ಬೆಂಗಳೂರು,ಮೇ.8-ಸುಮಾರು 40 ಸಾವಿರ ಹಣ ಹೂಡಿಕೆ ಮಾಡಿದ್ದಕ್ಕೆ ಮೂರೇ ಗಂಟೆಯಲ್ಲಿ 4.50 ಲಕ್ಷ ಲಾಭ ಬಂದಿದೆ ಎಂಬುದಾಗಿ ಉಲ್ಲೇಖಿಸಿ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೆಸರಿನಲ್ಲಿ ಸುಳ್ಳು ಪೋಸ್ಟ್ ಹಾಕಿದ ವಂಚನೆ ಜಾಲದ ಕೃತ್ಯ ಬೆಳಕಿಗೆ ಬಂದಿದೆ.
ಶಂಕರ ಬಿದರಿ ಅವರ ಫೇಸ್ಬುಕ್ ಖಾತೆಯಲ್ಲಿ ಇಂದು ಬೆಳಿಗ್ಗೆ ಸುಳ್ಳು ಸಂದೇಶ ಪ್ರಕಟಿಸಲಾಗಿದೆ. ಹೂಡಿಕೆ ಮಾಹಿತಿಗೆ ವಿದೇಶಿ ಮಹಿಳೆಯೊಬ್ಬರನ್ನು ಸಂಪರ್ಕಿಸುವಂತೆ ಪೋಸ್ಟ್ನಲ್ಲಿ ಬರೆದು ಲಿಂಕ್ ಸಹ ನಮೂದಿಸಲಾಗಿದೆ.
ವಿಕ್ಟೋರಿಯಾ36ಟ್ರೇಡರ್ ಎಂಬುವವರು ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದರು. ಇವರು ಬಿಟ್ ಕಾಯಿನ್ ಮೈನಿಂಗ್ ಪರಿಣಿತರು ಎಂಬುದು ಗೊತ್ತಾಯಿತು. ಹೀಗಾಗಿ, ಅವರ ಸಲಹೆಯಂತೆ 40 ಸಾವಿರ ಹೂಡಿಕೆ ಮಾಡಿದ್ದೆ. ಕೇವಲ ಮೂರೇ ಗಂಟೆಯಲ್ಲಿ ನನಗೆ 4.50 ಲಕ್ಷ ಲಾಭದ ಹಣ ವಾಪಸು ಬಂದಿದೆ. ಅದನ್ನು ನನ್ನ ಖಾತೆಯಿಂದ ಡ್ರಾ ಮಾಡಿಕೊಂಡಿದ್ದೇನೆ ಎಂದು ಪೋಸ್ಟ್ನಲ್ಲಿ ಬರೆದು ಕೆಲ ಸ್ಕಿನ್ಶಾರ್ಟ್ಗಳನ್ನು ಲಗತ್ತಿಸಲಾಗಿದೆ.
ಶಂಕರ ಬಿದರಿ ಅವರು ಯಾರೋ ಅಪರಿಚಿತರು ನನ್ನ ಖಾತೆ ಹ್ಯಾಕ್ ಮಾಡಿ, ಸುಳ್ಳು ಪೋಸ್ಟ್ ಹಾಕಿದ್ದಾರೆ ಪ್ರಕಟಿಸಿದ್ದಾರೆ. ಇದನ್ನು ಯಾರೂ ನಂಬಬಾರದು. ಎಚ್ಚರಿಕೆ ವಹಿಸಬೇಕು. ಸುಳ್ಳು ಪೋಸ್ಟ್ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಸುಳ್ಳು ಪೋಸ್ಟ್ ಬಗ್ಗೆ ಶಂಕರಬಿದರಿ ಪ್ರತಿಕ್ರಿಯೆ ನೀಡಿದ್ದಾರೆ.