಹೇಳಿದ್ದಾರೆ ಹೀಗಾಗಿ ಈ ಕುರಿತಂತೆ ಚರ್ಚೆ ಅನಗತ್ಯ ಎಂದರು.
ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಸಚಿವ ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಇದನ್ನು ವಿರೋಧಿಸಿದ ಬಿಜೆಪಿ ಸದಸ್ಯರು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಇಲ್ಲವೇ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು.
ಇದನ್ನು ವಿರೋಧಿಸಿದ ಬಿಜೆಪಿ ಶಾಸಕರು ಘೋಷಣೆಗಳನ್ನು ಮೊಳಗಿಸಿ ಸಿಎಂ ಉತ್ತರಕ್ಕೆ ಅಡ್ಡಿಪಡಿಸಲು ಮುಂದಾದರು. ಅಷ್ಟೆ ಅಲ್ಲ ಲ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಧರಣಿ ಆರಂಭಿಸಿದರು. ಇದಕ್ಕೆ ಸೊಪ್ಪು ಹಾಕದ ಉತ್ತರ ನೀಡುವುದನ್ನು ಮುಂದುವರೆಸಿದರು
ಇದರಿಂದ ಕೆರಳಿದ ಬಿಜೆಪಿಯ ಸಿ.ಕೆ.ರಾಮಮೂರ್ತಿ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಶಾಸಕರು ಸಿಡಿಗಳನ್ನು ಹಿಡಿದು ಸಭಾಧ್ಯಕ್ಷರ ಪೀಠದ ಪಕ್ಕಕ್ಕೆ ನುಗ್ಗಿ ಅವರ ಸಮೀಪದಲ್ಲಿ ನಿಂತು ಘೋಷಣೆ ಹಾಕ ತೊಡಗಿದರು. ಕೂಡಲೆಗಳು ಸದನದ ಮಾರ್ಷಲ್ ಗಳು ಬಂದು ಸಭಾಧ್ಯಕ್ಷರ ಪೀಠವನ್ನು ಸುತ್ತುವರಿದರು.ಆದರೆ, ಸಭಾಧ್ಯಕ್ಷರು ಮಾರ್ಷಲ್ ಗಳನ್ನು ಹೊರಗೆ ಕಳುಹಿಸಿ ಧರಣಿ ನಿರತ ಶಾಸಕರನ್ನು ಕೆಳಗೆ ಹೋಗುವಂತೆ ಸೂಚಿಸಿದರು ಆದರೆ ಇದನ್ನು ಲೆಕ್ಕಿಸದೆ ಬಿಜೆಪಿ ಶಾಸಕರು ಘೋಷಣೆ ಮೊಳಗಿಸುತ್ತಾ ಕಾಗದ ಪತ್ರಗಳನ್ನು ಹರಿದೆಸೆಯ ತೊಡಗಿದರು
ಇದನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಭಾಧ್ಯಕ್ಷರ ಪೀಠ ಬಿಟ್ಟು ಕೆಳಗಿಳಿಯುವಂತೆ ಹಲವು ಬಾರಿ ಸೂಚನೆ ನೀಡಿದರು. ವಿಧಾನಸಭೆಯ ಜಂಟಿ ಕಾರ್ಯದರ್ಶಿಯವರು ಸಭಾಧ್ಯಕ್ಷರ ಬಳಿ ಬಂದು ಶಾಸಕರನ್ನು ಕೆಳಗಿಳಿಸುವಂತೆ ಸ್ಪೀಕರ್ ಅವರಿಗೆ ಸಲಹೆ ನೀಡಿದರು.
ಸಭಾಧ್ಯಕ್ಷ ಸೂಚನೆ ಹೊರತಾಗಿಯೂ ಶಾಸಕರು ಕೆಳಗಿಳಿಯದೆ ಅಲ್ಲೇ ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು ಕೆಳಗೆ ಬರಬೇಕು. ಇಲ್ಲವಾದರೆ ಮಾರ್ಷಲ್ ಗಳು ತಳ್ಳುತ್ತಾರೆ. ನಿಮಗೆ ತಳ್ಳಿಸಿಕೊಳ್ಳಲು ಆಸೆಯೇ? ಎಂದು ಗದರಿದರು.
