ಹುಬ್ಬಳ್ಳಿ : ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ವ್ಯಾಪಕವಾಯಿತು. ಇದು ನಂತರದ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೂ ಕಾರಣವಾಯಿತು ಎಂದು ವಿಷ್ಲೇಶಿಸಲಾಯಿತು. ಆದರೆ ಅಂದು ಪ್ರತ್ಯೇಕ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿ ಗದಗಿನ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳಿದ್ದರು. ಆದರೆ ಇದಕ್ಕೆ ವಿರೋಧವಾಗಿದ್ದ ವೀರೈಶೈವ ಮಠಾಧೀಶರ ತಂಡಕ್ಕೆ ಮುಂಚೂಣಿಯಲ್ಲಿ ಈಗಿನ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳಿದ್ದರು. ಆದರೆ ದಿಂಗಾಲೇಶ್ವರ ಶ್ರೀಗಳ ವಿರೋಧ ತೋಂಟದ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾದರೂ ಇನ್ನು ಮುಗಿದಿಲ್ಲ ಎನ್ನುವುದು ಸ್ವತ: ದಿಂಗಾಲೇಶ್ವರ ಶ್ರೀಗಳ ಮಾತಿನಿಂದ ಗೊತ್ತಾಗುತ್ತಿದೆ.
ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀಗಳ ದಿನವನ್ನು ಭಾವೈಕ್ಯತೆ ದಿನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಯಾರದೋ ಮನವಿಗೆ ಬೆಲೆ ಕೊಟ್ಟು ಹೇಳಿಕೆ ನೀಡಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ಕಾರಣವಾಗಿದೆ.
ನಾಡಿನ ನೆಲ, ಜಲ, ಭಾಷೆ, ಭಾವೈಕ್ಯತೆ ವಿಚಾರವಾಗಿ ತೋಂಟದ ಸಿದ್ಧಲಿಂಗ ಶ್ರೀಗಳ ಕೊಡುಗೆ ಅಪಾರ ಹಾಗು ಅನನ್ಯ. ಆದಾಗ್ಯೂ ತಾತ್ವಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ. ಲಿಂಗೈಕ್ಯರಾದ ಮೇಲೂ ಮುಖ್ಯ ಮಂತ್ರಿಗಳ ಹೇಳಿಕೆಗೆ ಒಂದು ಮಠದ ಭಕ್ತರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಹೇಳಿದ್ದು ಎಷ್ಟು ಸರಿ? ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.
ಇತ್ತಿಚೆಗಷ್ಟೆ ಸಿಎಂ ಅವರು ಗದಗನಲ್ಲಿ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಐಕ್ಯಮಂಟಪ ಲೋಕಾರ್ಪಣೆ ವೇಳೆ ಸಿದ್ದಲಿಂಗ ಶ್ರೀಗಳ ಹೆಸರಲ್ಲಿ ಭಾವೈಕ್ಯ ದಿನ ಆಚರಣೆ ಹೇಳಿಕೆ ನೀಡಿದ್ದರು.
