ಡೆಹರಾಡೂನ್,ಜೂ.30- ಉತ್ತರಾಖಂಡದ ಕೇದಾರನಾಥ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ಮಣ್ಣು ಮತ್ತು ಬಂಡೆಗಳು ವಾಹನದ ಮೇಲೆ ಬಿದ್ದಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಅಹಮದ್ನಗರದ ಪುಷ್ಪಾ ಮೋಹನ್ ಬೋಂಸ್ಲೆ(62) ಮೃತ ಮಹಿಳೆಯಾಗಿದ್ದಾರೆ.
ರುದ್ರ ಪ್ರಯಾಗ್–ಗೌರಿ ಕುಂಡ್ ರಾಷ್ಟ್ರೀಯ ಹೆದ್ದಾರಿಯ ಸೋನ್ ಪ್ರಯಾಗ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ರುದ್ರ ಪ್ರಯಾಗ್ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ವಾಹನ ಕೇದರನಾಥದಿಂದ ಹಿಂದಿರುಗುತ್ತಿತ್ತು. ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು.
ವಾಹನವು ಸೋನ್ ಪ್ರಯಾಗ್-ಗೌರಿಕುಂಡ್ ಶಟಲ್ ಸೇವೆಯಲ್ಲಿ ತೊಡಗಿತ್ತು. ಮುಂಕಾಟಿಯ ಬಳಿ ಗುಡ್ಡದಿಂದ ಇದ್ದಕ್ಕಿದ್ದಂತೆ ಕೆಳಗೆ ಬಿದ್ದ ಬೃಹತ್ ಬಂಡೆಗಳು ಮತ್ತು ಮಣ್ಣು ವಾಹನದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ರಾಜವರ್ ಹೇಳಿದರು.
ಉತ್ತರಾಖಂಡದ ಭಾರೀ ಮಳೆ ಸುರಿದಿದ್ದು, ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದೆ.