ಬೆಂಗಳೂರು,ಏ.23
–ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆಸಿದ ದಾಳಿಯಲ್ಲಿ ರಾಜ್ಯದ ಇಬ್ಬರು ಮೃತಪಟ್ಟಿದ್ದರೆ, ಇನ್ನು ಕೆಲವರು ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ನ್ಯೂ ತಿಪ್ಪಸಂದ್ರ ಬಡಾವಣೆಯ ನಿವಾಸಿ ಸುಮನಾ ಭಟ್ ಅವರು ಐಸ್ ಕ್ರೀಂ ತಿನ್ನಲು ಹೋಗಿದ್ದರಿಂದ ಉಗ್ರರ ದಾಳಿಯಿಂದ ಬಚಾವಾಗಿದ್ದಾರೆ.
ಐಸ್ ಕ್ರೀಂ ತಿನ್ನುವುದಕ್ಕೆಂದು ನಮ್ಮ ತಂಡ ನಿಂತಿದ್ದರಿಂದ ಪಹಲ್ಗಾಮ್ ತಲುಪುವುದು ವಿಳಂಬವಾಯಿತು. ಅದರಿಂದಾಗಿ ಉಗ್ರರ ದಾಳಿಯಿಂದ ಬಚಾವಾದೆವು ಎಂದು ಅವರು ಹೇಳಿಕೊಂಡಿದ್ದಾರೆ.
ಸುಮನಾ ಭಟ್ ಸೇರಿದಂತೆ ಟೈಮೆಕ್ಸ್ ಸಂಸ್ಥೆಯ 17 ಜನ ಉದ್ಯೋಗಿಗಳು ಜಮ್ಮುವಿಗೆ ಹೋಗಿ ಅಲ್ಲಿಂದ ನಿನ್ನೆ ಪಹಲ್ಗಾಮ್ಗೆ ತೆರಳಿದ್ದರು. ಭಯೋತ್ಪಾದಕರ ದಾಳಿ ನಡೆದ ಸ್ಥಳವನ್ನು ನಮ್ಮ ಗೈಡ್ ಮಿನಿ ಸ್ವಿಜರ್ಲೆಂಡ್ ಎಂದು ಬಣ್ಣಿಸಿದ್ದರು ಎಂದು ಸುಮನಾ ಭಟ್ ಹೇಳಿದ್ದಾರೆ.
ಗೈಡ್ಗಳು ನೀಡಿದ ಮಾಹಿತಿಯಿಂದ ಪಹಲ್ಗಾಮ್ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ನಾವೂ ಭಾರೀ ಕೌತುಕದಿಂದಲೇ ಕುದುರೆ ಮೇಲೆ ಅಲ್ಲಿಗೆ ಹೊರಟಿದ್ದೆವು. ನಾವು ಐಸ್ಕ್ರೀಂ ತಿನ್ನುತ್ತಾ ನಿಂತಿದ್ದರಿಂದ ನಮ್ಮೊಂದಿಗಿದ್ದ ಬೇರೆ ಪ್ರವಾಸಿಗರು ಮುಂದೆ ಹೋಗಿದ್ದರು. ಆ ಸ್ಥಳ ಇನ್ನೇನು ಮೂರು ಕಿಲೋ ಮೀಟರ್ ಇರುವಾಗ ಘೋಡಾವಾಲಾಗಳು ಕುದುರೆಯಿಂದ ನಮ್ಮನ್ನು ಇಳಿಸಿದರು. ವಾಪಸ್ ಹೋಗುವಂತೆ ಹೇಳಿ ಅವರೆಲ್ಲ ಅಲ್ಲಿಂದ ಓಡಿಹೋದರು. ನಾವು ಜೀವ ಭಯದಲ್ಲೇ ಮೂರು ಕಿಲೋ ಮೀಟರ್ ನಡೆದುಕೊಂಡು ಪಹಲ್ಗಾಮ್ನ ನಮ್ಮ ಹೋಟೆಲ್ಗೆ ಬಂದೆವು. ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.