ಬೆಂಗಳೂರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಬೆಂಗಳೂರು ನಗರಕ್ಕೆ ಹೊಂದಿಕೊಂಡ ರಾಮನಗರ ಕನಕಪುರ ಮಾಗಡಿ ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡ ಪ್ರದೇಶವನ್ನು ಇದೀಗ ರಾಮನಗರ ಜಿಲ್ಲೆ ಎಂದು ಕರೆಯಲಾಗುತ್ತಿದೆ ಇದನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದ್ದಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಾದವನ್ನು ನಿಯೋಗ ಮಂಡಿಸಿದೆ.
ಬ್ರಾಂಡ್ ಬೆಂಗಳೂರು ವಿಶ್ವ ಪ್ರಸಿದ್ಧ. ಇದರ ಲಾಭ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಗುತ್ತಿದೆ ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಗೂ ಇದರ ಲಾಭ ಸಿಗಲಿ ಅನ್ನುವುದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಅಭಿಮತ.ಹೀಗಾಗಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೋರಿದ್ದಾರೆ.
ಈ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ ನಂತರವೂ ರಾಮನಗರವನ್ನೆ ಜಿಲ್ಲಾ ಕೇಂದ್ರವಾಗಿ ಮುಂದುವರೆಸಬೇಕು ಎಂದಿದ್ದಾರೆ .
ಇದರಿಂದ ಬೆಂಗಳೂರಿಗೆ ಸಿಗುವ ಮಾನ್ಯತೆ ರಾಮನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಸಿಗಲಿದೆ. ರಾಮನಗರ ಕೂಡಾ ಬೆಂಗಳೂರಿನ ಭಾಗವೇ ಆಗುವ ಮೂಲಕ ಅಭಿವೃದ್ದಿ ಹೆಚ್ಚಾಗುತ್ತೆ ಅನ್ನುವುದು ಡಿಕೆ ಶಿವಕುಮಾರ್ ಆಶಯ.
ಬ್ರಾಂಡ್ ಬೆಂಗಳೂರಿನ ಬ್ಯಾನರ್ ಅಡಿ ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ಸೆಳೆಯಬಹುದು, ಐಟಿ, ಬಿಟಿ ಹಾಗೂ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಹೆಚ್ಚಳ ಮಾಡಬಹುದು, ಬೆಂಗಳೂರಿನ ಮೆಟ್ರೋ ರೈಲು, ಸಬ್ ಅರ್ಬನ್ ರೈಲು, ಹೈ ಡೆನ್ಸಿಟಿ ಕಾರಿಡಾರ್ಗಳನ್ನ ರಾಮನಗರಕ್ಕೂ ವಿಸ್ತರಣೆ ಮಾಡಬಹುದು.. ಜೊತೆಗೆ ರಾಮನಗರ ಜಿಲ್ಲೆಯ ತಾಲ್ಲೂಕುಗಳನ್ನ ಬೆಂಗಳೂರಿನ ಉಪ ನಗರಗಳನ್ನಾಗಿ ಅಭಿವೃದ್ಧಿ ಮಾಡಬಹುದು ಅನ್ನುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.
ರಾಮನಗರ ಜಿಲ್ಲೆಗೆ ಸೇರಿದ ಮಾಗಡಿ, ಹಾರೋಹಳ್ಳಿ ಹಾಗೂ ರಾಮನಗರ ತಾಲ್ಲೂಕುಗಳು ಬೆಂಗಳೂರಿಗೆ ಅಂಟಿಕೊಂಡಿವೆ. ಈ ಹಿಂದೆ ಇವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದವು. ಆದರೆ, 2007ರಲ್ಲಿ ರಾಮನಗರ ಜಿಲ್ಲೆ ರಚನೆ ಬಳಿಕ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲ್ಲೂಕುಗಳನ್ನು ಸೇರಿಸಿ ಒಂದು ಜಿಲ್ಲೆ ಮಾಡಲಾಯ್ತು. ಇದೀಗ ಹಾರೋಹಳ್ಳಿ ಕನಕಪುರದಿಂದ ಬೇರ್ಪಟ್ಟು ರಾಮನಗರ ಜಿಲ್ಲೆಯ 5ನೇ ತಾಲ್ಲೂಕಾಗಿದೆ.
ರಾಮನಗರ ಜಿಲ್ಲೆ ಹೆಸರು ಬದಲಾಗಬೇಕಿದೆ, ಯಾಕೆ ಗೊತ್ತಾ..?
Previous Articleಬಿಪಿಎಲ್ ಕಾರ್ಡ್ ಬೇಕೆಂದವರಿಗೆ ಸಿಹಿ ಸುದ್ದಿ.
Next Article ದರ್ಶನ್ ಗೆ ಜೈಲೂಟ ಸೇರುತ್ತಿಲ್ಲವಂತೆ

