ನವದೆಹಲಿ,ಆ.1- ಕಾಂಗ್ರೆಸ್ ಮುಖಂಡ ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ ಅವರ ಪತ್ನಿ ಶಾಜೀಯ ತರನ್ನುಮ್ ಅವರನ್ನು ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ನಗರದ ವಿದ್ಯುತ್ ಲೇನ್ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಶಾಜೀಯ ತರನ್ನುಮ್ ಅವರನ್ನು ಸುಧೀರ್ಘ ವಿಚಾರಣೆಗೆ ಒಳಪಡಿಸಿ ಹಣ ಚಿನ್ನಾಭರಣಗಳು ಆಸ್ತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೆಜಿಎಫ್ ಬಾಬು ಅವರನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬಳಿಕ ಅವರ ಪತ್ನಿ ಶಾಜೀಯ ತರನ್ನುಮ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನೆಲೆ ಇಂದು ಅವರು ವಿಚಾರಣೆಗೆ ಹಾಜರಾಗಿದ್ದರು.
ಶಾಸಕ ಜಮೀರ್ ಅಹ್ಮದ್ ಜೊತೆಗೆ ಹಣಕಾಸು ವ್ಯವಹಾರ ಹೊಂದಿದ್ದ ಹಿನ್ನೆಲೆ ಕೆಜಿಎಫ್ ಬಾಬು ಕುಟುಂಬವನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ಗೆ ಮನೆ ಕಟ್ಟಲು 2013ರಲ್ಲಿ ಡಿಡಿ ಮೂಲಕ 3.5 ಕೋಟಿ ಹಣವನ್ನು ಬಾಬು ನೀಡಿದ್ದರು. ಆದರೆ ಈವರೆಗೂ ಆ ಹಣವನ್ನು ಜಮೀರ್ ಅಹ್ಮದ್ ವಾಪಸ್ ನೀಡಿಲ್ಲ.
ಅಕ್ರಮ ಹಣ ವರ್ಗಾವಣೆ ಮತ್ತು ಐಎಂಎ ಕೇಸ್ ಬೆನ್ನು ಹತ್ತಿರುವ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅಕೌಂಟ್ ವಿವರ ತೆಗೆದಿದ್ದು, ಇದರಲ್ಲಿ ಬಾಬು ಅವರು ಸಾಲ ನೀಡಿದ್ದು ಅದನ್ನು ವಾಪಸ್ ನೀಡದಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಕೆಜಿಎಫ್ ಬಾಬು ನಾನು ಹಣ ನೀಡಿರುವುದು ಸತ್ಯ ಅದಕ್ಕೆ ದಾಖಲೆಗಳಿವೆ. ಅದು ಕಾನೂನು ಬದ್ಧ ಹಣ ಎಂದು ಮಾಹಿತಿ ನೀಡಿದ್ದರು.
ಆದರೆ ಈ ಉತ್ತರದಿಂದ ತೃಪ್ತರಾಗದ ಅಧಿಕಾರಿಗಳು ಈಗ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕೆಜಿಎಫ್ ಬಾಬು ಆಸ್ತಿ, ವ್ಯವಹಾರ ಸೇರಿದಂತೆ ಮತ್ತಷ್ಟು ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್ಗೆ ನೀಡಿದ ಸಾಲ ಕೆಜಿಎಫ್ ಬಾಬುಗೆ ಕಂಟಕವಾಗುವ ಸಾಧ್ಯತೆಗಳಿವೆ.
Previous Articleವಿಕ್ರಾಂತ್ ರೋಣ ಮೆಚ್ಚಿದ ರಾಜಮೌಳಿ
Next Article ದಕ್ಷಿಣ ಕನ್ನಡಕ್ಕೆ ಪೊಲೀಸ್ ಸರ್ಪಗಾವಲು…!