ಬೆಳಗಾವಿ;
ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ ಪ್ರಕರಣ ಬೇಧಿಸಿರುವ ಪೊಲೀಸರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಹಾಗೂ ಕಾಂಗ್ರೆಸ್ ನಾಯಕಿ ಮಂಜುಳಾ ರಾಮನಗಟ್ಟಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದ ಈ ಅಪಹರಣ ಪ್ರಕರಣ ಇದೀಗ ಕಾಂಗ್ರೆಸ್ ನಾಯಕಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯ ಆಪ್ತೆಯನ್ನು ಬಂಧಿಸುವ ಮೂಲಕ ತಲ್ಲಣಕ್ಕೆ ಕಾರಣವಾಗಿದೆ.
ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48) ಎಂಬುವರು ಕಳೆದ ಫೆ.14ರಂದು ರಾತ್ರಿ 11 ಗಂಟೆ ಸುಮಾರಿಗೆ ಮಿರಜ್ ದಿಂದ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು.
ಮರುದಿನ ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು ಐದು ಕೋಟಿ ಹಣ ನೀಡಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದರು.
ಇದರಿಂದ ಭಯಗೊಂಡ ಶೋಭಾ ತನ್ನ ಮಗನಿಗೆ ವಿಚಾರ ತಿಳಿಸಿ, 10 ಲಕ್ಷ ಹಣ ನೀಡಿ ಪತಿ ಬಸವರಾಜ ಅಂಬಿಯನ್ನು ಬಿಡಿಸಿಕೊಂಡು ಬರಲು ಆರೋಪಿಗಳು ತಿಳಿಸಿದ್ದ ನಿಪ್ಪಾಣಿಯ ಬಳಿಯ ದಾಬಾಗೆ ಹೋಗಿದ್ದರು.
ಶೋಭಾ ಸೇರಿದಂತೆ 4-5 ಮಂದಿ ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿಗಳು ಅಂದು ಭೇಟಿಯಾಗಲಿಲ್ಲ. ಮತ್ತೊಮ್ಮೆ ಕರೆ ಮಾಡಿ ಒಬ್ಬರೇ ಬಂದು ಐದು ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು ಇದರಿಂದ ಭಯಗೊಂಡ ಆಕೆ ಘಟಪ್ರಭಾ ಠಾಣೆ ಪೊಲೀಸರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡಿದ್ದರು.
ಇದಾದ ನಂತರ ಪೊಲೀಸರು ಕಾರ್ಯಾಚರಣೆಯ ಅಂಗಳಕ್ಕೆ ಧುಮುಕಿದ್ದಾರೆ. ಪೋನ್ ಲೋಕೇಷನ್ ಆಧಾರದ ಮೇಲೆ ಶೋಧ ಕಾರ್ಯ ಶುರು ಮಾಡಿದ್ದ ಪೊಲೀಸರು ಬಸವರಾಜನನ್ನು ರಕ್ಷಣೆ ಮಾಡಿ. ಸ್ಥಳದಲ್ಲೇ ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಪ್ರಮುಖ ಆರೋಪಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ಎಂಬ ವಿಚಾರ ಬಹಿರಂಗವಾಗಿದೆ. ಇನ್ನು, ಮಂಜುಳಾ ಭಾಗಿಯಾಗಿರುವ ಕುರಿತು ಸ್ವತಃ ಆಕೆಯ ಪುತ್ರ ಬಾಯಿಬಿಟ್ಟಿದ್ದಾನೆ. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾ ಅವರನ್ನು ಬಂಧಿಸಲಾಗಿದೆ.