ಕಣ್ಣು ಹಾಯಿಸಿದಷ್ಟು ಎತ್ತರ ದೃಷ್ಟಿ ನೆಟ್ಟಷ್ಟು ದೂರಕ್ಕೆ ಕಾಣಿಸ್ತಿರೋ ಬೃಹತ್ ಬ್ರಿಡ್ಜ್.. ಕಾಶ್ಮೀರ ಕಣಿವೇಲಿ ದೇಶದ ರೈಲ್ವೇ ವಿಸ್ಮಯ.. ವಿಶ್ವದಲ್ಲೇ ಅತಿ ದೊಡ್ಡ ಬ್ರಿಡ್ಜ್ ಉದ್ಘಾಟಿಸಿದ ಪ್ರಧಾನಿ ಮೋದಿ.. ಎಸ್ ವೀಕ್ಷಕರೇ, ಕಣಿವೆ ನಾಡಲ್ಲಿ ಇದೀಗ ರಸ್ತೆ, ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯೇ ಆಗ್ತಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಹರಿದು ಹೋಗೋ ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಿರೋ ಈ ಬ್ರಿಡ್ಜ್ ವಿಶ್ವವೇ ಬೆರಗುಗಣ್ಣಿಂದ ನೋಡುವಂತೆ ಮಾಡಿದೆ.
ಇದು ಕಾಶ್ಮೀರ ಕಣಿವೇಲಿ ದೇಶದ ರೈಲ್ವೇ ವಿಸ್ಮಯ ಅಂತ್ಲೇ ಹೇಳಲಾಗ್ತಿದೆ. ಅಂದ್ಹಾಗೆ ಆರ್ಟಿಕಲ್ 370 ತೆರವಾದ ನಂತ್ರ ಕಣಿವೆನಾಡಿನಲ್ಲಿ ಅಭಿವೃದ್ಧಿ ಪರ್ವವೇ ನಡೀತಿದೆ. ಪ್ರಧಾನಿ ಮೋದಿ ಈಗಾಗ್ಲೇ ಸಾವಿರಾರು ಕೋಟಿ ಅನುದಾನದ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ. ಅಚ್ಚುಕಟ್ಟು ರಸ್ತೆ, ಶಾಲೆ ಸೇತುವೆ ಒಂದಾ ಎರಡಾ ಜಮ್ಮು ಕಾಶ್ಮೀರದ ಚಿತ್ರಣ ಇದೀಗ ಮೊದಲಿನಂತಿಲ್ಲ. ಇದೀಗ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಮತ್ತೊಂದು ಕಾಮಗಾರಿ ಸಂಪೂರ್ಣಗೊಂಡು ಚೆನಾಬ್ ಸೇತುವೆ ಈಗ ಲೋಕಾರ್ಪಣೆ ಆಗಿದೆ.
ಚೆನಾಬ್ ರೈಲು ಸೇತುವೆ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ರಿಯಾಸಿ ಜಿಲ್ಲೆಯ ಚೆನಾಬ್ ನದಿಯ ಮೇಲೆ, ಭಾರತೀಯ ರೈಲ್ವೆಯ ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿದೆ. ವಿಶ್ವದ ಅತಿ ಎತ್ತರದ ಸಿಂಗಲ್-ಆರ್ಚ್ ರೈಲ್ವೆ ಸೇತುವೆ ಚೆನಾಬ್ ಬ್ರಿಡ್ಜ್ನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿ, ಬಳಿಕ ತಿರಂಗಾ ಹಿಡಿದು ಹೆಜ್ಜೆ ಹಾಕಿ ಸಂತಸಪಟ್ರು.
ಕಮಾನು ಸೇತುವೆಯು ನದಿಯ ತಳದಿಂದ 1,178 ಅಡಿ ಎತ್ತರದಲ್ಲಿದೆ, ಇದು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. 120 ವರ್ಷಗಳ ಜೀವಿತಾವಧಿ ಹೊಂದಿದೆ. ವಿಶ್ವದ ಅತಿ ಎತ್ತರದ ಬ್ರಿಡ್ಜ್ನ ಸ್ಥಿರತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿಯೇ 1,486 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 359 ಮೀಟರ್ ಎತ್ತರದಲ್ಲಿ ರೈಲ್ವೇ ಪ್ರಯಾಣ ಹೋಗೋದೆ ಖುಷಿಯ ವಿಚಾರ.
ಹಲವು ತಿಂಗಳಿಂದ ಶಾಂತಿ ನೆಲೆಸಿದ್ದ ಕಣಿವೆನಾಡಿನಲ್ಲಿ ಉಗ್ರರು ಗುಂಡಿನ ಮಳೆಗರೆದಿದ್ರು. ಆ ನಂತ್ರ ಆಪರೇಷನ್ ಸಿಂಧೂರ ಮೂಲಕ ಉತ್ತರ ಕೊಡಲಾಗಿತ್ತು. ಪಹಲ್ಗಾಂ ನಲ್ಲಿ ಉಗ್ರರ ದಾಳಿ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ಬೃಹತ್ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದ್ರು. ಅಂದ್ಹಾಗೆ ಈ ಚೆನಾಬ್ ಬ್ರಿಡ್ಜ್ ನ್ನು ಅತ್ಯಂತ ಆದುನಿಕ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿದೆ. ಹೀಗೆ ವಿಶ್ವದ ಅತ್ಯಂತ ಎತ್ತರದ ಚೆನಾಬ್ ಸೇತುವೆ ಎಂಜಿನಿಯರಿಂಗ್ ವಿಸ್ಮಯಕ್ಕೆ ನಿದರ್ಶನವಾಗಿದೆ. ಕಾಶ್ಮೀರಕ್ಕೆ ದೇಶದ ಇತರ ಭಾಗದೊಂದಿಗೆ ರೈಲು ಸಂಪರ್ಕ ಸಾಧ್ಯವಾಗಿಸ್ತಿದೆ.
ಹೇಳಿ ಕೇಳಿ ಕಾಶ್ಮೀರ ಕಣಿವೆಯಲ್ಲಿ ಉಗ್ರರು ದಾಳಿಗೆ ಸ್ಕೆಚ್ ಹಾಕ್ತಾನೆ ಇರ್ತಾರೆ. ಆಗೊಂದು ಈಗೊಂದು ಅನಾಹುತ ಸಂಭವಿಸ್ತಾನೆ ಇರ್ತವೆ. ಆದ್ರೆ ವೀಕ್ಷಕರೇ ಚೆನಾಬ್ ಬ್ರಿಡ್ಜ್ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿ ಯಾವುದೇ ಅನಾಹುತ ಸಂಭವಿಸಲ್ಲ ಅಂತಲ್ಲ. ಅನೇಕ ಸವಾಲುಗಳನ್ನ ಎದುರಿಸೋ ನಿಟ್ಟಿನಲ್ಲಿ ಲೆಕ್ಕ ಹಾಕಿ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಸ್ಫೋಟಕ ಮತ್ತು ಇನ್ನಿತರ ವಸ್ತುಗಳಿಂದ ಹಾನಿಯಾಗದಂತೆ ಟೆಕ್ನಾಲಜಿ ಅಳವಡಿಸಲಾಗಿದೆ. ಇಲ್ಲಿ ಉಗ್ರರ ದಾಳಿಗೂ ಇದು ಜಗ್ಗದಂಥ ತಂತ್ರಜ್ಞಾನ ರೂಪಿಸಲಾಗಿದೆ ಅನ್ನೋದು ಇಂಟ್ರೆಸ್ಟಿಂಗ್ ಸಂಗತಿ.
ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣ ಕಾಣಿಸುತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ 24 ಸಾವಿರ ಟನ್ಗೂ ಅಧಿಕ ಸ್ಟೀಲ್ ಬಳಕೆಯಾಗಿದೆ. ಇನ್ನೂ ಇಲ್ಲಿ ಸ್ಫೋಟ ನಿರೋಧಕ ಸ್ಟೀಲ್ನಿಂದ ನಿರ್ಮಿಸಲಾಗಿದೆ. ಹೀಗಾಗಿ ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಸೇತುವೆ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್ ತಂತ್ರಜ್ಞಾನವಿದೆ. ಇನ್ನೂ ಆನ್ಲೈನ್ ನಿರ್ವಹಣೆ ಹಾಗೂ ಅಲರ್ಟ್ ಸಿಸ್ಟಂ ಗಮನಸೆಳಿತಿವೆ.
ಸಾಮಾನ್ಯವಾಗಿ ಎತ್ತರ ಪ್ರದೇಶದಲ್ಲಿ ಗಾಳಿ ಅಬ್ಬರ ಜೋರಾಗಿರುತ್ತೆ. ಚೆನಾಬ್ ಸೇತುವೆಯನ್ನ ಪ್ರತಿಗಂಟೆಗೆ 260ವೇಗದ ಗಾಳಿ ಎದುರಿಸೋ ಸಾಮರ್ಥ್ಯದಲ್ಲಿ ನಿರ್ಮಿಸಲಾಗಿದೆ. ತೀವ್ರ ತಾಪಮಾನ, ಭೂಕಂಪ ಪರಿಣಾಮ ಎದುರಿಸಲಿದೆ. ಹಾಗೆಯೇ ನೀರಿನ ಮಟ್ಟದ ಏರಿಳಿತವೂ ಯಾವುದೇ ಎಫೆಕ್ಟ್ ಆಗದಂತೆ ರೂಪಿಸಲಾಗಿದೆ. ನೀರಿನ ಅಬ್ಬರದಿಂದ ಅಲೆಗಳ ಕಂಪನವಾದ್ರೂ ಯಾವುದೇ ಪರಿಣಾಮ ಸೇತುವೆ ಮೇಲೆ ಆಗಲ್ಲ.
