ಹುಬ್ಬಳ್ಳಿ: ಮಂಗಳವಾರ ಮಟಮಟ ಮಧ್ಯಾಹ್ನ ಕೊಲೆಯಾದ ಸರಳ ವಾಸ್ತು ತಜ್ಞ, ಸಾವಿರ ಕೋಟಿ ಒಡೆಯ ಡಾ. ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ತಿವೆ.
ಹುಬ್ಬಳ್ಳಿ ಖಾಸಗಿ ಹೋಟೆಲ್ನಲ್ಲಿ ಜುಲೈ 2ನೇ ತಾರೀಖಿನಿಂದ ತಂಗಿದ್ದ ಚಂದ್ರಶೇಖರ್ ಗುರೂಜಿ ಬಳಿ ವಾಸ್ತು ಕೇಳುವ ನೆಪದಲ್ಲಿ ಬಂದು ಕೊಲೆ ಮಾಡಿದ ಇಬ್ಬರು ಅವರ ಆಪ್ತರೇ ಎನ್ನುವುದು ಬಹಿರಂಗವಾಗಿದೆ.
ಗುರೂಜಿ ಆಪ್ತರಾದ ಮಹಾಂತೇಶ್ ಶಿರೋಳ್, ಮಂಜುನಾಥ್ ದುಮ್ಮವಾಡ ಈ ಕೊಲೆ ಮಾಡಿದ್ದು, ಇಬ್ಬರನ್ನೂ ಪೊಲೀಸರು ಹುಬ್ಬಳ್ಳಿ- ಬೆಳಗಾವಿ ಮಾರ್ಗದ ರಾಮದುರ್ಗದ ಬಳಿ ಬಂಧಿಸಿದ್ದಾರೆ. ಈ ಕೊಲೆಗೆ ಮೂಲ ಕಾರಣ ಎನ್ನಲಾಗುತ್ತಿರುವ ಗುರೂಜಿ ಆಪ್ತೆ, ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ, ಮಹಾಂತೇಶ್ ಶಿರೋಳ್ ಪತ್ನಿ ವನಜಾಕ್ಷಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಧಾರವಾಡ ಜಿಲ್ಲೆಯವರೇ.
ಯಾರು ಈ ಗುರೂಜಿ?…
ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆಯವರು. ಇವರ ಮೂಲ ಹೆಸರು ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ. ಬಾಗಲಕೋಟೆಯಲ್ಲಿಯೇ ಇಂಜಿನಿಯರಿಂಗ್ವರೆಗೂ ಓದಿದ್ದ ಚಂದ್ರಶೇಖರ್ ಗುರೂಜಿ ಬಳಿಕ 1988ರಲ್ಲಿ ಮುಂಬೈ ದಾರಿ ಹಿಡಿದಿದ್ದರು.
ಮುಂಬೈನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದ ಚಂದ್ರಶೇಖರ್ ಗುರೂಜಿ ಆರು ವರ್ಷಗಳ ಬಳಿಕ ಮುಂಬೈನಿಂದ ಸಿಂಗಾಪುರಕ್ಕೆ ತೆರಳಿ ಫೆಂಗ್ಶುಯಿ ವಿದ್ಯೆ ಕಲಿತು, ಅದನ್ನು ಭಾರತೀಯ ವಾಸ್ತುವಿನೊಂದಿಗೆ ಬೆರೆಸಿ ‘ಸರಳ ವಾಸ್ತು’ ಎಂದು ಪ್ರಚಾರ ಮಾಡಿದ್ದಲ್ಲದೆ, ಮುಂಬೈಗೆ ಬಂದು ಸರಳ ವಾಸ್ತು ಕಚೇರಿ ಆರಂಭಿಸಿದ್ದರು. ಬಳಿಕ ಹುಬ್ಬಳ್ಳಿ, ಬೆಂಗಳೂರು ಹೀಗೆ ರಾಜ್ಯದ ವಿವಿಧೆಡೆಯಲ್ಲಿ ಶಾಖೆ ತೆರೆದಿದ್ದರು.
ಇದೇ ವೇಳೆ ರಿಯಲ್ ಎಸ್ಟೇಟ್ ದಂಧೆಯಲ್ಲೂ ಗುರುತಿಸಿಕೊಡಿದ್ದ ಗುರೂಜಿ ಭಾರೀ ಪ್ರಮಾಣದಲ್ಲಿ ಅಂದರೆ ಸಾವಿರ ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಆಪ್ತರಾಗಿದ್ದ ವನಜಾಕ್ಷಿ ಹೆಸರಲ್ಲೇ ಹೆಚ್ಚು ಬೇನಾಮಿ ಆಸ್ತಿ ಹೊಂದಿದ್ದರು ಎಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ರಿಯಲ್ ಎಸ್ಟೇಟ್ ದಂಧೆ ಹಾಗೂ ಸರಳ ವಾಸ್ತು ವಿಚಾರದಲ್ಲಿ ಹಲವರ ವಿರೋಧ ಕಟ್ಟಿಕೊಂಡಿದ್ದರು.
ಈ ನಡುವೆ, ಮೊದಲ ಪತ್ನಿಯ ಮರಣದ ಬಳಿಕ ಮತ್ತೊಂದು ಮದುವೆಯಾಗಿದ್ದರು. ಮೊದಲ ಪತ್ನಿಗೆ ಓರ್ವ ಪುತ್ರಿಯಿದ್ದಾರೆ. ಆದರೆ ಎರಡನೇ ದಾಂಪತ್ಯದಿಂದ ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾರನ್ನು ಮದುವೆಯಾಗಿದ್ದರು. ಸದ್ಯ ಅಂಕಿತಾ ಬೆಂಗಳೂರಿನಲ್ಲಿದ್ದಾರೆ.
ಅತಿ ಮಹತ್ವಾಕಾಂಕ್ಷಿ ಗುರೂಜಿ…
ತೀರಾ ಮಹತ್ವಾಕಾಂಕ್ಷಿಯಾಗಿದ್ದ ಗುರೂಜಿ ಯಾರೇ ಆಗಿದ್ದರೂ ಅವರನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು ನಂತರ ಅವರನ್ನು ದೂರ ಮಾಡುತ್ತಿದ್ದರು. ಹೀಗಾಗಿ ಅವರಿಗೆ ವಿರೋಧಿಗಳೂ ಹೆಚ್ಚಿದ್ದರು ಎಂದು ಅವರ ಆಪ್ತರೇ ಹೇಳುತ್ತಾರೆ.
ಚಂದ್ರಶೇಖರ್ ಗುರೂಜಿ ಕೊಲೆಯಾಗುತ್ತಿದ್ದಂತೆಯೇ ಕೇಳಿಬಂದ ಹೆಸರೇ ವನಜಾಕ್ಷಿ. ಈಕೆ 2019ರವರೆಗೂ ಚಂದ್ರಶೇಖರ್ ಗುರೂಜಿ ಮಾಲೀಕತ್ವದ ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದವಳು. ದುರಂತ ಅಂದರೆ ಈ ಕೊಲೆಗಾರ ಮಹಾಂತೇಶ್ ಹಾಗೂ ವನಜಾಕ್ಷಿಗೆ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ. ಮದುವೆ ಮಾಡಿಸಿದ ಬಳಿಕ ಈ ದಂಪತಿಗೆ ಉಳಿಯೋಕೆ ಫ್ಲಾಟ್ನ್ನೂ ಕೊಟ್ಟಿದ್ದರಂತೆ.
ಮೂಲಗಳ ಪ್ರಕಾರ ಚಂದ್ರಶೇಖರ್ ಗುರೂಜಿ ವನಜಾಕ್ಷಿ ಹೆಸರಲ್ಲಿ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ. ಫ್ಲ್ಯಾಟ್ ಸೇರಿದಂತೆ ಸಾಕಷ್ಟು ಆಸ್ತಿಯು ವನಜಾಕ್ಷಿ ಹೆಸರಿನಲ್ಲಿದೆ. ಆದರೆ, ಪೊಲೀಸ್ ತನಿಖೆಯ ವೇಳೆ ವನಜಾಕ್ಷಿ ಈ ಎಲ್ಲಾ ಆಸ್ತಿ ನಾವು ಸ್ವಂತ ಬಲದಿಂದ ಖರೀದಿ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ.
ಸರಳ ವಾಸ್ತು ಮೂಲಕವೇ ಸಾಕಷ್ಟು ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಿದ್ದ ಚಂದ್ರಶೇಖರ್ ಗುರೂಜಿ ತಮ್ಮದೇ ಆದ ಚಾನೆಲ್ ಕೂಡ ಆರಂಭಿಸಿದ್ದರು. ರಾಜ್ಯದ ಜನತೆಗೆ ಪರಿಚಿತವೇ ಎನಿಸಿದ್ದ ಈ ವ್ಯಕ್ತಿ ಇಷ್ಟೊಂದು ಹೇಯವಾಗಿ ಕೊಲೆಯಾಗ್ತಾರೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಯಾರು ಯಾರಿಗೂ ಬಯಸದಂತಹ ರೀತಿಯಲ್ಲಿ ಚಂದ್ರಶೇಖರ್ ಗುರೂಜಿ ಜೀವನ ಅಂತ್ಯ ಕಂಡಿದ್ದು ಮಾತ್ರ ದುರಂತವೇ ಸರಿ.