ಬಳ್ಳಾರಿ,ಜ.30-
ಕಳೆದ ಕೆಲವು ದಿನಗಳ ಹಿಂದೆ ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಹಾಡು ಹಾಡಲಿಲ್ಲ ಎಂದು ತೆಲುಗಿನ ಗಾಯಕಿ ಮಂಗ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾಸುವ ಮುನ್ನವೇ ಕನ್ನಡ ಹಾಡು ಹಾಡಲಿಲ್ಲ ಎಂದು ಬಾಲಿವುಡ್ನ ಖ್ಯಾತ ಗಾಯಕ Kailash Kher ಅವರ ಮೇಲೆ ಬಾಟಲಿ ದಾಳಿ ನಡೆಸಿರುವ ಘಟನೆ ಹಂಪಿಯಲ್ಲಿ ನಡೆದಿದೆ.
ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಸಂಗೀತ ಕಚೇರಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಖೇರ್ ಅವರು ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಕನ್ನಡ ಗೀತೆ ಹಾಡುವಂತೆ ಮನವಿ ಮಾಡಿಕೊಂಡರು. ಅದರ ಬಗ್ಗೆ ಅಷ್ಟಾಗಿ ಗಮನಕೊಡದ ಅವರು ಹಿಂದಿ ಹಾಡುಗಳನ್ನು ಹಾಡಲು ಮುಂದಾದಾಗ ಸಭಿಕರು ಖೇರ್ ಅವರ ಮೇಲೆ ನೀರಿನ ಬಾಟಲಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದ Kailash Kher ಕೊಂಚ ವಿಚಲಿತರಾದರೂ ತಲೆ ಕೆಡಿಸಿಕೊಳ್ಳದೆ ಗಾಯನ ಮುಂದುವರೆಸಿದರು. ಗಾಯನ ಮುಗಿದ ಕೂಡಲೇ ಅಧಿಕಾರಿಯೊಬ್ಬರು ವೇದಿಕೆ ಮೇಲೆ ತೂರಿ ಬಂದಿದ್ದ ಅರ್ಧ ತುಂಬಿದ್ದ ನೀರಿನ ಬಾಟಲಿಯನ್ನು ಹೊರ ಎಸೆದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

