ಬೆಂಗಳೂರು,ಸೆ. 20-
ಗುತ್ತಿಗೆದಾರನಿಗೆ ಬೆದರಿಕೆ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಿಜೆಪಿ ಶಾಸಕ ಮುನಿರತ್ನ ಮತ್ತೆ ಜೈಲು ಪಾಲಾಗಿದ್ದಾರೆ
ಇವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಹಾಗೂ ಹನಿ ಟ್ರ್ಯಾಪ್ ಆರೋಪ ಪ್ರಕರಣದಲ್ಲಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮುನಿರತ್ನ ಪರ ವಕೀಲರು ಜಾಮೀನು ಪ್ರತಿಯನ್ನು ಜೈಲಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಎಲ್ಲ ಪ್ರಕ್ರಿಯೆ ಮುಗಿದ ಕೂಡಲೇ ಜೈಲಿನಿಂದ ಹೊರಬಂದ ಮುನಿರತ್ನ ಅವರನ್ನು ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದರು.
ಅತ್ಯಾಚಾರ ಆರೋಪ ಪ್ರಕರಣ ಹಿನ್ನಲೆಯಲ್ಲಿ ಮುನಿರತ್ನ ಅವರನ್ನು ವಶಕ್ಕೆ ಪಡೆಯಲು ಕಗ್ಗಲಿಪುರ ಪೊಲೀಸರು ನಿನ್ನೆ ರಾತ್ರಿಯಿಂದಲೂ ಜೈಲು ಬಳಿ ಬೀಡುಬಿಟ್ಟಿದ್ದರು.
ಕಳೆದ 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ.
ಅಕ್ರಮಗಳು ಬೆಳಕಿಗೆ:
ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು, ಬೆಳಕಿಗೆ ಬರುತ್ತಿದೆ. ಮುನಿರತ್ನ ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ ಎಂದು ಅತ್ಯಾಚಾರ ಸಂತ್ರಸ್ತೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು. ಅತ್ಯಾಚಾರ ಸಂತ್ರಸ್ತೆ ಮೂಲಕ ಹನಿಟ್ರ್ಯಾಪ್ಗೆ ಯತ್ನಿಸಿದ್ದರು. ಹನಿಟ್ರ್ಯಾಪ್ಗೆ ಅಮಾಯಕ ಹೆಚ್ಐವಿ ಸೋಂಕಿತರನ್ನೂ ಬಳಸಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಇದೀಗ ಕೇಳಿಬಂದಿವೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಾತಿ ನಿಂದನೆ ದಾಳ:
ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಜಾತಿ ನಿಂದನೆ ಕೇಸ್ಗಳ ದುರ್ಬಳಕೆ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಮುನಿರತ್ನ ಜಾತಿ ನಿಂದನೆ ಕೇಸ್ಗಳನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಪ್ರಭಾವ ಬಳಸಿ ಜಾತಿ ನಿಂದನೆ ಕೇಸ್ಗಳನ್ನು ದಾಖಲಿಸುತ್ತಿದ್ದರು. ಈ ಹಿಂದೆ ಆರ್ಆರ್ ನಗರದಲ್ಲಿ ಹಲವರ ವಿರುದ್ಧ ಜಾತಿ ನಿಂದನೆ ಕೇಸ್ಗಳು ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.
Previous Articleಇದೆಂತಹ ದೊಡ್ಡ ಅಕ್ರಮ ನೋಡಿ.
Next Article ಪ್ರಜ್ವಲ್ ಗೆ ಏನೂ ಗೊತ್ತಾಗಲ್ಲ ಅಂದ್ರು ರೇವಣ್ಣ.