ಬೆಂಗಳೂರು,ಜು.15-ಮಧ್ಯರಾತ್ರಿ ಬೈಕ್ ಗಳಲ್ಲಿ ಜಾಲಿ ರೈಡ್ ಲಾಂಗ್ ಡ್ರೈವ್ ಹೋಗುವ ಪ್ರೇಮಿಗಳು ಯುವಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಗ್ಯಾಂಗ್ ನ್ನು ಬಂಧಿಸುವಲ್ಲಿ ದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದೇವನಹಳ್ಳಿಯ ಅಕ್ಕುಪೇಟೆಯ ಅನಿಲ್ ಕುಮಾರ್ ಅಲಿಯಾಸ್ ದೇವು(28) ಸುಬ್ರಮಣಿ ಅಲಿಯಾಸ್ ಸುಟ್ಟ (19) ಹಾಗು ಪವನ್ ಕುಮಾರ್ ಅಲಿಯಾಸ್ ಪೋಲಿ(24)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಬಂಧಿತರಿಂದ 10ಗ್ರಾಂಚಿನ್ನ, ಮಾರುತಿ ಕಾರು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಗಳು ನಗರದ ಹೊರವಲಯದಲ್ಲಿ ಮಧ್ಯರಾತ್ರಿ ಬೈಕ್ ಗಳಲ್ಲಿ ಜಾಲಿ ರೈಡ್ ಲಾಂಗ್ ಡ್ರೈವ್ ಹೋಗುವ ಪ್ರೇಮಿಗಳು ಯುವಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಕಳೆದ ಜುಲೈ 8ರಂದು ಬೈಕ್ ನಲ್ಲಿ ಬರುತ್ತಿದ್ದ ಯುವಕ- ಯುವತಿಯರನ್ನು ಅಡ್ಡಗಟ್ಟಿದ್ರು. ಅಲ್ಲದೆ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಿ ಕತ್ತಿನಲ್ಲಿ ಚಿನ್ನದ ಚೈನ್ ಕಸಿದು, ಯುವತಿ ಮುಂದೆಯೇ ಹಲ್ಲೆ ಮಾಡಿ ನಂತರ ಹತ್ತಿರದ ಎಟಿಎಂ ಗೆ ಕರೆದುಕೊಂಡು ಹೋಗಿ 15 ಸಾವಿರ ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದರು.
ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಮತ್ತವರ ಬಂಧಿಸುವಲ್ಲಿ ಯಶಸ್ವಿಯಾಗಿದೆ.