ಒಂದು ಕಾಲದಲ್ಲಿ ಸಾವಿರ ಕೆರೆಗಳ ನಾಡು ಎಂದು ಪ್ರಸಿದ್ಧಿಯಾಗಿದ್ದ ಬೆಂಗಳೂರಿನ ಕೆರೆಗಳು ಇಂದು ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅಧಿಕೃತ ರಾಷ್ಟ್ರೀಯ ಜಲ ಸಂಪನ್ಮೂಲಗಳ ಮೇಲ್ವಿಚಾರಣೆ (MINARS) ದತ್ತಾಂಶದ ಪ್ರಕಾರ, ನಗರದ 149 ಕೆರೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಶೇಕಡಾ 40.5 ರಷ್ಟು ಕೆರೆಗಳು ಅತ್ಯಂತ ಕಳಪೆ ಗುಣಮಟ್ಟದ ‘ಕ್ಲಾಸ್ ಇ’ ವಿಭಾಗಕ್ಕೆ ಸೇರಿವೆ. ಉಳಿದ ಶೇಕಡಾ 59.5 ರಷ್ಟು ಕೆರೆಗಳು ‘ಕ್ಲಾಸ್ ಡಿ’ ವಿಭಾಗದಲ್ಲಿದ್ದು, ಇವು ಕೇವಲ ವನ್ಯಜೀವಿ ಮತ್ತು ಮೀನುಗಾರಿಕೆಗೆ ಮಾತ್ರ ಸೀಮಿತವಾಗಿವೆ.
ಆತಂಕಕಾರಿ ವಿಷಯವೆಂದರೆ, ನಗರದ ಒಂದೇ ಒಂದು ಕೆರೆಯೂ ಕುಡಿಯಲು ಅಥವಾ ಸ್ನಾನ ಮಾಡಲು ಯೋಗ್ಯವಾದ ‘ಕ್ಲಾಸ್ ಎ, ಬಿ ಅಥವಾ ಸಿ’ ಶ್ರೇಣಿಯನ್ನು ಪಡೆದಿಲ್ಲ. 2025ರ ಮೇ ತಿಂಗಳಿನಲ್ಲಿ ಕೆರೆಗಳ ಸ್ಥಿತಿ ಅತ್ಯಂತ ಹದಗೆಟ್ಟಿದ್ದು, ಸುಮಾರು ಶೇಕಡಾ 46.6 ರಷ್ಟು ಕೆರೆಗಳು ಅತಿ ಕಳಪೆ ಗುಣಮಟ್ಟಕ್ಕೆ ತಲುಪಿದ್ದವು.
ಮಹದೇವಪುರದ ವೇಂಗಯ್ಯನಕೆರೆ, ಹೆಣ್ಣೂರು ರಸ್ತೆಯ ಕಣ್ಣೂರು ಕೆರೆ ಮತ್ತು ಸರ್ಜಾಪುರದ ರಾಯಸಂದ್ರ ಕೆರೆಗಳು ನಗರದ ಅತ್ಯಂತ ಕಲುಷಿತ ಕೆರೆಗಳ ಪಟ್ಟಿಯಲ್ಲಿವೆ. ಇದಲ್ಲದೆ ಯಲಮಲ್ಲಪ್ಪ ಚೆಟ್ಟಿ, ವಾರ್ತೂರು, ಹೊಸಕೆರೆಹಳ್ಳಿ ಮತ್ತು ಜಕ್ಕೂರು ಕೆರೆಗಳ ಪರಿಸ್ಥಿತಿಯೂ ಕೂಡ ಆಶಾದಾಯಕವಾಗಿಲ್ಲ. ಹೊಸಕೆರೆಹಳ್ಳಿ ಕೆರೆಯಲ್ಲಿ ಮಲದ ಬ್ಯಾಕ್ಟೀರಿಯಾದ ಪ್ರಮಾಣವು ಪ್ರತಿ 100 ಮಿಲಿ ಲೀಟರ್ಗೆ 1.40 ಲಕ್ಷದಷ್ಟಿದ್ದು, ಇದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಪ್ರಮಾಣಕ್ಕಿಂತ ಸುಮಾರು 280 ಪಟ್ಟು ಹೆಚ್ಚಾಗಿದೆ. ಇದಕ್ಕೆ ಹೋಲಿಸಿದರೆ ಸ್ಯಾಂಕಿ ಕೆರೆ ಮತ್ತು ಕೆಂಗೇರಿ ಕೆರೆಗಳು ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿವೆ ಎಂದು ವರದಿ ಹೇಳುತ್ತದೆ.
ಕಳೆದ ದಶಕದಲ್ಲಿ ಕೆರೆಗಳ ಪುನಶ್ಚೇತನ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳ ಸ್ಥಾಪನೆಗಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದ್ದರೂ, ಕೆರೆಗಳ ನೀರಿನ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 2029ರ ವೇಳೆಗೆ ನಗರವನ್ನು ಕೊಳಚೆ ಮುಕ್ತ ಮಾಡುವ ಗುರಿ ಹೊಂದಿದ್ದರೂ, ತಜ್ಞರು ಮಾತ್ರ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೆರೆಗಳ ಸೌಂದರ್ಯೀಕರಣಕ್ಕಿಂತ ಮುಖ್ಯವಾಗಿ, ಪ್ರತಿ ಮನೆಯ ಒಳಚರಂಡಿ ಸಂಪರ್ಕವನ್ನು ವ್ಯವಸ್ಥಿತಗೊಳಿಸಿ ಮೂಲದಲ್ಲೇ ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಸದ್ಯಕ್ಕೆ ಕೆರೆಗಳ ಸಂರಕ್ಷಣೆಗೆ ಕೈಗೊಂಡಿರುವ ಬಿಮೋಡಿಯೇಶನ್ ಮತ್ತು ಸೌಂದರ್ಯೀಕರಣದಂತಹ ಕ್ರಮಗಳು ತಾತ್ಕಾಲಿಕ ಪರಿಹಾರಗಳಾಗಿದ್ದು, ಸಮರ್ಪಕ ಒಳಚರಂಡಿ ಜಾಲದ ಕೊರತೆ ಕೆರೆಗಳ ಉಸಿರುಗಟ್ಟಿಸುತ್ತಿದೆ.

