ತುಮಕೂರು: ಓಮ್ನಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಸೇತುವೆ ದಾಟುವಾಗ ಓಮ್ನಿ ಕಾರು ನೀರಿನ ರಭಸಕ್ಕೆ ಹಳ್ಳಕ್ಕೆ ಕೊಚ್ಚಿ ಹೋಗಿತ್ತು. ಕಾರಿನಲ್ಲಿದ್ದ ತಿಪಟೂರು ಗಡಬನಹಳ್ಳಿಯ ನಿವಾಸಿಗಳಾದ ಪಟೇಲ್ ಕುಮಾರ್ ಹಾಗು ಪುಟ್ಟಸಿದ್ದಪ್ಪ ಕೊಚ್ಚಿ ಹೋಗಿದ್ದರು. ಸ್ಥಳೀಯರ ಹರಸಾಹಸ ಬಳಿಕ ಪುಟ್ಟಸಿದ್ದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದರು. ಸುಮಾರು 8 ಅಡಿ ಆಳದಲ್ಲಿ ಕಾರು ಮುಳುಗಿತ್ತು. ಕಳೆದ ಎರಡು ದಿನಗಳ ನಿರಂತರ ಕಾರ್ಯಚರಣೆ ನಡೆಸಿದರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮೂರನೇ ದಿನ ಎನ್ಡಿಆರ್ಎಫ್ ತಂಡ ಹಾಗು ಅಗ್ನಿಶಾಮಕ ಮತ್ತು ಪೊಲೀಸರ ಜಂಟಿಕಾರ್ಯಚರಣೆ ಬಳಿಕ ನಾಲ್ಕನೇ ದಿನ ಕಾರು ಸಮೇತ ಪಟೇಲ್ ಕುಮಾರ್ ಶವ ಪತ್ತೆಯಾಗಿದೆ. ಕಾರಿನ ಬಾಗಿಲು ಬೇಗ ತೆರೆದುಕೊಳ್ಳದ ಕಾರಣ ಪಟೇಲ್ಕುಮಾರ್ ಕಾರಿನಲ್ಲೇ ಕೊಚ್ಚಿ ಹೋಗಿದ್ದರು. ನಾಲ್ಕು ದಿನಗಳ ಬಳಿಕ ಹಳ್ಳದ ಮಣ್ಣಿನಲ್ಲಿ ಹೂತು ಹೋಗಿದ್ದ ಕಾರು ಹಾಗು ಪಟೇಲ್ ಕುಮಾರ್ ಅವರ ಶವ ಹೊರಕ್ಕೆ ತೆಗೆಯಲಾಗಿದೆ. ಶವ ಪತ್ತೆಯಾಗುತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶವವನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ದಂಡಿನ ಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.