ಮಂಗಳೂರು,ಏ.29-
ಸಾಮಾಜಿಕ ಜಾಲತಾಣದಲ್ಲಿ ಪೆಹಲ್ಗಾಮ್ ಘಟನೆ ಮುಂದಿಟ್ಟುಕೊಂಡು ಆಕ್ಷೇಪಾರ್ಹ ಸಂದೇಶವನ್ನು ಹಂಚಿಕೊಂಡ ವೈದ್ಯರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಡಾ.ಅತೀಫಾ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 353 (ಕಿಡಿಗೇಡಿತನದ ಬರಹ ಪ್ರಕಟಿಸುವುದು) ಹಾಗೂ ಸೆಕ್ಷನ್ 196 (ಧರ್ಮಗಳ ನಡುವೆ ದ್ವೇಷ ಹಬ್ಬಿಸಲು ಯತ್ನಿಸುವುದು) ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಆಕ್ಷೇಪಾರ್ಹ ಸಂದೇಶ ಹಂಚಿಕೊಂಡ ವೈದ್ಯೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದೇವೆ. ಸಂದೇಶ ಹಂಚಿಕೊಳ್ಳಲು ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಿದ್ದೇವೆ ಎಂದು ಹೇಳಿದರು.
ವೈದ್ಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಬರೆಹವನ್ನು ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್ವೆಲ್ ಫೇಸ್ಬುಕ್ನಲ್ಲಿ ಈಚೆಗೆ ಹಂಚಿಕೊಂಡಿದ್ದು, ಆಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಬರಹವನ್ನು ಹಂಚಿಕೊಂಡ ವೈದ್ಯೆಯು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಹೈಲ್ಯಾಂಡ್ ಆಸ್ಪತ್ರೆಯು ಆಕೆಯನ್ನು ಕೆಲಸದಿಂದ ವಜಾಮಾಡಿದೆ. ಈ ಘಟನೆ ಕುರಿತು ಸ್ಪಷ್ಟನೆ ನೀಡಿ ಹೈಲ್ಯಾಡ್ ಆಸ್ಪತ್ರೆಯ ಆಡಳಿತ ಮಂಡಳಿ ಟ್ವೀಟ್ ಮಾಡಿದ್ದು, ‘ದೇಶವಿರೋಧಿ ಎಂದು ಪರಿಗಣಿಸುವಂತಹ ಅಭಿಪ್ರಾಯಗಳನ್ನು ನಮ್ಮ ಸಂಸ್ಥೆಯ ಒಪ್ಪುವುದಿಲ್ಲ. ವೈದ್ಯೆಯು ತಮ್ಮ ಬರಹದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅದನ್ನು ನಾವೂ ಬಲವಾಗಿ ಖಂಡಿಸುತ್ತೇವೆ. ಇಂತಹ ದೇಶ ವಿರೋಧಿ ಭಾವನೆಗಳಿಂದ ನಾವು ಅಂತರ ಕಾಯ್ದುಕೊಳ್ಳುವ ಮೂಲಕ ದೇಶದ ಸಾರ್ವಭೌಮತೆ, ಐಕ್ಯತೆ ಹಾಗೂ ಭದ್ರತೆಯನ್ನು ಎತ್ತಿಹಿಡಿಯುತ್ತೇವೆ’ ಎಂದು ತಿಳಿಸಿದೆ.
Previous Articleವಿ.ಸಿ.ನಾಲೆಯಲ್ಲಿ ಸಿಕ್ಕ ಕಾರು ಬೆಚ್ಚಿ ಬೀಳಿಸಿತು
Next Article CM ವಿರುದ್ಧ ರೌಡಿ ಶೀಟ್ ತೆರೆಯಬೇಕಾ.?