ಈ ಹಂತದಲ್ಲಿ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡುವುದಾಗಿ ಪ್ರಕಟಿಸಿದರು.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಮುಂದೂಡುವುದು ಬೇಡ ಹಣಕಾಸು ಮಸೂದೆ ಸೇರಿದಂತೆ ಕೆಲವು ವಿಧೇಯಕಗಳ ಅಂಗೀಕಾರವನ್ನು ಪೂರ್ಣಗೊಳಿಸಿದ ನಂತರ ಕಲಾಪ ಮುಂದೂಡುವಂತೆ ಸಲಹೆ ನೀಡಿದರು.
ಇದಕ್ಕೆ ಸಭಾಧ್ಯಕ್ಷರು ಸಮ್ಮತಿಸಿದ ಬಳಿಕ ಮುಖ್ಯಮಂತ್ರಿಗಳು ವಿಧೇಯಕ ಮಂಡನೆ ಆರಂಭಿಸಿದರು.
ಇದರಿಂದ ಕೆರಳಿದ ಕೆಲವು ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿದ್ದ ಕಾಗದ ಪತ್ರಗಳನ್ನು ಕಸಿದುಕೊಂಡು ಹರಿದು ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಶಾಸಕರತ್ತ ಎಸೆಯ ತೊಡಗಿದರು. ಇವರು ಹರಿದೆಸೆದ ಕಾಗದ ಪತ್ರಗಳು ಮುಖ್ಯಮಂತ್ರಿಗಳ ತಲೆಯ ಮೇಲೆ ಬೀಳುತೊಡಗಿದವು.
ಆಗ ಸಚಿವ ಭೈರತಿ ಸುರೇಶ್, ಶಾಸಕ ರಂಗನಾಥ್, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಮುಖ್ಯಮಂತ್ರಿಯವರ ಸುತ್ತಲೂ ಕಾವಲಿಗೆ ನಿಂತರು. ಕಾಂಗ್ರೆಸ್ನ ಇತರ ಶಾಸಕರು ಮುಖ್ಯಮಂತ್ರಿಯವರ ಹಿಂಭಾಗದ ಸಾಲುಗಳಲ್ಲಿ ಬಂದು ಜಮಾಯಿಸಿದರು.
ಈ ವೇಳೆ ಮುಖ್ಯಮಂತ್ರಿಯವರ ಬಳಿ ನಿಂತಿದ್ದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನೀವೇನೂ ರೌಡಿಗಳೇ? ಹೊಡೆಯುತ್ತೀರಾ ಬನ್ನಿ ನೋಡೋಣ ಎಂದೆಲ್ಲಾ ವಾಗ್ವಾದಗಳು ವಿನಿಮಯವಾದವು. ಅತ್ತ ಸ್ಪೀಕರ್ ಅವರ ಮುಖಕಕ್ಕೆ ಕಾಗದಪತ್ರಗಳು ತಾಗದಂತೆ ಮಾರ್ಷಲ್ಗಳು ಕೈ ಅಡ್ಡ ಇಟ್ಟು ತಡೆಯುತ್ತಿದ್ದರು.
ಗದ್ದಲ ಜೋರಾದಾಗ ಪ್ರತಿಪಕ್ಷಗಳ ಎಲ್ಲಾ ಶಾಸಕರು ಸದನದ ಬಾವಿಯಲ್ಲಿ ಜಮಾಯಿಸಿ ಜೋರು ಗಲಾಟೆ ಮಾಡಿದರು. ಸದನದ ಹೊರಗಿದ್ದ ಎಲ್ಲಾ ಮಾರ್ಷಲ್ ಗಳು ಒಳಗೆ ಧಾವಿಸಿ ರಕ್ಷಣೆಗೆ ನಿಂತರು. ಇತ್ತ ಮುಖ್ಯಮಂತ್ರಿಗಳ ಬಳಿಯೂ ಗದ್ದಲ ಹೆಚ್ಚಾದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿ ಬಳಿ ನಿಂತಿದ್ದ ಸಚಿವ ಭೈರತಿ ಸುರೇಶ್ ಸಿಟ್ಟಿನಿಂದ ಕಿರುಪುಸ್ತಕವನ್ನು ವಿರೋಧ ಪಕ್ಷಗಳತ್ತ ಎಸೆದು ಆಕ್ರೋಶ ಹೊರಹಾಕಿದರು
ಗದ್ದಲದ ನಡುವೆಯೂ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2025, ಹಾಗೂ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು (ತಿದ್ದುಪಡಿ) ವಿಧೇಯಕ-2025, ಕರ್ನಾಟಕ ಧನ ವಿನಿಯೋಗ ವಿಧೇಯಕ-2025, ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕ-2025, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಗಳು ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ಗದ್ದಲ ಮಿತಿಮೀರಿದಾಗ ಅನಿವಾರ್ಯವಾಗಿ ಕಲಾಪವನ್ನು ಸಭಾಧ್ಯಕ್ಷರು 15 ನಿಮಿಷಗಳ ಕಾಲ ಮುಂದೂಡಿದರು.
ಅಮಾನತು:
ಮಧ್ಯಾಹ್ನ ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಘೋಷಣಾ ಫಲಕ ಹಿಡಿದು ಪ್ರತಿಭಟನೆ ಮುಂದುವರಿಸಿದರು.ಇದರ ನಡುವೆಯೇ ಕಾನೂನು ಮಂತ್ರಿ ಎಚ್.ಕೆ. ಪಾಟೀಲ್ ಅವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಕೋರಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಗದ್ದಲ ತೀವ್ರಗೊಳಿಸಿದರು. ಆಗ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬೆಳಗಿನ ಕಲಾಪದ ವೇಳೆ ನಡೆದ ಅಹಿತಕರ ಘಟನೆಯನ್ನು ಪ್ರಸ್ತಾಪಿಸಿ ಅದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಅಶ್ವತ್ ನಾರಾಯಣ ಮುನಿರತ್ನ ಸೇರಿದಂತೆ 18 ಶಾಸಕರನ್ನು ಶಾಸನಸಭೆಯ ಕಲಾಪದಿಂದ ಅನರ್ಹಗೊಳಿಸುವ ಪ್ರಸ್ತಾಪ ಮಂಡಿಸಿದರು.
ಇದನ್ನು ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಸಭಾಧ್ಯಕ್ಷರ ಪೀಠಕ್ಕೆ ಅಗೌರವವನ್ನು ಸಹಿಸಲು ಸಾಧ್ಯವಿಲ್ಲ ಕರ್ನಾಟಕ ವಿಧಾನಸಭೆಗೆ ದೇಶದಲ್ಲೇ ಅತ್ಯಂತ ಹೆಚ್ಚು ಗೌರವವಿದೆ ಇಂತಹ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಶಾಸಕರನ್ನು ಆರು ತಿಂಗಳ ಕಾಲ ಕಲಾಪದಿಂದ ಅಮಾನತುಗೊಳಿಸುವ ಸಭಾಧ್ಯಕ್ಷರ ನಿರ್ಣಯವನ್ನು ಬೆಂಬಲಿಸುವುದಾಗಿ ತಿಳಿಸಿದರು.
ಆನಂತರ ಈ ನಿರ್ಣಯವನ್ನು ದ್ವನಿ ಮತದ ಮೂಲಕ ಅನುಮೋದನೆ ಪಡೆದುಕೊಂಡ ಸಭಾಧ್ಯಕ್ಷರು ಬಳಿಕ ಬಿಜೆಪಿ ಸದಸ್ಯರಾದ
ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ.ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ ಸೇರಿ 18 ಶಾಸಕರನ್ನು ಅಮಾನತುಪಡಿಸಿರುವ ತೀರ್ಮಾನ ಪ್ರಕಟಿಸಿ ಅವರನ್ನು ಸದನದಿಂದ ಹೊರ ಹೋಗುವಂತೆ ಸೂಚಿಸಿದರು.
ಇದನ್ನು ವಿರೋಧಿಸಿ ಬಿಜೆಪಿ ಸದಸ್ಯರು ದೊಡ್ಡ ಧ್ವನಿಯಲ್ಲಿ ಘೋಷಣೆ ಮೊಳಗಿಸುತ್ತಿದ್ದಂತೆ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು ಮತ್ತೆ ಕೆಲಕಾಲ ಮುಂದೂಡಿದರು