ಬೆಳಗಾವಿ, ಡಿ.6- ರಾಜ್ಯ ಬಿಜೆಪಿ ನಾಯಕರ ವಿರುದ್ದ ಬಾಯಲ್ಲಿ ಸುಡು ಗುಂಡುಗಳನ್ನು ಎಸೆಯುತ್ತಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವಾದದ ಬಾಂಬ್ ಸಿಡಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿದ್ದಾರೆ ಸದ್ಯದಲ್ಲೇ ಆ ವ್ಯಕ್ತಿಯ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಐಎಸ್ಐ ಹಾಗೂ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಇದು ಅತ್ಯಂತ ದುರ್ದೈವ ಎಂದು ಹೇಳಿದರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಅದು ಹೇಗೆ ಜಾರಿ ಮಾಡುತ್ತೀರಿ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ . ಇಂಥವರ ಬಗ್ಗೆ ಕಾಳಜಿ ತೋರುವ ಮುಖ್ಯಮಂತ್ರಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಅವರ ಜೊತೆ ಯಾರು,ಯಾರು ಇರಬೇಕೆಂದು ಮೊದಲು ತೀರ್ಮಾನವಾಗುತ್ತದೆ. ಅಲ್ಲದೆ ಅವರ ಪೂರ್ವಾಪರ ಹಿನ್ನೆಲೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವಾಗ ಪೊಲೀಸ್ ಇಲಾಖೆ ಹಾಗೂ ಗುಪ್ತಚರಕ್ಕೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ಮೌಲ್ವಿಯ ಹಿನ್ನೆಲೆ ಏನೆಂಬುದನ್ನು ಒಂದು ವಾರದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ.
ಮುಖ್ಯಮಂತ್ರಿಯವರು ಇಂಥವರ ಜೊತೆ ವೇದಿಕೆ ಹಂಚಿಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಣ ಹಂಚುತ್ತೇನೆ ಎಂದು ಹೇಳಿದ್ದಾರೆ. ನೀವು ಕೇವಲ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ನಿಮಗೆ ಕೇವಲ ಅವರೊಬ್ಬರೇ ಮಾತ್ರ ಮತ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣಬೇಕು. ಕೇವಲ ವೋಟ್ ಬ್ಯಾಂಕ್ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಹೀಗೆ ತುಷ್ಟೀಕರಣ ಮಾಡಿದ್ದರಿಂದಲೇ ನಿಮ್ಮ ಪರಿಸ್ಥಿತಿ ಏನಾಯಿತು ಎಂಬುದನ್ನು ಪಂಚರಾಜ್ಯ ಚುನಾವಣೆಯಿಂದಾದರೂ ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.