ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯಲ್ಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.
ಜಿಲ್ಲೆಯ ಸಪ್ತನದಿಗಳ ಒಳ ಹರಿವಿನಲ್ಲಿ ದಿನೇ ದಿನೇ ಹೆಚ್ಚಳ ಕಂಡುಬರುತ್ತಿದೆ. ಕೃಷ್ಣಾ ನದಿ ಒಳ ಹರಿವು ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ದಾಟಿದೆ. ಕೃಷ್ಣಾ ನದಿಗೆ ನೀರು ಹೆಚ್ಚಾದ ಹಿನ್ನಲೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ದತ್ತ ದೇವಸ್ಥಾನ ಮುಳುಗಡೆಯಾಗಿದೆ. ಒಟ್ಟು ಕೃಷ್ಣಾ ನದಿಗೆ 1 ಲಕ್ಷ 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜೊತೆಗೆ ವೇದಗಂಗಾ, ದೂಧಗಂಗಾ ನದಿಯಿಂದ 22 ಸಾವಿರ ಕ್ಯೂಸೆಕ್ ನೀರು ಬಂದಿದೆ. ಇನ್ನು ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು 8 ಕೆಳ ಹಂತದ ಸೇತುವೆಗಳು ಜಲಾವೃತ್ತಗೊಂಡಿವೆ.
ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ,
ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ, ಮಮದಾಪುರ-ಹುನ್ನರಗಿ, ಕುನ್ನೂರ-ಬಾರವಾಡ ಗ್ರಾಮಗಳ ಸೇತುವೆಗಳು ಜಲಾವೃತ್ತಗೊಂಡಿವೆ. ಸೇತುವೆಗಳ ಜಲಾವೃತ್ತದಿಂದ ಜನ ಸಂಚಾರ ಅಸ್ತವ್ಯಸ್ತವಾಗಿದೆ. ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆಮಾಡಿದೆ.