ಮಂಗಳೂರು, ಡಿ.19- ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ತರಬೇತಿ, ಸಾಲ ಸೌಲಭ್ಯದ ಮೂಲಕ ಮನೆ ಮಾತಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ (Dharmashtala) ಸಂಸ್ಥೆ ಇದೀಗ ಸಂಕಷ್ಟದ ಸ್ಥಿತಿಯಲ್ಲಿರುವ ರಾಜ್ಯದ ಗ್ರಾಮೀಣ ಜನರಿಗೆ ವಿಮೆ ಸೌಲಭ್ಯ ಒದಗಿಸಲು ಮುಂದಾಗಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗಡೆ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯ ಹಾಗೂ ನೆರೆಯ ಕೇರಳದ ಗ್ರಾಮಾಂತರ ಪ್ರದೇಶದ ಜನತೆ ವಿಮೆ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದರು.
ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಿ ಸಾಮಾಜಿಕ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಲು, ಕರ್ನಾಟಕ ಮತ್ತು ಕೇರಳದಲ್ಲಿನ ಸಾಮಾಜಿಕ- ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಜೀವ ವಿಮೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಜನರಿಗೆ ವಿಮೆ ಸೌಲಭ್ಯ ಒದಗಿಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜೊತೆಗೆ ಎಸ್ಬಿಐ ಲೈಫ್ ಒಪ್ಪಂದ ಮಾಡಿಕೊಂಡಿದ್ದು, ಮೈಕ್ರೊ ಯೋಜನೆ ಅಡಿಯಲ್ಲಿ ವಿಮೆ ಸೌಲಭ್ಯಗಳ ಮೂಲಕ ಕರ್ನಾಟಕ ಮತ್ತು ಕೇರಳದ ಗ್ರಾಮೀಣ ಕುಟುಂಬಗಳ ಹಣಕಾಸು ಸ್ಥಿರತೆಯನ್ನು ಜಂಟಿಯಾಗಿ ಬಲಪಡಿಸಲಾಗುವುದು ಎಂದರು.
ಅರ್ಥಪೂರ್ಣ ವಿಮೆ ಸೌಲಭ್ಯಗಳ ಮೂಲಕ ಕರ್ನಾಟಕ ಮತ್ತು ಕೇರಳದ ಗ್ರಾಮೀಣ ಕುಟುಂಬಗಳ ಹಣಕಾಸು ಪರಿಸ್ಥಿತಿಯ ಸ್ಥಿರತೆಯನ್ನು ಬಲಪಡಿಸಲು ಅತ್ಯಂತ ಮಹತ್ವದ ವಿಶಾಲ ಜಾಲವನ್ನು ಸದ್ಬಳಕೆ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳ ಜನರಲ್ಲಿ ಸ್ವಾವಲಂಬನೆ ಬೆಳೆಸಲು ನಾವು ಬಯಸುತ್ತೇವೆ. ಈ ಸಹಯೋಗವು ಎಲ್ಲರಿಗೂ ವಿಮೆ ಸೌಲಭ್ಯ ಒದಗಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಪರಿಣಾಮಕಾರಿ ಉಪಕ್ರಮದಿಂದ ಪ್ರಯೋಜನ ಪಡೆಯುವವರಿಗೆ ನಮ್ಮ ಸಾಮೂಹಿಕ ಪ್ರಯತ್ನಗಳು ಉಜ್ವಲ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯವನ್ನು ತರಲಿವೆ ಎಂದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿದ್ದರು.ಬಿಸಿ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್.ಎಚ್. ಮಂಜುನಾಥ್, ಎಸ್ಬಿಐ ಲೈಫ್ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಜಿಂಗ್ರಾನ್ ಅವರಿದ್ದರು.