ಸಾಕೇತ್ ರೂಮ್ಮೇಟ್ ಬಿಚ್ಚಿಟ್ಟ ಸಾವಿನ ಹಿಂದಿನ ಮೌನ ಸಂಕಟ!
ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?ಅಮೆರಿಕದ ಪ್ರತಿಷ್ಠಿತ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಓದುತ್ತಿದ್ದ ಬೆಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಸಾವು ಕೇವಲ ಒಂದು ಆಕಸ್ಮಿಕವಲ್ಲ, ಅದು ಒಂದು ಮೌನ ಹೋರಾಟದ ಅಂತ್ಯ ಎಂಬುದು ಇದೀಗ ಬಯಲಾಗಿದೆ. ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದ ಸಾಕೇತ್ ಅವರ ಮೃತದೇಹ ಶನಿವಾರ ‘ಲೇಕ್ ಅಂಜಾ’ ಸರೋವರದಲ್ಲಿ ಪತ್ತೆಯಾದ ಬೆನ್ನಲ್ಲೇ, ಅವರ ರೂಮ್ಮೇಟ್ ಬನೀತ್ ಸಿಂಗ್ ಹಂಚಿಕೊಂಡಿರುವ ವಿಷಯಗಳು ಕರುಳು ಹಿಂಡುವಂತಿವೆ.
ಸಾಕೇತ್ ಸಾವಿಗೂ ಎರಡು ವಾರಗಳ ಮುಂಚೆಯೇ ಮಾನಸಿಕವಾಗಿ ತೀವ್ರವಾಗಿ ಕುಗ್ಗಿ ಹೋಗಿದ್ದರು ಎಂದು ಬನೀತ್ ಸಿಂಗ್ ನೆನಪಿಸಿಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ಊಟ ಮಾಡುವುದನ್ನೇ ಬಿಟ್ಟಿದ್ದರು ಮತ್ತು ದಿನವಿಡೀ ಕೇವಲ ಚಿಪ್ಸ್ ಹಾಗೂ ಕುಕೀಸ್ ತಿಂದು ಬದುಕುತ್ತಿದ್ದರು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಹಾಗೂ ಸಂಪೂರ್ಣವಾಗಿ ಒಂಟಿಯಾಗಿದ್ದರು. ಅವರೊಳಗೆ ಏನೋ ದೊಡ್ಡ ಸಂಕಟ ನಡೆಯುತ್ತಿದೆ ಎಂಬ ಅರಿವು ತಮಗೆ ಆಗಲಿಲ್ಲ ಎಂದು ಬನೀತ್ ಅತೀವ ನೋವಿನಿಂದ ಬರೆದುಕೊಂಡಿದ್ದಾರೆ.
ಸಾಕೇತ್ ಜೀವನದ ಮೇಲಿನ ಭರವಸೆಯನ್ನು ಎಷ್ಟು ಕಳೆದುಕೊಂಡಿದ್ದರು ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ. ಒಮ್ಮೆ ಸಾಕೇತ್ ಸ್ನಾನಕ್ಕೆ ಬಳಸುವ ಗೌನ್ ಧರಿಸಿಯೇ ವಿಶ್ವವಿದ್ಯಾಲಯದ ತರಗತಿಗೆ ಹೋಗಿ ಬಂದಿದ್ದರು. ಇದನ್ನು ಕಂಡು ದಂಗಾದ ಬನೀತ್ ಇದರ ಬಗ್ಗೆ ಪ್ರಶ್ನಿಸಿದಾಗ ಸಾಕೇತ್ ನೀಡಿದ ಉತ್ತರ ಎದೆನಡುಗಿಸುವಂತಿತ್ತು. ನನಗೆ ಯಾವುದರ ಬಗ್ಗೆಯೂ ಈಗ ಕಾಳಜಿಯಿಲ್ಲ, ಜನರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ ಮತ್ತು ನನಗೆ ಯಾವುದೂ ಈಗ ಬೇಕಾಗಿಲ್ಲ ಎಂದು ಅವರು ಅತ್ಯಂತ ನಿರಾಸಕ್ತಿಯಿಂದ ಹೇಳಿದ್ದರು. ಅಂದು ಆ ಮಾತನ್ನು ಕೇಳಿ ಬನೀತ್ ತಮಾಷೆ ಮಾಡಿದ್ದರು. ಆದರೆ ಅದು ಸಾಕೇತ್ ಅವರ ಮನಸ್ಸು ನೀಡುತ್ತಿದ್ದ ಅಪಾಯದ ಕೊನೆಯ ಮುನ್ಸೂಚನೆ ಎಂದು ಯಾರಿಗೂ ತಿಳಿದಿರಲಿಲ್ಲ.
ಹೃದಯವಿದ್ರಾವಕ ಸಂಗತಿಯೆಂದರೆ, ಜನವರಿ 21 ರಂದು ಸಾಕೇತ್ ಅವರೇ ಬನೀತ್ನನ್ನು ‘ಲೇಕ್ ಅಂಜಾ’ ಸರೋವರಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ ಬನೀತ್ ಅಂದು ಹೋಗಿರಲಿಲ್ಲ. ಯಾವ ಸರೋವರಕ್ಕೆ ಸಾಕೇತ್ ಅಂದು ತನ್ನ ಸ್ನೇಹಿತನನ್ನು ಕರೆದಿದ್ದರೋ, ಅದೇ ಸರೋವರದಲ್ಲಿ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ವರದಿಯಂತೆ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಐಐಟಿ ಮದ್ರಾಸ್ನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸಾಕೇತ್, ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ತೆರಳಿದ್ದರು. ಆದರೆ ಅಲ್ಲಿನ ಏಕಾಂಗಿತನ ಮತ್ತು ಮಾನಸಿಕ ಒತ್ತಡ ಒಬ್ಬ ಪ್ರತಿಭಾವಂತ ಕನ್ನಡಿಗನನ್ನು ಬಲಿಪಡೆದಿದೆ.