ಆದರೆ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ನೀಡಿದ್ದು ಆಘಾತಕಾರಿ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾವೈಕ್ಯತೆಯ ಹೆಸರಾಗಿದ್ದ ಶಿರಹಟ್ಟಿ ಪರಂಪರೆಯನ್ನು ಸಿಎಂ ತಿಳಿದುಕೊಂಡಿಲ್ಲ. ರಾಜ್ಯದಲ್ಲಿ ಯಾವ ಮಠಗಳು ಭಾವೈಕ್ಯತೆಗೆ ಹೆಸರಾಗಿದೆ ಎಂಬುದನ್ನು ಸಿಎಂ ನೆನಪಿಟ್ಟುಕೊಳ್ಳಬೇಕಿದೆಯಂತೆ. ಸಿಎಂ ಅವರೇ ನೀವು ಶಿರಹಟ್ಟಿ ಮಠಕ್ಕೆ ಬಹಳ ಸಲ ಬಂದಿದ್ದೀರಿ. ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಘೋಷಿರುವುದು ಸರಿಯಲ್ಲ. ಎರಡು ವರ್ಷದ ಹಿಂದೆ ವೀರಶೈವ, ಲಿಂಗಾಯತ ಸಮುದಾಯ ಎರಡು ಭಾಗ ಎಂದು ಹೇಳುತ್ತಿದ್ದರು. ಆದರೇ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿದ್ದವರನ್ನು ನೀವು ಹೇಗೆ ಭಾವೈಕ್ಯತೆ ಮೂರ್ತಿ ಅಂತ ಹೇಳುತ್ತಿರಿ? ಅಷ್ಟೇ ಅಲ್ಲದೇ ಒಂದು ಸಮುದಾಯದವರನ್ನು ಇಬ್ಭಾಗ ಮಾಡಿದವರನ್ನು ಭಾವೈಕ್ಯತೆ ಎಂದು ಹೇಗೆ ಹೇಳುತ್ತಿರಿ ಎಂಬುದು ದಿಂಗಾಲೇಶ್ವರ ಶ್ರೀಗಳ ಪ್ರಶ್ನೆಯಾಗಿದೆ.
ನೀವು ನೀಡಿದ ಹೇಳಿಕೆ ನಮ್ಮ ಸಮಾಜಕ್ಕೆ ಕೊಡಲಿ ಪೆಟ್ಟು ಕೊಟ್ಟಂತಿದೆ. ಸದಾಕಾಲವೂ ಆರ್.ಎಸ್.ಎಸ್ ಸಂಘ ಪರಿಹಾರ ವಿರೋಧ ಮಾಡುವ ಸ್ವಾಮೀಜಿಗೆ ಹೇಗೆ ಹೊಗಳುತ್ತಿರಿ?
ಆ ಸ್ವಾಮಿಗಳು ಆರ್.ಆರ್. ಎಸ್ ಸಂಘಪರಿವಾರವನ್ನು ವಿರೋಧ ಮಾಡುತ್ತಾ ಬಂದಿದ್ದರು. ಹೀಗಾಗಿ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಶ್ರೀಗಳು ನುಡಿದರು. ಹೇಳಿಕೆ ವಾಪಸ್ ಪಡೆಯದಿದ್ದರೆ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ.
ಸಿಎಂ ನೀಡಿರುವ ಹೇಳಿಕೆ ಹಿಂಪಡೆಯದಿದ್ದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೇಂದು ಎಚ್ಚರಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಗೆ ಪತ್ರ ಬರೆಯುವುದಾಗಿ ಹೇಳಿದರು.
ಆದರೆ ಕೋಮುಸೌಹಾರ್ಧತೆಗೆ ಹೆಸರಾದ ಶಿರಹಟ್ಟಿ ಮಠಕ್ಕೆ ಪೀಠಾಧಿಪತಿಯಾದ ಮೇಲೂ ದಿಂಗಾಲೇಶ್ವರ ಶ್ರೀಗಳಿಗೆ ಸಂಘಪರಿವಾರದ ಮೇಲೆ ವ್ಯಾಮೋಹ ಹೋಗಿಲ್ಲ. ಶಿರಹಟ್ಟಿ ಮಠ ಹಿಂದೂ-ಮುಸ್ಲೀಂ ಎರಡೂ ಧರ್ಮದ ಅಚರಣೆ ಭಾವೈಕ್ಯ ಮಠ. ಹೀಗಿದ್ದಾಗ್ಯೂ ಆರ್.ಎಸ್.ಎಸ್.ಗೆ ವಿರೋಧ ಮಾಡಿದ್ದರಿಂದ ಸಿಎಂ ದಿನಾಚರಣೆ ಘೋಷಿಸಿದ್ದು ತಪ್ಪು ಎಂದು ಹೇಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.