ವೀಕ್ಷಕರೇ, ನೀವೂ ಚೆನಾಬ್ ಬ್ರಿಡ್ಜ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಅದ್ರಲ್ಲಿ ಮೊದಲನೆಯದ್ದಾಗಿ ಇದು, ಭಾರತದ ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞಾನದ ಹೊಸ ಆವಿಷ್ಕಾರವಾಗಿದೆ. ಈ ರಚನೆಯ ಪ್ರತಿಯೊಂದು ಬದಿಯು ಫುಟ್ಬಾಲ್ ಮೈದಾನದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಗಾತ್ರ ಹೊಂದಿದೆ. ಚೆನಾಬ್ ರೈಲು ಬ್ರಿಡ್ಜ್ ನಿರ್ಮಾಣದಲ್ಲಿ ಒಟ್ಟು 30,000 ಮೆಟ್ರಿಕ್ ಟನ್ ಉಕ್ಕನ್ನು ಬಳಸಲಾಗಿದೆ. ಇದು ಒಟ್ಟು 35,000 ಕೋಟಿ ರೂಪಾಯಿಗಳ ಯೋಜನೆ, ಎಂತಾ ಪ್ರತಿಕೂಲ ತಾಪಮಾನ ಭೂಕಂಪನ ಪರಿಣಾಮ ತಡೆಯೋ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.
ಇನ್ನೊಂದು ವಿಷ್ಯ ಅಂದ್ರೆ, ಚೆನಾಬ್ ಸೇತುವೆಯು ಜಮ್ಮುವಿನ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಹಾದುಹೋಗುತ್ತೆ. ಕತ್ರಾವನ್ನು ಬನಿಹಾಲ್ಗೆ ಸಂಪರ್ಕಿಸುತ್ತೆ. ಇದು ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ನ ಭಾಗ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ ಹೆಚ್ಚಿಸೋ ಗುರಿ ಹೊಂದಿದೆ.
ಚೆನಾಬ್ ಸೇತುವೆ ಮಾರ್ಗ ವೈಷ್ಣೋದೇವಿ ಪುಣ್ಯ ಕ್ಷೇತ್ರಕ್ಕೆ ಹೊಸ ರಹದಾರಿಯಾಗಿದೆ. ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆ ತರಲಿದೆ. ವೈಷ್ಣೋದೇವಿ ಭಕ್ತರಿಗೆ ಅನುಕೂಲವಾಗುವಂತೆ ರೈಲು ಸಂಚಾರ ಇರಲಿದೆ.
ಇನ್ನೂ ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿ ವಹಿಸಿತ್ತು. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿತ್ತು. ಈ ರೂಟ್ನಲ್ಲಿ ಉಧಂಪುರ-ಕಾತ್ರ ಸೆಕ್ಷನ್ ಒಳಗೊಂಡಿದೆ. ಇನ್ನೂ ಬನಿಹಾಳ್-ಕ್ವಾಜಿಗುಂಡ್ 18 ಕಿಮೀ ಅಂತರವಿದೆ. ಇನ್ನೊಂದೆಡೆ ಕ್ವಾಜಿಗುಂಡ್-ಬಾರಾಮುಲ್ಲಾ ವಿಭಾಗ ಈಗಾಗಲೇ ನಿರ್ಮಿಸಲಾಗಿದೆ.
ಇದಿಷ್ಟೇ ಅಲ್ದೇ ಮುಂದಿನ ಯೋಜನೆಯಲ್ಲಿ ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣದ ಪ್ಲಾನ್ ಇದೆ. ಇದ್ರಿಂದ ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ. ಚೆನಾಬ್ ಸೇತುವೆ ಕೇವಲ ಒಂದು ರೈಲ್ವೇ ಮಾರ್ಗವಾಗಿರದೇ ಮುಂದಿನ ದಿನಗಳಲ್ಲಿ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ, ಚೆನಾಬ್ ಸೇತುವೆ ಓಪನ್ ಆಗಿರೋದು ದೊಡ್ಡ ವರವಾಗಿದೆ.