ಬೆಂಗಳೂರು,
ಕೊಲೆ ಆರೋಪದಲ್ಲಿ ಸಿಲುಕಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯ ನೀಡುವ ಮೂಲಕ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಜೈಲಿನಲ್ಲಿ ಅಕ್ರಮಗಳು ಇನ್ನೂ ನಿಂತಿಲ್ಲ.
ಇಲ್ಲಿರುವ ಸಜಾಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಮೊಬೈಲ್ ಸೇರಿದಂತೆ ಹಲವು ಐಷಾರಾಮಿ ವಸ್ತುಗಳು ಪೂರೈಕೆಯಾಗುತ್ತಲೇ ಇವೆ ನ್ಯಾಯಾಲಯ ಈ ಬಗ್ಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಹಲವರ ವಿರುದ್ಧ ಕ್ರಮ ಜರುಗಿಸಿದರು ಕೂಡ ಅಕ್ರಮಗಳು ನಡೆಯುತ್ತಲೇ ಇವೆ.
ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿತು ಈ ವೇಳೆ ಕೈದಿಗಳ ಬಳಿಯಲ್ಲಿ ಹಲವಾರು ಐಶಾರಾಮಿ ವಸ್ತುಗಳು ದೊರಕಿವೆ
ಕೈದಿಗಳ ಬಳಿ ಇದ್ದ ಫೋನ್ಗಳು, ಸಿಮ್ ಕಾರ್ಡ್ಗಳು, ಚಾರ್ಜರ್ಗಳು, ಇಯರ್ಫೋನ್ಗಳು, ವಿವಿಧ ಬಗೆಯ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮತ್ತು ಚೇರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು ಎರಡು ಟ್ರ್ಯಾಕ್ಟರ್ ಲೋಡ್ನಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳಲ್ಲಿ ಹಲವನ್ನು ನಾಶಪಡಿಸಲಾಗಿದೆ. ಜೈಲಿನಲ್ಲಿರುವ ಕೆಲವು ಅಧಿಕಾರಿಗಳ ಸಹಕಾರದಿಂದಲೇ ಕೈದಿಗಳಿಗೆ ಬೇಕಾದ ವಸ್ತುಗಳು ಪೂರೈಕೆ ಯಾಗುತ್ತಿವೆ ಎಂಬ ಸಂಶಯ ಬಂದಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ತೀರ್ಮಾನಿಸಲಾಗಿದೆ.

