ಬೆಂಗಳೂರು,ಜು.15- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಈ ಸಭೆಗಳನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಸಬೇಕು ಎಂದು ಬಿಜೆಪಿ ಚಿಂತನಾ ಸಭೆ ಅಭಿಪ್ರಾಯ ಪಟ್ಟಿದೆ.
ಪ್ರತಿಪಕ್ಷ ಕಾಂಗ್ರೆಸ್ ಆ.3ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಪರ್ಯಾಯವಾಗಿ ಬಿಜೆಪಿ ಕೂಡ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ಸಮಾವೇಶ ನಡೆಸಬೇಕೆಂಬ ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ.
ವಿಧಾನಸಭೆ ಚುನಾವಣೆಗೆ ಎಂಟು ತಿಂಗಳು ಬಾಕಿ ಉಳಿದಿರುವುದರಿಂದ ಚುನಾವಣೆಗೆ ಸಿದ್ಧತೆ ಹಾಗು ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ಹಾಗೂ ಸದ್ಯ ರಾಜ್ಯದ ರಾಜಕೀಯ ಪರಿಸ್ಥಿತಿ ಹಾಗು ಮುಂದೆ ಆಗಬಹುದಾದ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ರೆಸಾರ್ಟ್ ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆರ್ಎಸ್ಎಸ್ ಸಹ ಕಾರ್ಯವಾಹಕ ಮುಕುಂದ್, ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುೀರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಭಾಗವಹಿಸಿದ್ದರು.
ಇಲ್ಲಿ ಒಟ್ಟು ಮೂರು ಸಭೆಗಳನ್ನು ನಡೆಸಲಾಯಿತು. ಮೊದಲ ಕೋರ್ ಕಮಿಟಿ ಸಭೆ ನಡೆಯಿತು ಇದರಲ್ಲಿ ಪಕ್ಷವು ಯಾವ ಯಾವ ಜಿಲ್ಲೆಗಳಲ್ಲಿ ಸಂಘಟನೆ ಕೊರತೆ ಎದುರಿಸುತ್ತಿದೆಯೋ ಅಂತಹ ಕಡೆ ಮತ್ತಷ್ಟು ಬಲಪಡಿಸುವ ಕುರಿತು ಅವಲೋಕನ ಮಾಡಲಾಯಿತು.
ಎರಡನೇ ಹಂತದಲ್ಲಿ ಸಚಿವರ ಸಭೆ ನಡೆಯಿತು ಇದರಲ್ಲಿ ಸಚಿವರ ಇಲಾಖೆಯಲ್ಲಿನ ಪ್ರಗತಿ, ಜನಪ್ರೀಯತೆ ಹಾಗು ಪಕ್ಷಕ್ಕೆ ಇವರ ಕುರಿತು ಸಮಾಲೋಚನೆ ನಡೆಸಲಾಯಿತು, ಸಚಿವರಿಗೆ ಹೈಕಮಾಂಡ್ ನೀಡಿರುವ ಸಂದೇಶವನ್ನು ಸಂತೋಷ್ ತಿಳಿಸಿದರು.
ಮೂರನೇ ಹಂತದ ಆರ್ ಎಸ್ಎಸ್-ಬಿಜೆಪಿ ನಾಯಕರ ಸಭೆ ನಡೆಯಿತು.ಇದರಲ್ಲಿ ಇತ್ತೀಚೆಗಿನ ಹಿಜಾಬ್ ವಿವಾದ, ಆಜಾನ್ ವಿವಾದ, ದೇಗುಲ ಮಸೀದಿ ವಿಚಾರದಲ್ಲಿ ಪಕ್ಷ ಇಟ್ಟ ಹೆಜ್ಜೆ ಕುರಿತು ಅವಲೋಕಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಮೇಲೆ ಕೇಳಿಬಂದಿರುವ ಕೆಲವು ಗಂಭೀರ ಆರೋಪಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಕ್ಷ ಸಂಘಟನೆ ಹಾಗು ಸರ್ಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ಸಂಘ ಪರಿವಾರದ ನಾಯಕರು ಸಲಹೆ ಮಾಡಿದರೆಂದು ಗೊತ್ತಾಗಿದೆ.
ಪಕ್ಷ ಹಾಗೂ ಸರ್ಕಾರದ ನಡುವಿನ ಸಮನ್ವಯತೆ, ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ, ಇತ್ತೀಚಿನ ಚುನಾವಣಾ ಫಲಿತಾಂಶದ ಪರಿಣಾಮ, ಭವಿಷ್ಯದ ಚುನಾವಣೆಗಳಿಗೆ ಪಕ್ಷ ಸನ್ನದ್ದಗೊಳಿಸುವುದು ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರೆಂದು ತಿಳಿದು ಬಂದಿದೆ.
Previous Articleರಾಜಭವನ ತಲುಪಿದ ಸಂತೋಷ್ ಸಾವು ಪ್ರಕರಣ..
Next Article MonkeyPox ಕಾಯಿಲೆಯಿಂದ ಎಚ್ಚರದಿಂದಿರಿ .. !!