ಬೆಂಗಳೂರು,ಮಾ.10-
ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳು ಅರ್ಹರಿಗೆ ಮಾತ್ರ ಸಿಗಬೇಕು ಇವುಗಳು ಯಾವುದೇ ಕಾರಣಕ್ಕೂ ಅನರ್ಹರ ಪಾಲಾಗಬಾರದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ
ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆಹಚ್ಚಿ ತೆಗದು ಹಾಕಿ ಅರ್ಹರಿಗೆ ಸರ್ಕಾರಿ ಸೌಲಭ್ಯ ದೊರಕಿಸುವ ಸದುದ್ದೇಶದಿಂದ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡುವುದಾಗಿ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಮುಗಿದ ನಂತರ ಮೊದಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ನಂತರ ಗ್ರಾಮ ಮಟ್ಟದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.
ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಸದನದ ಸದಸ್ಯರೆಲ್ಲರೂ ಸಹಕಾರ ಕೊಟ್ಟರೆ ಬಿಪಿಎಲ್ ಪಡೆದುಕೊಂಡ ಅನರ್ಹ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಲಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಈ ಹಿಂದೆ ಪರಿಷ್ಕರಣೆ ಮಾಡಲು ಹೊರಟಾಗ ದೊಡ್ಡ ವಿವಾದವೇ ಉಂಟಾಗಿತ್ತು. 99 ಎಪಿಎಲ್ ಕಾರ್ಡ್ ಗಳು ಬಿಪಿಎಲ್ ಸೇರ್ಪಡೆಯಾದರೆ ಯಾರೂ ಕೇಳುವುದಿಲ್ಲ. ಆದರೆ ಒಂದೇ ಒಂದು ಬಪಿಎಲ್ ಕಾರ್ಡ್ ಬಿಟ್ಟು ಹೋದರೆ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಜವಾದ ಫಲಾನುಭವಿಗಳು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಬಾರದೆಂಬುದು ನಮ್ಮ ಉದ್ದೇಶ. ನಾವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮಾಡಬೇಕು. ಹೀಗಾಗಿ ಪರಿಷ್ಕರಣೆ ಮಾಡಲು ಮುಂದಾಗಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಒಟ್ಟು 2,95,000 ಬಿಪಿಎಲ್ ಪಡಿತರ ಫಲಾನುಭವಿಗಳಿದ್ದರು. ಇದರಲ್ಲಿ ಪ್ರಸ್ತುತ 2,40,000 ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವು ಅನರ್ಹರು ಸೇರ್ಪಡೆಯಾಗಿದ್ದಾರೆ. ಪರಿಷ್ಕರಣೆ ನಂತರ ಎಪಿಎಲ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
Previous Articleಕೊಡಗು ವಿಶ್ವವಿದ್ಯಾಲಯ ಪರ ನಿಂತ ಮಂತರ್ ಗೌಡ
Next Article ಚಿನ್ನ ಕದ್ದ ಉಪನ್ಯಾಸಕಿ