ಲಕ್ನೋ:
ಹಿಂದೂ ಸಮಾಜವನ್ನು ಒಗ್ಗೂಡಿಸಿ ಸಬಲೀಕರಣಗೊಳಿಸಲು ಸದ್ಯ ಯಾವುದೇ ಬೆದರಿಕೆ ಇಲ್ಲ ಆದರೆ ಜಾಗರೂಕತೆ ಅಗತ್ಯವಾಗಿರುವುದರಿಂದ ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್)
ದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ
ಲಖ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಸಭೆಯಲ್ಲಿ ಮಾತನಾಡಿದ ಅವರು ಕ್ಷೀಣಿಸುತ್ತಿರುವ ಹಿಂದೂಗಳ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು. ಸರಾಸರಿ ಫಲವತ್ತತೆ ದರ ಮೂರಕ್ಕಿಂತ ಕಡಿಮೆ ಇರುವ ಸಮಾಜಗಳು ಭವಿಷ್ಯದಲ್ಲಿ ಕಣ್ಮರೆಯಾಗಬಹುದು ಎಂದು ಅವರು ವೈಜ್ಞಾನಿಕ ಕಾರಣಗಳನ್ನು ಉಲ್ಲೇಖಿಸಿದರು.
ನವವಿವಾಹಿತ ದಂಪತಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದ ಅವರು ಮದುವೆಯ ಉದ್ದೇಶವು ಸೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯುವುದು, ಕೇವಲ ವೈಯಕ್ತಿಕ ಆಸೆಗಳನ್ನು ಈಡೇರಿಸುವುದು ಅಲ್ಲ. ದೇಶದ ಒಳನುಸುಳುವವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಬೇಕು. ಅವರಿಗೆ ದೇಶದಲ್ಲಿ ಉದ್ಯೋಗ ನೀಡಬಾರದು ಎಂದು ತಿಳಿಸಿದರು.
ಅಮೆರಿಕ ಮತ್ತು ಚೀನಾದಲ್ಲಿನ ಕೆಲವು ಅಂಶಗಳು ಭಾರತದ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಎಲ್ಲಾ ನಾಗರಿಕರು ಒಂದೇ ದೇಶ ಮತ್ತು ಒಂದೇ ಮಾತೃಭೂಮಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ಸಾಮರಸ್ಯದ ಕೊರತೆಯು ತಾರತಮ್ಯಕ್ಕೆ ಕಾರಣವಾಗುತ್ತಿದೆ. ಸನಾತನ ಚಿಂತನೆಯು ಸಾಮರಸ್ಯದ ತತ್ವಶಾಸ್ತ್ರ ಎಂದು ಪ್ರತಿಪಾದಿಸಿದರು

