ಬೆಂಗಳೂರು,ಮೇ.15:
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಕನಿಷ್ಠ 30 ರಿಂದ 35 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನಡೆದಿರುವ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಚುನಾವಣೆ ನಂತರ ಮಹಾರಾಷ್ಟ್ರ ಸರ್ಕಾರ ಪತನ ಹೊಂದಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸದ್ಯದಲ್ಲೇ ಮಾಜಿ ಮುಖ್ಯಮಂತ್ರಿ ಆಗಲಿದ್ದಾರೆ. ಅವರಿಂದ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಿಂದೆ ಹೋದವರು ವಾಪಸ್ ಆಗ್ತಾರೆ. ಎಲ್ಲರೂ ಉದ್ಧವ್ ಠಾಕ್ರೆ ಬಳಿ ಹೋಗ್ತಾರೆ. ಎನ್ ಸಿಪಿ ಕಡೆಯೂ ಹೋಗ್ತಾರೆ. ಚುನಾವಣೆ ಮುಗಿದ ಒಂದು ತಿಂಗಳ ನಂತರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.
ಮಹಾರಾಷ್ಟ್ರದಲ್ಲಿ 30 ರಿಂದ 40 ಶಾಸಕರು ನಮ್ಮ ಕಡೆ ಬರ್ತಾರೆ. ಶರತ್ ಪವಾರ್ ಇದ್ದಾರೆ,ಉದ್ಧವ್ ಠಾಕ್ರೆ ಇದ್ದಾರೆ. ಅವರನ್ನು ಇಲ್ಲಿಗೆ ನಾವ್ಯಾಕೆ ಕರೆತರೋಣ. ಅಲ್ಲಿ ಅಜಿತ್ ಪವಾರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಹಾಗಾಗಿ ಅವರೂ ಬೇಜಾರುಗೊಂಡಿದ್ದಾರೆ. ವಾಪಸ್ ಶಿವಸೇನೆ ಶಾಸಕರು ಉದ್ಧವ್ ಬಳಿ ಹೋಗ್ತಾರೆ. ಮಹಾ ಘಟಬಂಧನ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದರು.