ಬೆಳಗಾವಿ, ಡಿ.5- ರಾಜ್ಯದ ಕೆಲವು ಕಡೆ ಕಾಣಸಿಕೊಂಡಿದೆ ಎಂದು ಹೇಳಲಾಗುತ್ತಿರುವ ಚೈನಾ ವೈರಸ್ ಎಂಬ ಹೆಸರಿನ ನ್ಯುಮೋನಿಯಾ ತಡೆಗೆ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ.ಕೇಂದ್ರ ಸರ್ಕಾರದ ಮಾರ್ಗಸೂಚಿ ಎಲ್ಲೆಡೆ ಪಾಲಿಸಲಾಗುತ್ತಿದು,ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸರ್ಕಾರದ ಮಾರ್ಗ ಸೂಚಿ ಎನೇ ಇರಲಿ ಜನ ಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಚೈನಾದಲ್ಲಿ ಕಂಡುಬಂದಿರುವ ನ್ಯುಮೋನಿಯಾ ಮಾದರಿಯ ವೈರಸ್ ಬಗ್ಗೆ ಆತಂಕ ಪಡುವುದು ಅನಗತ್ಯ. ಆಸ್ಪತ್ರೆಗಳಲ್ಲಿ ತೀವ್ರ ನಿಗಾಘಟಕ, ವೆಂಟಿಲೇಟರ್, ಆಕ್ಸಿಜನ್, ಮಾಸ್ಕ್, ಪಿಪಿ ಇ ಕಿಟ್ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೋಂಕಿನ ಹಾವಳಿ ತೀವ್ರಗೊಂಡಾಗ ಅದನ್ನು ನಿಯಂತ್ರಿಸಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಕೂಡ ಚೀನಾ ನ್ಯುಮೋನಿಯಾ ವೈರಸ್ ಬಗ್ಗೆ ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿವೆ. ಹೀಗಾಗಿ ಜನರು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.