ಬೆಂಗಳೂರು,ಫೆ.28-ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಸಿನಿಮಾ ಶೂಟಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅವಕಾಶ ಕಲ್ಪಿಸಿದೆ.
ಆದರೆ ವಿದೇಶ ಪ್ರಯಾಣಕ್ಕೆ ಇವರು ಕೋರಿದ್ದ ಮನವಿಯನ್ನು ತಿರಸ್ಕರಿಸಿದೆ
ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆಡೆ ಹೋಗಲು ಅವಕಾಶ ನೀಡಬೇಕು’ ಎಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಜಾಮೀನು ನೀಡಿದ್ದ ವೇಳೆ ವಿಧಿಸಲಾಗಿದ್ದ ಹಲವು ಷರತ್ತುಗಳನ್ನು ಸಡಿಲಿಕೆ ಮಾಡಿದ್ದಾರೆ
ದರ್ಶನ್ ದೇಶದೊಳಗೆ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಆದೇಶ ನೀಡಿದ್ದಾರೆ.
ಇದೇ ವೇಳೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರಿಗೆ ಕೆಲಸದ ನಿಮಿತ್ತ ಮುಂಬಯಿ ಹಾಗೂ ಹೊಸದಿಲ್ಲಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.
ಪವಿತ್ರಾ ಗೌಡ ಪರ ವಕೀಲರು ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ಮಾರ್ಚ್ 3ರಿಂದ 10 ಹಾಗೂ ಮಾರ್ಚ್ 17ರಿಂದ 26ರವರೆಗೆ ಮುಂಬಯಿ, ದಿಲ್ಲಿಗೆ ತೆರಳಲು ಅನುಮತಿ ನೀಡಿ ಆದೇಶಿಸಿದೆ.
ಸದ್ಯಕ್ಕಿಲ್ಲ ಡೆವಿಲ್:
ದರ್ಶನ್ ಅವರು ಇಂದಿನಿಂದ ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು.ಆದರ ದರ್ಶನ್ ಅವರಿಗೆ ಬೆನ್ನು ನೋವು ಬಹುವಾಗಿ ಕಾಡುತ್ತಿದೆ. ಹೀಗಾಗಿ, ಇದಕ್ಕೆ ಅವರು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ನೋವು ಪೂರ್ಣ ಗುಣಮುಖವಾದ ಬಳಿಕವಷ್ಟೆ ಅವರು ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎಂದು ಅವರ ಆಪ್ತ ಬಳಗದವರು ಹೇಳಿದ್ದಾರೆ.