ಬೆಂಗಳೂರು,ಜೂ.23-
ವಂಚಕಿ ಐಶ್ವರ್ಯಾ ಗೌಡ ಮಾಜಿ ಸಂಸದ ಡಿಕೆ ಸುರೇಶ್ ಅವರ ಸೋದರಿ ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಗೆ 9.82 ಕೋಟಿ ರೂ. ವಂಚನೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದರು.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವಕೀಲರೊಂದಿಗೆ ಇಡಿ ಕಚೇರಿಗೆ ಆಗಮಿಸಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿತ್ತು. ಆದರೆ, ಡಿಕೆ ಸುರೇಶ್ 11.15ಕ್ಕೆ ವಿಚಾರಣೆಗೆ ಆಗಮಿಸಿದ್ದು,ತಡವಾಗಿದ್ದಕ್ಕೆ ಕಚೇರಿ ಹೊರಗಡೆಯೇ ಡಿಕೆ ಸುರೇಶ್ರನ್ನು ಕೂರಿಸಲಾಗಿತ್ತು. ರಿಜಿಸ್ಟರ್ನಲ್ಲಿ ಸಹಿ ಮಾಡುವಂತೆ ಸೂಚಿಸಲಾಗಿತ್ತು.
ಸಹಿ ಮಾಡಿದ ಬಳಿಕವೂ ಕಚೇರಿ ಸುರೇಶ್ರನ್ನು ಒಳಗೆ ಬಿಡಲು ಇಡಿ ಅಧಿಕಾರಿಗಳು ವಿಳಂಬ ಮಾಡಿದರು. ಈ ವೇಳೆ ಸುರೇಶ್, ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ. ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಸುರೇಶ್ ಅವರನ್ನು ವಿಚಾರಣೆ ನಡೆಸಿ
ಚಿನ್ನದ ವ್ಯಾಪಾರಿಗೆ ಐಶ್ವರ್ಯಾ ಗೌಡ 9.82 ಕೋಟಿ ರೂ. ವಂಚನೆ ನಡೆಸಿದ ಪ್ರಕರಣದ ಸಂಬಂಧ ವಿಚಾರಣೆ ನಡೆಸಿ ಮಾಹಿತಿಯನ್ನು ಇಡಿ ಅಧಿಕಾರಿಗಳು ಪಡೆದರು.
ಸುರೇಶ್ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಶಾಂತಿನಗರದ ಇಡಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಸಂಬಂಧವಿಲ್ಲ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಇ.ಡಿ ಈ ಪ್ರಕರಣದಲ್ಲಿ ನನಗೆ ಏಕೆ ನೋಟಿಸ್ ಕೊಟ್ಟಿದೆ ಎಂದು ಅರ್ಥವಾಗಿಲ್ಲ. ಐಶ್ವರ್ಯ ಗೌಡ ತನ್ನ ಸಹೋದರಿ ಎಂದು ಹೇಳಿಕೊಂಡು ಬೇರೆಯವರಿಗೆ ವಂಚನೆ ಮಾಡಿರುವುದರ ವಿರುದ್ಧ ನಾನೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೆ. ಆಕೆ ಮಾಡಿರುವ ವಂಚನೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ನನ್ನ ಮತ್ತು ಐಶ್ವರ್ಯ ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ. ಕೆಲ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಅದನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಸಂಬಂಧವಿಲ್ಲ. ನನ್ನ ಕಚೇರಿಗೆ ಅವರು ಮೂರ್ನಾಲ್ಕು ಬಾರಿ ಭೇಟಿ ನೀಡಿ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅದಕ್ಕೂ, ವಂಚನೆಗೂ ಸಂಬಂಧವಿಲ್ಲ. ನನ್ನ ಕ್ಷೇತ್ರದವರು ಎಂಬ ಕಾರಣಕ್ಕೆ ಭೇಟಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜಾರಿ ನಿರ್ದೇಶನಾಲಯ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳೇ ಎಚ್ಚರಿಕೆ ನೀಡಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಜಾರಿ ನಿರ್ದೇಶನಾಲಯದವರು ತಮ ವ್ಯಾಪ್ತಿಯನ್ನು ಮೀರಿ ನಡೆದುಕೊಳ್ಳುವ ಮೂಲಕ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು