ಬೆಂಗಳೂರು, ಸೆ.3 – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಿಂದೂ ದೇವಾಲಯಗಳನ್ನು ಕಡೆಗಣಿಸಲಾಗಿದೆ. ಧಾರ್ಮಿಕ ದತ್ತಿ ಸಂಸ್ಥೆಯಿಂದ ದೇವಸ್ಥಾನದ ಅನುದಾನವನ್ನು ತಡೆಹಿಡಿಯಲಾಗಿದೆ ಎಂಬ ಆರೋಪ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು.
ಇದಕ್ಕೆ ಉತ್ತರ ನೀಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಆದೇಶಿಸುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ರಾಜ್ಯಸರ್ಕಾರ ದೇವಸ್ಥಾನಗಳಿಗೆ ಮೊದಲ ಕಂತಿನ ತಸ್ತೀಕ್ ಹಣವನ್ನು ಬಿಡುಗಡೆ ಮಾಡಿದೆ.
2023-24 ನೇ ಸಾಲಿನಲ್ಲಿ ಮೊದಲ ಕಂತಾಗಿ 77,85,54,497 ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ಯಾವುದೇ ನಿಬಂಧನೆಗಳಿಲ್ಲದೆ ತುರ್ತಾಗಿ ಸಂಬಂಧಪಟ್ಟ ಸಂಸ್ಥೆ ದೇವಾಲಯಗಳಿಗೆ ತಹಸೀಲ್ದಾರ್ ಅವರ ಖಾತೆಯಿಂದ ಬಿಡುಗಡೆ ಮಾಡಬೇಕು. ಅಲ್ಲಿಂದ ಅರ್ಚಕರ ಖಾತೆಗೆ ಜಮಾಗೊಳ್ಳಬೇಕೆಂದು ಸೂಚಿಸಲಾಗಿದೆ.
ಬಿಡುಗಡೆಯಾದ ಹಣ ವಿನಿಯೋಗಿಸಿದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಅಧಿಕಾರಿಗಳು ತಹಸೀಲ್ದಾರರಿಂದ ಕೆಎಫ್ಸಿ ನಮೂನೆ 62-ಬಿ ಯಲ್ಲಿ ವೆಚ್ಚದ ತಃಖ್ತೆಯನ್ನು ಪಡೆದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.