ಬೆಂಗಳೂರು, ಫೆ.17: ರಾಜ್ಯ ಸರ್ಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳೂ (Gram Panchayat) ಬಜೆಟ್ ಸಿದ್ದಪಡಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಂತೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಸೂಚಿಸಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು,ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಬಾಬ್ತುಗಳಡಿ ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡಂತೆ ಗ್ರಾಮ ಪಂಚಾಯತಿ ಆಯವ್ಯಯ (ಪಂಚಾಯತ್ ಬಜೆಟ್) ಕಡ್ಡಾಯವಾಗಿ ತಯಾರಿಸಿ ಮಾರ್ಚ್ 10ನೆ ತಾರೀಕಿನ ಒಳಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಶಾಸನಬದ್ಧ ಅನುದಾನ, ವಿವಿಧ ಯೋಜನೆಗಳಡಿ ದೊರೆಯುವ ಅನುದಾನದ ಜೊತೆಗೆ ಸ್ವಂತ ಸಂಪನ್ಮೂಲ ಸಂಗ್ರಹಿಸಲು ಅವಕಾಶವಿರುವುದರಿಂದ ಈ ಎಲ್ಲ ಮೂಲಗಳನ್ನು ಕ್ರೋಢೀಕರಿಸಿ ಗ್ರಾಮ ಪಂಚಾಯತಿಗಳು ಆಯವ್ಯಯವನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಲು ಸಚಿವರು ಪತ್ರದಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ವೈಯಕ್ತಿಕವಾಗಿ ಬರೆದಿರುವ ಪತ್ರಗಳಲ್ಲಿ ಕೋರಿದ್ದಾರೆ.
ಗ್ರಾಮ ಪಂಚಾಯತಿ ಸಭೆಯಲ್ಲಿ ಅನುಮೋದನೆಯಾದ ಆಯವ್ಯಯವನ್ನು ತಾಲ್ಲೂಕು ಪಂಚಾಯಿತಿಗೆ ಕಳುಹಿಸಿಕೊಡಬೇಕು ಎಂದು ಪತ್ರದಲ್ಲಿ ಹೇಳಿರುವ ಸಚಿವರು ಗ್ರಾಮ ಪಂಚಾಯತಿ ಆಯವ್ಯಯವು (ಪಂಚಾಯತ್ ಬಜೆಟ್) ಲಭ್ಯ ಅನುದಾನ, ಅದು ಕೈಗೊಳ್ಳುವ ಜನಪರ ಯೋಜನೆಗಳು ಹಾಗೂ ತನ್ನ ಅಭಿವೃದ್ಧಿ ಪರ ಆಶಯಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂದಿದ್ದಾರೆ.
ರಾಜ್ಯದ ಬಹಳಷ್ಟು ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಆಯವ್ಯಯ ತಯಾರಿಸಿ ಅನುಮೋದನೆ ಪಡೆಯದೇ ವೆಚ್ಚ ಭರಿಸುತ್ತಿರುವುದು ಲೆಕ್ಕಪರಿಶೋಧನಾ ವರದಿಗಳಿಂದ ತಿಳಿದು ಬಂದಿದ್ದು, ಗ್ರಾಮ ವಿಕೇಂದ್ರಿಕರಣದ ಆಶಯಗಳಂತೆ ಪಂಚಾಯತಿಗಳು ಬಜೆಟ್ ಮಂಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

1 ಟಿಪ್ಪಣಿ
One move and the whole room turns in your favor – https://xperindopril.com , This is where heartbeats become jackpots .