ಬೆಂಗಳೂರು ,ಮೇ.29:
ರಾಜ್ಯ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಬಿಜೆಪಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುಗಿ ಬೀಳುತ್ತಿದ್ದರೂ ಪರಿಷತ್ ಸದಸ್ಯರು ಚಕಾರ ಎತ್ತುತ್ತಿಲ್ಲ ಎಂದು ಅಕ್ರೋಶಗೊಂಡಿದೆ.
ಪ್ರಮುಖವಾಗಿ ಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ,ಸಿ.ಟಿ.ರವಿ ಮತ್ತು ರವಿಕುಮಾರ್ ಅವರುಗಳು ಸೈದ್ಧಾಂತಿಕವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ಪ್ರಹಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ ವಿರುದ್ಧ ಪ್ರಹಾರ ನಡೆಸಿದರೂ ಪರಿಷತ್ತಿನ ಯಾವುದೇ ಕಾಂಗ್ರೆಸ್ ಸದಸ್ಯರೂ ತಿರುಗೇಟು ನೀಡುತ್ತಿಲ್ಲ ಎಂದು ಹೈಕಮಾಂಡ್ ಅಸಮಾಧಾನಗೊಂಡಿದೆ.
ಉನ್ನತ ಅಧಿಕಾರಿಗಳನ್ನು ಬಿಜೆಪಿಯ ರವಿಕುಮಾರ್ ಅವರು ಪಾಕಿಸ್ತಾನಕ್ಕೆ ಸೇರಿದವರು ಎಂದು ಹೇಳಿಕೆ ಕೊಡುತ್ತಾರೆ ಕಲಬುರ್ಗಿಯನ್ನು ಕೇಂದ್ರವಾಗಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಮಂತ್ರಿ ಪ್ರಿಯಾಂಕ್ ಖರ್ಗೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿದರೂ ಪರಿಷತ್ತಿನ ಕಾಂಗ್ರೆಸ್ ಸದಸ್ಯರು ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ ಸದಸ್ಯರ ಈ ಕಾರ್ಯವೈಖರಿಯನ್ನು ನೋಡಿದರೆ ಇವರು ನಮ್ಮ ಪಕ್ಷದ ಸದಸ್ಯರಾ ಎಂಬ ಅನುಮಾನ ಮೂಡುತ್ತದೆ ಎಂದು ಹಿರಿಯ ನಾಯಕ ಬಿಕೆ ಹರಿಪ್ರಸಾದ್
ಹೈಕಮಾಂಡ್ ಗೆ ವಿವರವಾದ ಪತ್ರ ಬರೆದಿದ್ದಾರೆ.
ಯಾವುದ್ಯಾವುದೋ ಕಾರಣಕ್ಕೆ ಯಾರು ಯಾರನ್ನೋ ಎಲ್ಲೆಲ್ಲಿಂದಲೂ ಕರೆದುಕೊಂಡು ಬಂದು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಇವರಿಗೆ ಪಕ್ಷದ ತತ್ವ ಸಿದ್ಧಾಂತ ಗೊತ್ತಿಲ್ಲ ನಾಯಕತ್ವದ ಬಗ್ಗೆ ಅರಿವೇ ಇಲ್ಲ ಹೀಗಾಗಿ ಪಕ್ಷ ಮತ್ತು ನಾಯಕತ್ವವನ್ನು ಪ್ರತಿಪಕ್ಷ ನಾಯಕರು ಟೀಕೆಸುತ್ತಿದ್ದರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ ಇಂತಹವರಿಂದ ಪಕ್ಷ ಮತ್ತು ಸರ್ಕಾರಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.
ತಮ್ಮ ಪತ್ರದ ಜೊತೆಯಲ್ಲಿ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ. ರವಿ, ರವಿಕುಮಾರ್ ಅವರು ನೀಡಿರುವ ಹೇಳಿಕೆಗಳ ಪತ್ರಿಕಾ ತುಣುಕುಗಳು ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಲಗತ್ತಿಸಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೆವಾಲ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸುರ್ಜೇವಾಲಾ ಅವರು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಪರಿಷತ್ತು ಕಾಂಗ್ರೆಸ್ ಸದಸ್ಯರ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ನಾಯಕರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪ್ರಮುಖವಾಗಿ ಮಂತ್ರಿ ಬೋಸರಾಜು ಹಿರಿಯ ನಾಯಕ ಸಲೀಂ ಅಹಮದ್, ಐವಾನ್ ಡಿಸೋಜಾ ಸೇರಿದಂತೆ ಹಲವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಹಿರಿಯ ನಾಯಕರಾಗಿ ತಾವುಗಳು ಪಕ್ಷದ ಎಲ್ಲಾ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಸರ್ಕಾರದ ವಿರುದ್ಧ ಮತ್ತು ಪಕ್ಷದ ಸಿದ್ಧಾಂತದ ವಿರುದ್ಧ ಮಾತನಾಡುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡುವಂತೆ ಮಾಡಬೇಕಿತ್ತು ಸರ್ಕಾರದ ಅಧಿಕಾರಿಯನ್ನು ಪಾಕಿಸ್ತಾನ ಎಂದು ಕರೆದ ಕ್ರಮವನ್ನು ಹೇಗೆ ಸಮರ್ಥಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಎಲ್ಲಿಯೋ ಇರುವವರನ್ನು ಕರೆದುಕೊಂಡು ಬಂದು ಸದಸ್ಯತ್ವ ನೀಡಿದರೆ ಹೀಗೆ ಆಗುವುದು ಎಂದು ಹೇಳಿದ ಸುರ್ಜೇವಾಲ ಅವರು, ಪಕ್ಷ ಮತ್ತು ಸರ್ಕಾರಕ್ಕೆ ಯಾವುದೇ ಪ್ರಯೋಜನವಿಲ್ಲದ ಪರಿಷತ್ ಸದಸ್ಯರನ್ನು ಮುಲಾಜಿಲ್ಲದೆ ಬದಲಾಯಿಸಲಾಗುವುದು ಅವರಿಂದ ರಾಜೀನಾಮೆ ಪಡೆಯಲು ಚಿಂತನೆ ನಡೆಸಿದೆ ಎಂದು ಎಚ್ಚರಿಸಿರುವುದಾಗಿ ಗೊತ್ತಾಗಿದೆ.
ರಾಜ್ಯಪಾಲರಿಗೆ ದೂರು:
ಹೈಕಮಾಂಡ್ ಆಕ್ರೋಶದಿಂದ ಬೆಚ್ಚಿದ ಈ ನಾಯಕರು ಬೆಳ್ಳಂ ಬೆಳಿಗ್ಗೆಯೇ ರಾಜಭವನದ ಕಧ ತಟ್ಟಿದರು. ಮಂತ್ರಿ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಲಬುರ್ಗಿ ಜಿಲ್ಲಾಧಿಕಾರಿಯನ್ನು ನಿಂದಿಸಿರುವ ರವಿಕುಮಾರ್ ಅವರನ್ನು ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ
ವಿಧಾನ ಪರಿಷತ್ನ ಆಡಳಿತ ಪಕ್ಷದ ನಾಯಕರಾದ ಎನ್. ಎಸ್. ಭೋಸರಾಜು, ಹಾಗೂ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರ ನೇತೃತ್ವದ ನಿಯೋಗ ರಾಜ್ಯಪಾಲರ ನ್ನು ಭೇಟಿಯಾಗಿ ದೂರು ಸಲ್ಲಿಸಿತು.
ಬಳಿಕ ಭೋಸರಾಜು ಅವರು ಮಾತನಾಡಿ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಬೀದಿಯಲ್ಲಿ ಸಂವಿಧಾನ ವಿರೋಧಿಯಾಗಿ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿ ಸದಸ್ಯರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ದಲಿತ ಸಮುದಾಯವನ್ನು ಹೀಗೆಳೆಯುವಂತಹ ಹೇಳಿಕೆ ನೀಡಿರುವ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಉಚ್ಚಾಟನೆ ಮಾಡಬೇಕು. ಹಾಗೆಯೇ, ಅಧಿಕಾರಿಯ ಬಗ್ಗೆ ಹೇಳಿಕೆ ನೀಡಿರುವ ರವಿಕುಮಾರ್ ಅವರ ವಿರುದ್ದ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಸಲೀಂ ಅಹ್ಮದ್ ಅವರು ಮಾತನಾಡಿ, ವಿರೋದ ಪಕ್ಷದ ನಾಯಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಛಲವಾದಿ ನಾರಾಯಣ್ ಸ್ವಾಮಿ ವಿರುದ್ದ ಕ್ರಮ ಕೈಗೊಳ್ಳಬೇಕು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ಆಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಐಎಎಸ್ ಅಧಿಕಾರಿಯನ್ನು ಪಾಕಿಸ್ತಾನದಿಂದ ಬಂದಿದ್ದಾರಾ? ಎಂದು ಹೇಳಿರುವ ರವಿಕುಮಾರ್ ಅವರನ್ನು ಅಮಾನತ್ತಗೊಳಿಸಬೇಕು. ಇವರಿಬ್ಬರೂ ಸಮಾಜದಲ್ಲಿ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ಹೇಳಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯರಾದ ವಸಂತ್ಕುಮಾರ್, ಅನಿಲ್ ಕುಮಾರ್ ಎಂ.ಎಲ್. ಜಗದೇವ ಗುತ್ತೇದಾರ್, ಎಸ್. ರವಿ, ಡಿ.ಟಿ. ಶ್ರೀನಿವಾಸ್, ದಿನೇಶ್ ಗೂಳಿಗೌಡ, ಚನ್ನರಾಜ್ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ಪುಟ್ಟಣ್ಣ, ನಸೀರ್ ಅಹ್ಮದ್, ಗೋವಿಂದರಾಜು, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ
ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.
Previous Articleಬಿಕೆ ಹರಿಪ್ರಸಾದ್ ಗೆ ಸಿಎಂ ಕೊಟ್ಟ ಜವಾಬ್ದಾರಿ ಏನು ಗೊತ್ತಾ ?
Next Article ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.