ತಿರುವನಂತಪುರಂ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯುವಕನೋರ್ವ ತನ್ನ ಕುಟುಂಬದ ಐವರು ಸದಸ್ಯರು ಮತ್ತು ಗೆಳತಿಯನ್ನು ಭೀಕರವಾಗಿ ಕೊಲೆ ಮಾಡಿದ ಭಯಾನಕ ಘಟನೆ ಕೇರಳ ರಾಜಧಾನಿ ಬಳಿಯ ಉಪನಗರದಲ್ಲಿ ನಡೆದಿದೆ.
ಉಪನಗರದಲ್ಲಿ ಅಫಾನ್(23) ತನ್ನ ಅಜ್ಜಿ, 13 ವರ್ಷದ ಸಹೋದರ ಹಾಗೂ ಗೆಳತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಅಫಾನ್ ತನ್ನ ತಾಯಿಯ ಮೇಲೂ ಮಾರಣಾಂತಿಕ ದಾಳಿ ಮಾಡಿದ್ದು, ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾರೆ
ತನ್ನವರನ್ನೇ ಭೀಕರವಾಗಿ ಕೊಲೆ ಮಾಡಿದ ಯುವಕ ಅಫಾನ್, ಬಳಿಕ ಸ್ವತಃ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ಅಫಾನ್ ಹೇಳಿಕೆಯಿಂದ ಬೆಚ್ಚಿಬಿದ್ದ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಒಟ್ಟು ಮೂರು ಮನೆಗಳಲ್ಲಿ ಐದು ಶವಗಳು ಪತ್ತೆಯಾಗಿವೆ. ಮಾರಣಾಂತಿಕ ದಾಳಿಗೆ ತುತ್ತಾಗಿ ನರಳುತ್ತಿದ್ದ ಅಫಾನ್ ತಾಯಿಯನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಿರುವನಂತಪುರಂನ ಉಪನಗರವಾದ ಅಫಾನ್ ವೆಂಜರಮೂಡಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅಫಾನ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತನಗೆ ಯಾರೂ ಸಹಾಯ ಮಾಡದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಅಫಾನ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ದುಬೈನಲ್ಲಿ ಅಂಗಡಿ ಹೊಂದಿರುವ ತನ್ನ ತಂದೆ 75 ಲಕ್ಷ ರೂ ಸಾಲ ಮಾಡಿದ್ದರಿಂದ, ತಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಅಫಾನ್ ಹೇಳಿದ್ದಾನೆ. ಅಲ್ಲದೇ ಈ ಆರ್ಥಿಕ ಸಂಕಷ್ಟದಿಂದ ತನ್ನನ್ನು ಪಾರು ಮಾಡುವಲ್ಲಿ ಯಾರೂ ಸಹಾಯ ಮಾಡದಿದ್ದಾಗ ಅವರೆಲ್ಲರನ್ನೂ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಅಫಾನ್ ಪೊಲೀಸರಿಗೆ ತಿಳಿಸಿದ್ದಾನೆ.
ಇನ್ನು ಅಫಾನ್ ತನ್ನ ಕುಟುಂಬದವರನ್ನು ಮತ್ತು ತನ್ನ ಗೆಳತಿಯನ್ನು ಕೊಲೆ ಮಾಡಿರುವ ಸುದ್ದಿ, ವೆಂಜರಮೂಡಿನ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಅಫಾನ್ ಮೃದುಭಾಷಿಯ ಉತ್ತಮ ವ್ಯಕ್ತಿಯಾಗಿದ್ದ ಎನ್ನುವ ಸ್ಥಳೀಯರು, “ತನ್ನ 13 ವರ್ಷದ ತಮ್ಮನನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ.ಆದರೆ ಆತನನ್ನೂ ಕೊಲೆ ಮಾಡಿರುವುದನ್ನು ನಂಬಲಾಗುತ್ತಿಲ್ಲ..” ಎಂದು ಹೇಳುತ್ತಾರೆ.