ಬೆಂಗಳೂರು.ಫೆ,1:
ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಕಲಿ ಫೊಟೋ ಹರಿಬಿಡಲಾಗಿದೆ ಎಂದು ಆರೋಪಿಸಿ ನಟ ಪ್ರಕಾಶ್ ರೈ ಅವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ಬೆಳಿಗ್ಗೆ ದೂರು ನೀಡಿದ್ದಾರೆ.
ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್ಬುಕ್ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಂಭಮೇಳದಲ್ಲಿ ನಟ ಪ್ರಕಾಶ್ ರೈ ಅವರು ಪವಿತ್ರ ಸ್ನಾನ ಮಾಡುತ್ತಿದ್ದಾರೆ ಎಂದು ಹೇಳಿ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ನಟ ಪ್ರಕಾಶ್ ರೈ ಡೋಂಗಿ ಎಂದು ಟೀಕಿಸಲಾಗಿದೆ.
ಈ ಬಗ್ಗೆ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರಕಾಶ್ ರೈ, ‘ತಪ್ಪು ಪ್ರಚಾರ ಮಾಡುವುದು, ಅನುಮತಿ ಇಲ್ಲದೆ ಯಾರದೋ ಫೋಟೊಗಳನ್ನು ಬಳಸುವುದು ಅಕ್ಷಮ್ಯ ಅಪರಾಧ’ ಎಂದರು.
ಪ್ರಶಾಂತ್ ಸಂಬರಗಿ ನಟಿಯರೂ ಸೇರಿದಂತೆ ಅನೇಕರಿಗೆ ಈ ರೀತಿ ತೊಂದರೆ ನೀಡಿದ್ದು, ಆತನಿಗೆ ಪಾಠ ಕಲಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗವೇಕು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ’ ಎಂದು ತಿಳಿಸಿದರು.
ಕುಂಭಮೇಳದಲ್ಲಿನ ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿದಾಗ ‘ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆಂದು ಅವರ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು’ ಎಂದರು.
Previous Articleಕುಮಾರಸ್ವಾಮಿ ವಿರುದ್ಧ ತನಿಖೆಗೆ ಎಸ್ ಐ ಟಿ
Next Article ಇವರೇ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ.