ಭೋಪಾಲ್(ಮಧ್ಯಪ್ರದೇಶ),ಜು.12– ನದಿಯಲ್ಲಿ ಸ್ನಾನ ಮಾಡಲು ಹೋದ 8 ವರ್ಷದ ಬಾಲಕನನ್ನು ಮೊಸಳೆ ನುಂಗಿರುವ ಘಟನೆ ಶಿಯೋಪುರದಲ್ಲಿ ನಡೆದಿದೆ.
ಶಿಯೋಪುರದ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದೆ. ನಂತರ ಆತನನ್ನು ಮೊಸಳೆ ನದಿಗೆ ಎಳೆದೊಯ್ದಿದೆ. ಇದೇ ವೇಳೆ ಸ್ಥಳದಲ್ಲಿಯೇ ಇದ್ದ ಸ್ಥಳೀಯರು ಕೂಡಲೇ ಆತನ ಕುಟುಂಬಸ್ಥರಿಗೆ ಕರೆ ಮಾಡಿ, ದೊಣ್ಣೆ, ಹಗ್ಗ ಹಾಗು ಬಲೆಯಿಂದ ಮೊಸಳೆಯನ್ನು ಹಿಡಿದು ನದಿಯಿಂದ ಹೊರಗೆ ಎಳೆದಿದ್ದಾರೆ.
ನಂತರ ಘಟನೆ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಗ್ರಾಮಸ್ಥರ ಕೈಯಿಂದ ರಕ್ಷಿಸಲು ಪ್ರಯತ್ನಿಸಿದರು. ಆದರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. ಮೊಸಳೆಯ ಹೊಟ್ಟೆಯಲ್ಲಿ ನಮ್ಮ ಮಗ ಇನ್ನೂ ಜೀವಂತವಾಗಿರಬಹುದು. ಮೊಸಳೆ ಬಾಲಕನನ್ನು ಉಗುಳಿದ ನಂತರವಷ್ಟೇ ಬಿಡುತ್ತೇವೆ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು.
ಘಟನೆ ಕುರಿತಂತೆ ಮಾತನಾಡಿದ ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ವೀರ್ ಸಿಂಗ್ ತೋಮರ್ ಅವರು, ಬಾಲಕ ಸ್ನಾನ ಮಾಡಲು ನದಿಯ ಆಳಕ್ಕೆ ಇಳಿದಿದ್ದಾನೆ. ಈ ವೇಳೆ ಬಾಲಕನನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಂತರ ಬಲೆ ಮತ್ತು ಕೋಲುಗಳನ್ನು ಬಳಸಿ ಜನ ಮೊಸಳೆಯನ್ನು ಹಿಡಿದಿದ್ದಾರೆ. ಈ ಬಗ್ಗೆ ಜಾಗೃತಿ ವಹಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.