ಬೆಂಗಳೂರು.
ಸಾಲ ಪಡೆದು ಮರು ಪಾವತಿ ಮಾಡದವರ ಕುರಿತು
ಒಂದು ಗಾದೆ ಮಾತಿದೆ ಅದೇನೆಂದರೆ ಕೊಟ್ಟವನು ಕೋಡಂಗಿ,ತಗೊಂಡವನು ವೀರಭದ್ರ ಅಂತಾ.. ಆದರೆ ರಾಜ್ಯದ ಮೈಕ್ರೋ ಫೈನಾನ್ಸ್ ಗಳ ವಿಷಯದಲ್ಲಿ ಇದು ಉಲ್ಟಾ ಆಗಿದೆ. ಇಲ್ಲಿ ಸಾಲ ಪಡೆದವರು ಕೋಡಂಗಿಗಳಾಗಿದ್ದಾರೆ.ಈ ಸಂಸ್ಥೆಗಳಿಂದ ಸಾಲ ಪಡೆದು ಸಕಾಲಕ್ಕೆ ಬಡ್ಡಿ ಸಮೇತ ಮರುಪಾವತಿ ಮಾಡಲೇಬೇಕು ತಪ್ಪಿದರೆ ಅವರು ನೀಡುವ ಕಿರುಕುಳ ಹೇಳಲಾಗದು.
ಇದನ್ನು ಅನುಭವಿಸಲಾಗದೆ ಗ್ರಾಮೀಣ ಪ್ರದೇಶದ ಅನೇಕ ಮಂದಿ ಊರು ತೊರೆದರೆ, ಆತ್ಮಹತ್ಯೆಗೆ ಶರಣಾದವರ ಸಂಖ್ಯೆಯೂ ಕಡಿಮೆ ಇಲ್ಲ.
ಇದೀಗ ಇಂತಹ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಸಾಲ ಕೊಟ್ಟು ಮರುಪಾವತಿಗೆ ಹಿಂಸೆ ಕೊಟ್ಟರೆ ಅಂತಹವರಿಗೆ ಮೂರು ವರ್ಷ ಜೈಲು ಮತ್ತು ಒಂದು ಲಕ್ಷ ದಂಡ ವಿಧಿಸಲು ಮುಂದಾಗಿದೆ.
ಈ ಉದ್ದೇಶದಿಂದ ‘ಕರ್ನಾಟಕ ಮೈಕ್ರೊ ಫೈನಾನ್ಸ್ ಕಂಪನಿಗಳು ಹಣ ಲೇವಾದೇವಿ ನಿಯಂತ್ರಣ ಮಸೂದೆ- 2025’ ಅನ್ನು ಸಿದ್ಧಪಡಿಸಿದೆ.
ರಾಜ್ಯದೊಳಗೆ ಸಾಲದ ವಹಿವಾಟು ನಡೆಸುವ ಎಲ್ಲ ಕಂಪನಿಗಳೂ ರಾಜ್ಯ ಸರ್ಕಾರದ ‘ನೋಂದಣಿ ಪ್ರಾಧಿಕಾರ’ದಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ. ನೋಂದಣಿ ಮಾಡದೇ ವಹಿವಾಟು ನಡೆಸುವ ಸಾಲದಾತರಿಗೆ ಮೂರು ವರ್ಷದವರೆಗೆ ವಿಸ್ತರಿ ಸಬಹುದಾದ ಜೈಲು ಮತ್ತು ಒಂದು ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸುವುದಕ್ಕೂ ಮಸೂದೆ ಅವಕಾಶ ಕಲ್ಪಿಸಿದೆ.
ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ.
ದಿನ, ವಾರ, ತಿಂಗಳು ಮತ್ತು ವರ್ಷದ ಆಧಾರದಲ್ಲಿ ಬಡ್ಡಿಗೆ ಸಾಲ ಕೊಡುವವರು
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಏಜೆನ್ಸಿಗಳು, ಸಂಸ್ಥೆಗಳು, ವ್ಯಕ್ತಿಗಳುಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ನೋಂದಾಯಿತವಾದ ಮತ್ತು ನೋಂದಣಿ ಆಗದಿರುವ ಹಣಕಾಸು ಸಂಸ್ಥೆಗಳು ಇದರ ವ್ಯಾಪ್ತಿಗೆ ಒಳಪಡಲಿವೆ.
ಕಾಫಿ ಎಸ್ಟೇಟ್, ಎಣ್ಣೆ ಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಲ ಪಡೆಯುವ ಮಿತಿ ನಿಗದಿಪಡಿಸಲಾಗಿದ್ದು, ಅವರ ಆದಾಯದ ಮೂಲ ಒಂದೇ ಇದ್ದರೆ ಒಟ್ಟು ₹30 ಸಾವಿರ, ಒಂದಕ್ಕಿಂತ ಹೆಚ್ಚು ಆದಾಯದ ಮೂಲ ಇದ್ದರೆ ಅಂಥವರಿಗೆ ₹50 ಸಾವಿರ ಸಾಲ ಪಡೆಯುವ ಮಿತಿ ನಿಗದಿಪಡಿಸಲಾಗಿದೆ.
ವಿಳಂಬ ಪಾವತಿಗೆ ದಂಡ ವಿಧಿಸುವಂತಿಲ್ಲ. ಸಾಲ ಒಪ್ಪಂದ ಮಾಡಿಕೊಂಡಿರಬೇಕು, ವಿಧಿಸುವ ಬಡ್ಡಿ ದರದ ಮಾಹಿತಿಯನ್ನು ಒಳಗೊಂಡ ಸಾಲ ಮಂಜೂರಾತಿ ಕಾರ್ಡ್ ಅನ್ನು ನೀಡಬೇಕು. ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರು ಸಾಲ ವಸೂಲಿಗೆ ಏಜೆಂಟರನ್ನು ನಿಯೋಜಿಸುವಂತಿಲ್ಲ. ವಸೂಲಿಗೆ ಮನೆಗೆ ಹೋಗಬಾರದು, ಅಲ್ಲದೆ, ಯಾವುದೇ ಬಲವಂತದ ಕ್ರಮ ಅನುಸರಿಸಬಾರದು. ಸಾಲಗಾರರನ್ನು ಅಥವಾ ಅವರ ಕುಟುಂಬದ ಸದಸ್ಯರನ್ನು ಅವಮಾನ ಮಾಡಬಾರದು. ಈ ರೀತಿಯ ವರ್ತನೆ ತೋರಿಸಿದ ಸಾಲದಾತರ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದೂ ಈ ಮಸೂದೆಯಲ್ಲಿದೆ.


1 ಟಿಪ್ಪಣಿ
betmgm offers betmgm-play betmgm Alaska