ಚೆನ್ನೈ,ಜೂ.25-
ಮಾದಕವಸ್ತು ಸೇವನೆ,ಪೂರೈಕೆ, ಉದ್ಯೋಗ ಹಗರಣ, ಬ್ಲ್ಯಾಕ್ಮೇಲ್ , ಭೂ ಕಬಳಿಕೆ ಆರೋಪ ಸೇರಿ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಖ್ಯಾತ ನಟ ಶ್ರೀಕಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಟ ಶ್ರೀಕಾಂತ್ಗೆ ಕೊಕೇನ್ ಸರಬರಾಜು ಮಾಡಿದ್ದ ಪ್ರಮುಖ ಆರೋಪಿ ಪ್ರಸಾದ್, ಮಾದಕ ದ್ರವ್ಯ ಆಧಾರಿತ ಪಾರ್ಟಿಗಳನ್ನು ಆಯೋಜಿಸುತ್ತಿದ್ದುದಲ್ಲದೆ, ಅನೇಕ ವ್ಯಕ್ತಿಗಳಿಗೆ ಕೊಕೇನ್ ಮಾರಾಟ ಮಾಡಿರುವುದು ಈಗ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಪ್ರಸಾದ್ ಬೇರೆ ಬೇರೆ ವಂಚನೆ ಜಾಲವನ್ನು ನಡೆಸುತ್ತಿದ್ದ. ಸರ್ಕಾರಿ ಉದ್ಯೋಗದ ಭರವಸೆ ನೀಡಿ 200 ಕ್ಕೂ ಹೆಚ್ಚು ಜನರನ್ನು ವಂಚಿಸುತ್ತಿದ್ದಾನೆ. ಚೆನ್ನೈ ಕಾರ್ಪೊರೇಷನ್, ರೈಲ್ವೆ, ಆದಾಯ ತೆರಿಗೆ ಇಲಾಖೆ ಮತ್ತು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗ (ಟಿಎನ್ ಪಿಎಸ್ ಸಿ) ಗಳಲ್ಲಿ ಉದ್ಯೋಗ ನೀಡುವ ನಕಲಿ ಭರವಸೆಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಪ್ರಸಾದ್ ಪ್ರತಿಯೊಬ್ಬ ಆಕಾಂಕ್ಷಿಯಿಂದ 2 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಹಣ ಸಂಗ್ರಹಿಸಿದ್ದ ಎಂದು ತಿಳಿದು ಬಂದಿದೆ. ಇದರಲ್ಲಿ ನಟ ಶ್ರೀಕಾಂತ್ ಪಾತ್ರವಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖಾಧಿಕಾರಿಗಳು ಪ್ರಸಾದ್ ಅವರ ಸಹಚರ ಅಜಯ್ ವಂಡೈಯರ್ ಅವರನ್ನೂ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅಜಯ್ ವಿರುದ್ಧ ಭೂಕಬಳಿಕೆ ಮತ್ತು ಭೂಮಾಲೀಕರನ್ನು ಬೆದರಿಸುವ ಆರೋಪ ಹೊರಿಸಲಾಗಿದೆ, ವಿಶೇಷವಾಗಿ ಅನಿವಾಸಿ ಭಾರತೀಯರನ್ನು ಗುರಿಯಾಗಿಸಿಕೊಂಡು ಅಕ್ರಮ ಎಸಗುತ್ತಿದ್ದ ಆರೋಪ ಕೇಳಿಬಂದಿದೆ . ಇವರ ಆಸ್ತಿಗಳನ್ನು ಕಬಳಿಸಲು ಅವರು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಪ್ರಸಾದ್ ವ್ಯಕ್ತಿಗಳ ಕರೆ ಮತ್ತು ಸ್ಥಳ ದಾಖಲೆಗಳನ್ನು ಪಡೆಯುವ ಮೂಲಕ ಅವರನ್ನು ಬ್ಲ್ಯಾಕ್ಮೇಲ್ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸಾದ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಮಧುರೈ ಮೂಲದ ಹೆಡ್ ಕಾನ್ಸ್ಟೆಬಲ್ ಒಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 22 ಜನರನ್ನು ಬಂಧಿಸಲಾಗಿದ್ದು, ಐವರನ್ನು ಕಠಿಣ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.
ಮಾದಕ ದ್ರವ್ಯ ಸೇವನೆ ಅಥವಾ ಮಾರಾಟದ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.