ಬೆಂಗಳೂರು,ಮೇ .17-
ರಾಜ್ಯದಲ್ಲಿ ತೀವ್ರ ಕೋಲಾಹಲ ಮತ್ತು ಆಕ್ರೋಶ ಸೃಷ್ಟಿಸಿರುವ ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹತ್ಯೆ ನಡೆದ ನಂತರ ಪರಾರಿಯಾಗಿದ್ದ ಪಾತಕೆ ಗಿರೀಶ್ ಪೊಲೀಸ್ ಬಲೆಗೆ ಬಿದ್ದಿರುವ ರೀತಿ ರೋಚಕವಾಗಿದೆ.
ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಬಳಿಕ ಆ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಿರೀಶ್, ವಿಶ್ವ
ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅದು ಹೇಗಂದರೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರು ಮೂಲದ ಮಹಿಳೆಯೊಬ್ಬರ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾನೆ.ಈ ವೇಳೆ ತಾಳ್ಮೆ ಕಳೆದುಕೊಂಡು ಆ ಮಹಿಳೆಗೆ ಚಾಕು ತೊರಿಸಿದ್ದಾನೆ. ಇದರಿಂದ ರೈಲಿನಲ್ಲಿದ್ದ ಸಹ ಪ್ರಯಾಣಿಕರು ರೊಚ್ಚಿಗೆದ್ದು,ಆತನನ್ನು ಹಿಡಿದು ಥಳಿಸಿದ್ದರು.
ನಂತರ ಆತ ದಾವಣಗೆರೆ ತಾಲೂಕಿನ ಮಾಯಕೊಂಡ ರೈಲು ನಿಲ್ದಾಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದ. ಈ ವೇಳೆ, ಸಹ ಪ್ರಯಾಣಿಕರು ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು, ಈತನನ್ನು ಅಂಜಲಿ ಹತ್ಯೆ ಆರೋಪಿ ಎಂದು ಗುರುತು ಹಿಡಿದು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾಯಕೊಂಡಕ್ಕೆ ಬಂದ ಹುಬ್ಬಳ್ಳಿ ಪೊಲೀಸರು ತಡರಾತ್ರಿ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಮೈಸೂರಿನಲ್ಲಿದ್ದ ಆರೋಪಿ:
ಆರೋಪಿ ಗಿರೀಶ್ ಮೈಸೂರಿನ ಮಹಾರಾಜ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ.ಯುವತಿ ಅಂಜಲಿ ಮತ್ತು ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು.15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿಯೂ ಕೆಲವು ಮೂಲಗಳು ಮಾಹಿತಿ ನೀಡಿವೆ. ವಾರದ ಮುಂಚೆ ಯುವತಿ 2 ಸಾವಿರ ರೂ ಹಣ ಕೇಳಿದ್ದಳು. ಗಿರೀಶ್ ಒಂದು ಸಾವಿರ ರೂಪಾಯಿ ಪೋನ್ ಪೇ ಮಾಡಿದ್ದ. ಆ ನಂತರ ನಿನ್ನ ಜೊತೆ ಯಾವುದೇ ಸಂಬಂಧ ಬೇಡ ಎಂದು ಹೇಳಿ ಆಕೆ ಗಿರೀಶನ ನಂಬರ್ ಅನ್ನು ಅಂಜಲಿ ಬ್ಲಾಕ್ ಲಿಸ್ಟ್ ಮಾಡಿದ್ದರು ಎನ್ನಲಾಗಿದೆ.
ಆ ಬಳಿಕ ಯಾವುದೇ ಫೋನ್ ಕರೆ ಕೂಡ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆರೋಪಿ ಸಿಟ್ಟಿಗೆದ್ದು ಮೈಸೂರಿನಿಂದ ಹುಬ್ಬಳ್ಳಿ ಗೆ ಬಂದು ಕೊಲೆ ಮಾಡಿದ್ದಾನೆ. ಅಲ್ಲಿಂದ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಹಾವೇರಿಗೆ ತಲುಪಿದ್ದ. ಹಾವೇರಿಯಿಂದ ಮೈಸೂರಿಗೆ ಹೋಗಿ ಮಹಾರಾಜ್ ಹೋಟೆಲ್ಲಿನಲ್ಲಿ ಮಲಗಿದ್ದ.
ಇದಾದ ಬಳಿಕ ಆತ ಮೈಸೂರಿನಿಂದ ಹುಬ್ಬಳ್ಳಿಗೆ ವಾಪಸ್ ಆಗಲು ಬರುತ್ತಿದ್ದಾಗ ಗೊಂದಲ ಮಾಡಿಕೊಂಡು ರೈಲ್ವೆ ಪೊಲೀಸರ ವಶಕ್ಕೆ ಬಿದ್ದಿದ್ದಾನೆ.
ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ಹುಬ್ಬಳ್ಳಿ ಪೋಲೀಸ್ ಕಮಿಷನರ್ ರೇಣುಕಾ ಸುಕುಮಾರ್
ಅವರು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನು ರಚನೆ ಮಾಡಿದ್ದೆವು. ನಿನ್ನೆ ರೈಲ್ವೆ ಪೋಲಿಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಗಿರೀಶ್ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಕೋಮಾ ಸ್ಥಿತಿಯಲ್ಲಿದ್ದಾನೆ. ರೈಲಿನಿಂದ ಏಕೆ ಕೆಳಗೆ ಬಿದ್ದ ಎಂಬುದನ್ನು ಆತನ ಹೇಳಿಕೆಯ ನಂತರವಷ್ಟೇ ತಿಳಿಯಬಹುದು ಎಂದು ತಿಳಿಸಿದರು.