ಚಿಕ್ಕಬಳ್ಳಾಪುರ,
ದೀಪ ಆರುವ ಮುನ್ನ ಜೋರಾಗಿ ಬೆಳಗುವಂತೆ, ಮಹಾತ್ಮ ಗಾಂಧೀಜಿಯವರ ಪರಂಪರೆಯನ್ನು ಅಳಿಸಲು ಹೊರಟಿರುವ ಬಿಜೆಪಿಯ ಅಂತ್ಯಕಾಲ ಹತ್ತಿರ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮನರೇಗಾ ಬಚಾವ್’ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹೊಸ ನೀತಿಗಳು ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಹೊಸ ಕಾನೂನಿನ ಅಡಿಯಲ್ಲಿ ರಾಜ್ಯಗಳು ಶೇ. 40ರಷ್ಟು ವೆಚ್ಚವನ್ನು ಭರಿಸಬೇಕೆಂದು ಕೇಂದ್ರ ಹೇಳುತ್ತಿರುವುದು ರಾಜ್ಯಗಳ ಪಾಲಿಗೆ ಮರಣಶಾಸನವಿದ್ದಂತೆ ಎಂದು ಶಿವಕುಮಾರ್ ಬಣ್ಣಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳೂ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಸಹ ಈ ಹೊಸ ಯೋಜನೆಯನ್ನು ಜಾರಿಗೊಳಿಸಲು ಅಸಾಧ್ಯ ಎಂದು ಈಗಾಗಲೇ ತಿಳಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ಗ್ರಾಮೀಣ ಭಾಗದ ರೈತರು ಮತ್ತು ಕಾರ್ಮಿಕರಿಗೆ ಆತ್ಮವಿಶ್ವಾಸ ನೀಡುವ ಉದ್ಯೋಗ ಖಾತರಿ ಯೋಜನೆಯನ್ನು ರಕ್ಷಿಸುವುದು ನಮ್ಮ ಹೊಣೆ ಎಂದು ಸಾರಿದ ಡಿಸಿಎಂ, ರಾಜ್ಯದ ಎಲ್ಲಾ 5,900 ಪಂಚಾಯತ್ ಕಚೇರಿಗಳಿಗೆ ಮಹಾತ್ಮ ಗಾಂಧೀಜಿಯವರ ಹೆಸರನ್ನು ಇಡಲು ಸರ್ಕಾರ ತೀರ್ಮಾನಿಸಿದೆ ಎಂದು ಘೋಷಿಸಿದರು. ಈ ಹಿಂದೆ ಪ್ರತಿ ಪಂಚಾಯತ್ಗೆ 1 ರಿಂದ 2 ಕೋಟಿ ರೂ. ಮೊತ್ತದ ಕಾಮಗಾರಿ ನಿರ್ಧರಿಸುವ ಅಧಿಕಾರವಿತ್ತು, ಆದರೆ ಈಗ ಕೇಂದ್ರ ಸರ್ಕಾರ ಆ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ಎಂದು ಅವರು ದೂರಿದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಮೋದಿ ಮತ್ತು ಬಿಜೆಪಿ ಈಗ ಅವುಗಳನ್ನೇ ನಕಲು ಮಾಡುತ್ತಿದ್ದಾರೆ. ಕಾಂಗ್ರೆಸ್ ಇರುವವರೆಗೂ ಈ ಯೋಜನೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಸವಾಲು ಹಾಕಿದರು. ಜನರು ಮತದಾನದ ಹಕ್ಕನ್ನು ಕದಿಯುವಂತೆ ಬಿಜೆಪಿ ಈಗ ಕೆಲಸದ ಹಕ್ಕನ್ನು ಕದಿಯುತ್ತಿದೆ ಎಂದು ಆರೋಪಿಸಿದ ಅವರು, ಉದ್ಯೋಗ ಖಾತರಿ ಯೋಜನೆ ಮೊದಲಿನಂತೆ ಮರುಸ್ಥಾಪನೆಯಾಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಗುಡುಗಿದರು.

