ಬೆಂಗಳೂರು,ಏ.1-ಸಚಿವ ಕೆ.ಎನ್.ರಾಜಣ್ಣ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಮೂವರನ್ನು ತುಮಕೂರಿನ ಕ್ಯಾತಸಂದ್ರ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಮಹಿಳೆ ಪುಷ್ಪಾ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ರಾಜೇಂದ್ರ ಅವರ ಹತ್ಯೆಗೆ ರೌಡಿಶೀಟರ್ ಸೋಮ ಎಂಬಾತ ಸಂಚು ರೂಪಿಸಿದ್ದ ಕುರಿತು 18 ನಿಮಿಷಗಳ ಆಡಿಯೋವೊಂದು ವೈರಲ್ ಆಗಿತ್ತು.
ರಾಜೇಂದ್ರ ಅವರ ಆಪ್ತ ರಾಕಿ ಮತ್ತು ಸೋಮನ ಆಪ್ತೆ ಪುಷ್ಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಬೆನ್ನಲ್ಲೇ ಸೋಮ, ಪುಷ್ಪಾ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಡಿಯೋದಲ್ಲಿ ಏನಿದೆ..?
ವೈರಲ್ ಆಗಿರುವ ಆಡಿಯೋದಲ್ಲಿ ರಾಕಿ ಜೊತೆ ಮಾತನಾಡಿದ್ದ ಪುಷ್ಪಾ, ”ಪ್ರಭಾವಿ ವ್ಯಕ್ತಿಯೊಬ್ಬರಿಂದ ರಾಜೇಂದ್ರ ಹತ್ಯೆಗೆ ಸೋಮುಗೆ 75 ಲಕ್ಷ ರೂ. ಗುತ್ತಿಗೆ (ಸುಪಾರಿ) ಬಂದಿತ್ತು. ಇದಕ್ಕಾಗಿ 5 ಲಕ್ಷ ರೂ. ಹಣ ಅಡ್ವಾನ್ಸ್ ನೀಡಿದ್ದರು. ಇದು ನಿಜ. ಬೇಕಾದರೆ ಸೋಮನನ್ನು ಪೊಲೀಸರು ವಿಚಾರಿಸಿದರೆ ಎಲ್ಲಾ ಹೊರಬರುತ್ತದೆ. ಈ ವಿಚಾರ ಬೇಕಾದರೆ ರಾಜೇಂದ್ರ ಅವರಿಗೆ ನಾನು ಹೇಳುತ್ತೇನೆ. ಅವರ ಬಳಿ ಕರೆದುಕೊಂಡು ಹೋಗು ಎಂದು ಪುಷ್ಪಾ ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರು ಹುಡುಗರನ್ನು ಕಳುಹಿಸಿದ್ದು ಕೂಡ ಸೋಮು. ಅಲ್ಲದೆ ಜೈಪುರದ ಇನ್ನೊಬ್ಬ ರೌಡಿ ಶೀಟರ್ನನ್ನ ಕೊಲ್ಲುವುದಾಗಿ ಸೋಮು ಹೇಳಿದ್ದಾನೆ. ಇದಕ್ಕಾಗಿ ಕಲಾಸಿಪಾಳ್ಯದಲ್ಲಿರುವ ಇಬ್ಬರು ತಮಿಳು ಹುಡುಗರನ್ನು ಕೂಡ ಕರೆಸಿಕೊಂಡಿದ್ದಾನೆ. ಸೋಮುಗೆ ರೂ.5 ಲಕ್ಷ ದುಡ್ಡು ಬಂದಿರುವುದು ದೇವರ ಸಾಕ್ಷಿಯಾಗಿಯೂ ನಿಜ. ಮನು ಎಂಬಾತನ ಅಕೌಂಟ್ಗೆ ಹಣ ಹಾಕಲಾಗಿದೆ” ಎಂದು ಪುಷ್ಪಾ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
Previous Articleವೀಲೀ ಮಾಡುತ್ತಿದ್ದ 397 ಬೈಕ್ ಗಳು ಸೀಜ್
Next Article ಕರ್ನಾಟಕ ಇತಿಹಾಸದ ಮತ್ತೊಂದು ದಾಖಲೆ