ನವದೆಹಲಿ – ಕೋಟ್ಯಾಂತರ ಭಕ್ತರು,ಆಸಕ್ತರು ಕುತೂಹಲದಿಂದ ಕಾಯುತ್ತಿರುವ ಪರಮ ಪವಿತ್ರ ವಿದ್ಯಮಾನಕ್ಕೆ ದಿನಗಣನೆ ಆರಂಭವಾಗಿದೆ.ದೇಶದ ಜನತೆ ಉತ್ತರ ಪ್ರದೇಶದ ಅಯೋಧ್ಯೆಯತ್ತ ತನ್ನ ಗಮನ ಕೇಂದ್ರೀಕರಿಸಿದೆ.
ಇದಕ್ಕೆ ಪ್ರಮುಖ ಕಾರಣ ರಾಮಮಂದಿರ ಉದ್ಘಾಟನೆ ಹಾಗೂ ಭಗವಾನ್ ಶ್ರೀ ರಾಮ ಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಸಮಾರಂಭ ಇದೇ 22ರಂದು ನಡೆಯಲಿರುವ ಈ ಅಭೂತಪೂರ್ವ ಸಮಾರಂಭ ಜನರ ಗಮನ ಸೆಳೆದಿರುವ ಬೆನ್ನಲ್ಲೇ ವಿವಾದಗಳ ಮೂಲಕವೂ ಗಮನ ಸೆಳೆಯುತ್ತಿದೆ.
ಈ ವಿವಾದಗಳ ಸಾಲಿಗೆ ಈಗ ಹೊಸ ಸೇರ್ಪಡೆ ಶಂಕರಪೀಠಗಳು. ಆದಿ ಶಂಕರಾಚಾರ್ಯರು (Shankaracharya) ಸ್ಥಾಪಿಸಿದ ಈ ಪೀಠಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ಪೀಠಗಳ ಪೀಠಾಧಿಪತಿಗಳು ಶಂಕರಾಚಾರ್ಯರನ್ನು ಕೂಡಾ ಅತ್ಯಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ.
ಶಂಕರಾಚಾರ್ಯರನ್ನು ಹಿಂದುತ್ವ ಸಿದ್ಧಾಂತದ ಪ್ರಮುಖ ಪ್ರಭಾವಿಗಳು ಎಂದು ಪರಿಗಣಿಸಲಾಗುತ್ತದೆ. ದೊಡ್ಡ ಜನಸಮೂಹದ ಬೆಂಬಲವನ್ನು ಹೊಂದಿರುವ ಇವರು, ದೇಶದಲ್ಲಿರುವ ಸಂತರು ಮತ್ತು ಸ್ವಾಮೀಜಿಗಳಲ್ಲಿಯೇ ಹೆಚ್ಚಿನ ಗೌರವಾತಿಥ್ಯಕ್ಕೂ ಪಾತ್ರರಾಗುತ್ತಾರೆ.
ಇಂತಹ ಶಂಕರಾಚಾರ್ಯರು ಇದೀಗ ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಅಪೂರ್ಣ ನಿರ್ಮಾಣದ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯೇ ಹಿಂದುತ್ವದ ತತ್ವಗಳು ಹಾಗೂ ಸನಾತನ ಧರ್ಮಕ್ಕೆ ವಿರುದ್ಧವಾದುದು’ ಎಂದು ಉತ್ತರಾಖಂಡದ ಬದರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್ ಮತ್ತು ಪುರಿ ಮೂಲದ ಗೋವರ್ಧನ ಪೀಠದ ಶಂಕರಾಚಾರ್ಯರಾದ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಹೇಳಿದ್ದಾರೆ.ರಾಮಮಂದಿರವು ರಾಮನಂದಿ ಪಂಥಕ್ಕೆ ಸೇರುವುದೇ ಆಗಿದ್ದರೆ, ಅದರ ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಮೂರ್ತಿ ಪ್ರತಿಷ್ಠಾಪನೆಗೆ ಈ ಇಬ್ಬರು ಶಂಕರಾಚಾರ್ಯರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ‘ಹಿಂದುತ್ವದ ತತ್ವ ಹಾಗೂ ಸಿದ್ಧಾಂತಗಳಿಗೆ ವಿರುದ್ಧವಾಗಿದೆ’ ಎಂದು ಇಬ್ಬರೂ ಶಂಕರಾಚಾರ್ಯರು ಬಲವಾಗಿ ಪ್ರತಿಪಾದಿಸಿದ್ದಾರೆ.
ಒಬ್ಬ ವ್ಯಕ್ತಿಯ ಎಷ್ಟೇ ಗೌರವಾನ್ವಿತ ಸ್ಥಾನದಲ್ಲಿಯೇ ಇರಲಿ ಅವರ ನಡವಳಿಕೆ ಸರಿಯಲ್ಲ ಎನಿಸಿದಾಗ ಖಂಡಿತವಾಗಿ ವಿರೋಧಿಸಬೇಕು.
ಮೋದಿ ಜೀ ಅವರು ದೇವಸ್ಥಾನ ಉದ್ಘಾಟನೆ ಮಾಡುತ್ತಾರೆ, ಮೂರ್ತಿಯನ್ನು ಸ್ಪರ್ಶಿಸುತ್ತಾರೆ. ನಾನೇನು ಮಾಡಲಿ, ಚಪ್ಪಾಳೆ ತಟ್ಟಲಾ? ನನ್ನ ಸ್ಥಾನಕ್ಕೂ ಸ್ವಲ್ಪ ಘನತೆ ಇದೆ. ಧಾರ್ಮಿಕ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯದ ಕಾರ್ಯಕ್ರಮಕ್ಕೆ ನಾನು ಏಕೆ ಹೋಗಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ, ಶೃಂಗೇರಿ ಮಠದ ಶಂಕರಾಚಾರ್ಯರಾಗಿರುವ ಸ್ವಾಮಿ ಭಾರತೀ ತೀರ್ಥ ಮತ್ತು ಗುಜರಾತ್ ಮೂಲದ ದ್ವಾರಕಾ ಪೀಠದ ಶಂಕರಾಚಾರ್ಯರಾಗಿರುವ ಸ್ವಾಮಿ ಸದಾನಂದ ಸರಸ್ವತಿ ಅವರು, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ.
ALSO READ | Latest Kannada News