ಬೆಂಗಳೂರು, ಮೇ 14:
ಗ್ರಾಹಕ ದೂರು ನಿರ್ವಹಣೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಡಿಜಿಟಲ್ ಪೋರ್ಟಲ್ ಪರಿಚಯಿಸಲು ಬೆಸ್ಕಾಂ ಮುಂದಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಹಕರ ದೂರುಗಳ ನಿರ್ವಹಣೆಗೆ ಕಾರ್ಪೋರೇಟ್ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ. ಗ್ರಾಹಕರ ಹಕ್ಕಿಗೆ ಒತ್ತು ನೀಡಿ, ದೂರು ನಿರ್ವಹಣೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಡಿಜಿಟಲ್ ಪೋರ್ಟಲ್ ಸಿದ್ದಪಡಿಸಲು ಬೆಸ್ಕಾಂ ಮುಂದಾಗಿದೆ”, ಎಂದು ಅವರು ತಿಳಿಸಿದರು.
ಕೆಇಆರ್ಸಿ ಆದೇಶದ ಸೂಚನೆ ಮೇರೆಗೆ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯನ್ನು ಸ್ಥಾಪಿಸಲಾಗಿದೆ. ಗ್ರಾಹಕರು ದೂರಿಗೆ ತ್ವರಿತವಾಗಿ ಸ್ಪಂದಿಸಿ, ಸೇವೆಯ ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳು ಮುಂದಾಗಬೇಕು,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕರೆ ನೀಡಿದರು.
“ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯ ಸ್ಪಷ್ಟ ನಿರ್ದೇಶನದಂತೆ ಗ್ರಾಹಕರು ದೂರುಗಳು ಬಂದಲ್ಲಿ ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕಿದೆ. ಜಿಲ್ಲಾ ಹಂತದ ವೇದಿಕೆಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್, ಇಇ ಹಾಗೂ ಸ್ವತಂತ್ರ ಸದಸ್ಯರು ಇರಲಿದ್ದಾರೆ. ಕಾರ್ಪೋರೇಟ್ ಕಚೇರಿಯ ಸಿಜಿಆರ್ಎಫ್ ವೇದಿಕೆಯಲ್ಲಿ ದೂರು ಇತ್ಯರ್ಥವಾಗದಿದ್ದರೆ ಕೆಇಆರ್ಸಿ ವಿದ್ಯುಚ್ಛಕ್ತಿ ಓಂಬುಡ್ಸ್ಮನ್ ಬಳಿ ದೂರು ಸಲ್ಲಿಸಿ ನಿಗದಿತ ಕಾಲಮಿತಿಯೊಳಗೆ ಪರಿಹಾರ ಪಡೆಯಬಹುದಾಗಿದೆ”, ಎಂದು ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕೆಇಆರ್ಸಿಯ ಅಧ್ಯಕ್ಷ ಪಿ.ರವಿಕುಮಾರ್, “ದೂರಿನ ಇತ್ಯರ್ಥದ ಸಂದರ್ಭದಲ್ಲಿ ಗ್ರಾಹಕರಿಗೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸಬೇಕು. ಮುಖ್ಯವಾಗಿ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರೆ ಕಾರ್ಯಾಗಾರ ಯಶಸ್ವಿಯಾದಂತೆ,”ಎಂದರು.
Previous Articleಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?
Next Article ಬಣ್ಣದ ಮಾತಿಗೆ ಮರುಳಾಗಿ ಕಾರು ಕಳೆದುಕೊಂಡ