ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ ಅಕ್ಕನ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.
ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭಾವನ ಹೆಸರು ಹೇಳಿ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಅಕ್ಕನ ಗಂಡನ ಹೆಸರು ಹೇಳಿದರೆ ಅವನನ್ನು ಬಂಧಿಸುತ್ತಾರೆ ಎಂದು ಸುಭಾಷ್ ಭಾವಿಸಿದ್ದ. ಈ ಮೊದಲು ಸುಭಾಷ್ ಗುಪ್ತ ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ. ಈಶಾನ್ಯ ವಿಭಾಗ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಬಳಿಕ ಆರೋಪಿಯನ್ನು ವಿಧಾನಸೌಧ ಪೊಲೀಸರ ವಶಕ್ಕೆ ಹಸ್ತಾಂತರಿಸಲಿದ್ದಾರೆ.
ಬೆದರಿಕೆ ಕರೆಯಿಂದ ಶುಕ್ರವಾರ ಬೆಳಗಿನ ಜಾವ ಏರ್ಪೋರ್ಟ್ನಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್, ಸಿಐಎಸ್ಎಪ್ ಭದ್ರತಾ ಪಡೆಯಿಂದ ಕೆಲ ಕಾಲ ಏರ್ ಲೈನ್ಸ್ ಗೇಟ್ಗಳು ಸೇರಿದಂತೆ ಏರ್ಪೋಟ್ ಟರ್ಮಿನಲ್ನಲ್ಲಿ ತೀವ್ರ ತಪಾಸಣೆ ಮಾಡಲಾಗಿದೆ. 2 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಿ ಹುಸಿ ಬಾಂಬ್ ಕರೆ ಎಂಬುದು ಖಚಿತವಾದ ಬಳಿಕ ಅಧಿಕಾರಿಗಳು, ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ.