Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?
    Bengaluru

    ಬೆಂಗಳೂರಿನ ಅಧಿಪತಿ ಯಾರಾಗಲಿದ್ದಾರೆ?

    vartha chakraBy vartha chakraMay 6, 2023Updated:May 6, 20231 Comment14 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ರಾಜ್ಯ ರಾಜಕಾರಣದಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಇಲ್ಲಿ ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ 28 ವಿಧಾನಸಭಾ ಕ್ಷೇತ್ರಗಳಿವೆ ಬೆಂಗಳೂರು ನಗರದಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
    ಕ್ಷೇತ್ರ ಪುನರ್ ವಿಂಗಡಣೆಯ ನಂತರ ಮೂರು ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು ಇದೀಗ ನಾಲ್ಕನೇ ಬಾರಿಗೆ ರಂಗ ಸಜ್ಜಾಗಿದೆ ಈ ಅವಧಿಯಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದರೆ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಅಭ್ಯರ್ಥಿಗಳು ಮರು ಆಯ್ಕೆಯಾಗುತ್ತಿದ್ದಾರೆ.
    ಹೀಗಾಗಿ ಮೇಲ್ನೋಟಕ್ಕೆ ಬೆಂಗಳೂರು ನಗರದಲ್ಲಿ ರಾಜಕೀಯ ಪಕ್ಷಗಳ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎನ್ನುವುದು ಮನದಟ್ಟಾಗುತ್ತದೆ.
    ಏಕೆಂದರೆ ಬೆಂಗಳೂರಿನ ಒಂದು ರಸ್ತೆಯ ಎಡ ಭಾಗ ಒಂದು ಕ್ಷೇತ್ರಕ್ಕೆ ಸೇರಿದರೆ ಆ ರಸ್ತೆಯ ಬಲಭಾಗ ಮತ್ತೊಂದು ಕ್ಷೇತ್ರಕ್ಕೆ ಸೇರುತ್ತದೆ ಹೀಗಾಗಿ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ತಮ್ಮದೇ ಆದ ವರ್ಚಸ್ಸು ಮತ್ತು ಹಿಂಬಾಲಕರ ಪಡೆಯನ್ನು ಹೊಂದಿದ್ದಾರೆ ಹೀಗಾಗಿ ಇವರಿಗೆ ಅವರು ಅವರಿಗೆ ಇವರು ಸಹಾಯ ಮಾಡುತ್ತಾರೆ ಎನ್ನುವುದು ಜನಜನಿತವಾಗಿದೆ.
    ಆದರೆ, ಇದೇ ಮೊದಲ ಬಾರಿಗೆ ಇಂತಹ ಹೊಂದಾಣಿಕೆ ರಾಜಕಾರಣ ಎನ್ನುವುದು ಬಹುತೇಕ ಕಣ್ಮರೆಯಾಗಿದೆ ಎಂದೇ ಹೇಳಬಹುದು. ಕ್ಷೇತ್ರ ಪುನರ್ ವಿಂಗಡಣೆಯ ನಂತರ 4ನೇ ಬಾರಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ ಚುನಾವಣೆ ಆರಂಭಕ್ಕೂ ಮೊದಲೇ ಬಿಜೆಪಿ ನಾಯಕರು ಈ ಹೊಂದಾಣಿಕೆ ರಾಜಕಾರಣದ ಬಗ್ಗೆ ಎಚ್ಚರಿಕೆಯನ್ನು ನೀಡುವ ಮೂಲಕ ಇನ್ನು ಮುಂದೆ ಇಂತಹದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದರು. ಪಕ್ಷದ ಉನ್ನತ ವಲಯದಿಂದ ರವಾನೆಯಾದ ಈ ಸಂದೇಶ ಬೆಂಗಳೂರಿನ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಇದಾದ ನಂತರ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಬಿಜೆಪಿ ನಾಯಕತ್ವದ ನಿಲುವು ಬೆಂಗಳೂರಿನ ಬಿಜೆಪಿ ನಾಯಕರುಗಳಿಗೆ ಹೊಂದಾಣಿಕೆ ಬಗ್ಗೆ ಯೋಚನೆ ಮಾಡುವಂತೆ ಮಾಡಿತು.
    ಯಾವಾಗ ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಸಾಧ್ಯವಿಲ್ಲ ಎಂಬ ಸಂದೇಶ ರವಾನೆ ಆಯಿತೋ ಅದರ ಬೆನ್ನಲ್ಲೇ ಕಾಂಗ್ರೆಸ್ ನಿಂದಲೂ ತಿರುಗೇಟು ಬಂದಿದ್ದು ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
    ರಾಜ್ಯದ ಸಂಪನ್ಮೂಲ ಸಂಗ್ರಹಣೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ ಅರವತ್ತು ಲಕ್ಷ ಜನ ಸಂಖ್ಯೆಯಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.
    ನಗರದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ಅತಿಯಾದ ಸಂಚಾರ ದಟ್ಟಣೆ ಕಸ ವಿಲೇವಾರಿ ಒಳಚರಂಡಿ ಮತ್ತು ಮಳೆಗಾಲದಲ್ಲಿ ಬಗ್ಗು ಪ್ರದೇಶದಲ್ಲಿ ನೀರು ತುಂಬಿ ಅಲ್ಲಿನ ನಿವಾಸಿಗಳು ಪರದಾಡುವ ಸಮಸ್ಯೆ ಮಾಮೂಲಿಯಾಗಿದೆ.
    ಇಂತಹ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಸ್ಪಂದಿಸಬೇಕಾದ ಮಹಾನಗರ ಪಾಲಿಕೆ ಚುನಾಯಿತ ಮಂಡಳಿ ಇಲ್ಲದೆ ಅಧಿಕಾರ ಶಾಹಿ ದರ್ಬಾರಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಹೀಗಾಗಿ ಜನಸಾಮಾನ್ಯರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಸಿಗುವ ಏಕೈಕ ಜನಪ್ರತಿನಿಧಿ ಎಂದರೆ ಶಾಸಕರು ಮಾತ್ರ. ಹೀಗಾಗಿ ಮತದಾರರು ಅತ್ಯಂತ ಎಚ್ಚರಿಕೆಯಿಂದ ಈ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ.
    ಈ ಚುನಾವಣೆಯಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ಸ್ಥಳೀಯವಾಗಿ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಬೆಂಗಳೂರು ನಗರದ ಸಮಸ್ಯೆ ನಗರದ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಣಾಳಿಕೆಯಾಗಲಿ ಅಥವಾ ತಮ್ಮ ದೃಷ್ಟಿಕೋನವನ್ನಾಗಲಿ ಬಹಿರಂಗಪಡಿಸಿಲ್ಲ.
    ಹಳೆಯ ಬೆಂಗಳೂರಿನ ಕೊಳಗೇರಿ ನಿವಾಸಿಗಳ ಜ್ವಲಂತ ಸಮಸ್ಯೆಗಳು, ಇತರ ಪ್ರದೇಶಗಳ ಸಂಚಾರ ದಟ್ಟಣೆ, ವಾಹನ ನಿಲುಗಡೆ, ಕಸ ವಿಲೇವಾರಿ, ಶೌಚಾಲಯ ಆಸ್ಪತ್ರೆ ಸರಕಾರಿ ಮತ್ತು ಪಾಲಿಕೆ ಶಾಲೆಗಳ ಕೊರತೆ ಇದ್ದರೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಒಳಚರಂಡಿ, ಮಳೆ ನೀರು ಕಾಲುವೆ ಒತ್ತುವರಿ,
    ಎ ಖಾತಾ ,ಬಿ ಖಾತಾ ಸಮಸ್ಯೆ, ಮೇಲ್ಸೇತುವೆ ಕುಡಿಯುವ ನೀರು ಹೀಗೆ ಹತ್ತು ಹಲವಾರು ಸಮಸ್ಯೆಗಳು ಇಲ್ಲಿಯ ನಿವಾಸಿಗಳನ್ನು ಕಾಡುತ್ತಿವೆ ಆದರೆ ಮೂರು ರಾಜಕೀಯ ಪಕ್ಷಗಳು ಈ ಬಗ್ಗೆ ಚಕಾರ ಎತ್ತಿಲ್ಲ ಬದಲಿಗೆ ಭ್ರಷ್ಟಾಚಾರ, ಸ್ವಚ್ಛ ಆಡಳಿತ, ಡಬಲ್ ಇಂಜಿನ್ ಸರ್ಕಾರ, ಟ್ರಬಲ್ ಇಂಜಿನ್ ಸರ್ಕಾರ , ಭಜರಂಗದಳ ,ಪಂಚರತ್ನ ಇಂತಹ ಕೆಲವು ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿವೆ ಒಟ್ಟಾರೆ ಬೆಂಗಳೂರಿನಲ್ಲಿ ಈ ಚುನಾವಣೆ ಎನ್ನುವುದು ಒಂದು ರೀತಿಯಲ್ಲಿ ಜಾತ್ರೆಯಂತೆ ನಡೆಯುತ್ತಿದೆ.
    1.ಗಾಂಧಿನಗರ- ಚತುಷ್ಕೋನ ಸ್ಪರ್ಧೆ:
    ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕಗಳ ಕೇಂದ್ರ ಕಚೇರಿಗಳನ್ನು ಹೊಂದಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೃದಯ ಭಾಗದ ಕ್ಷೇತ್ರ. ಇಲ್ಲಿ ಅತಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ಆಡಳಿತದ ಪ್ರಮುಖ ಕೇಂದ್ರ ಕಚೇರಿಗಳು ಇರುವ ಹಾಗೆಯೇ ನಾಗರಿಕ ಸೌಲಭ್ಯ ಗಳಿಗಾಗಿ ಪರದಾಡುವ ಲಕ್ಷ್ಮಣಪುರಿ, ಒಕಳಿಪುರಂ, ವಿ ವಿ ಗಿರಿ ಕಾಲೋನಿಯಂತಹ ಕೊಳಗೇರಿಗಳೂ ಇವೆ.
    ಈ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ ಈ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ ಕುಮಾರ್ ಸಂಸದ ಪಿ ಸಿ ಮೋಹನ್ ಅವರು ದಿನೇಶ್ ಗುಂಡೂರಾವ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳು ಮಾಮೂಲು.
    ಆದರೆ ಇದೇ ಮೊದಲ ಬಾರಿಗೆ ಇಂತಹ ಒಪ್ಪಂದದ ಮಾತು ಕೇಳಿ ಬರುತ್ತಿಲ್ಲ ಬಿಜೆಪಿಯಿಂದ ಹಿರಿಯ ನಾಯಕ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೇ ರೀತಿ ಜೆಡಿಎಸ್ ನಿಂದ ಉದ್ಯಮಿ ಸರ್ವೋದಯ ನಾರಾಯಣಸ್ವಾಮಿ ಕೂಡ ಎರಡನೇ ಬಾರಿ ಕಾಂಗ್ರೆಸ್ ಗೆ ಸವಾಲೋಡ್ಡಿದ್ದಾರೆ.
    ಚುನಾವಣೆಗೂ ಒಂದು ವರ್ಷ ಮೊದಲೇ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಮಾಡುತ್ತಾ ಉಚಿತ ಕ್ಯಾಂಟೀನ್ ಆರಂಭ ಸೇರಿದಂತೆ ಹಲವಾರು ಜನಪರ ಚಟುವಟಿಕೆಯಲ್ಲಿ ತೊಡಗಿದ್ದ ಮಾಜಿ ಸಚಿವ ಮಾಲೂರು ಎಸ್.ಎನ್. ಕೃಷ್ಣಯ್ಯಶೆಟ್ಟಿ ಬಿಜೆಪಿ ಟಿಕೆಟ್ ವಂಚಿತರಾದರೂ ಧೃತಿಗೆಡದೆ ಬಂಡಾಯದ ಬಾವುಟ ಆರಿಸಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ ಇವರಿಗೆ ಬಿ ಎಸ್ ಪಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಘೋಷಿಸಿವೆ.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ದಿನೇಶ್ ಗುಂಡೂರಾವ್ 47,000 ಮತ ಗಳಿಸಿದರೆ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಸಪ್ತಗಿರಿಗೌಡ 37,000 ಜೆಡಿಎಸ್ ನ ನಾರಾಯಣಸ್ವಾಮಿ 35,000 ಮತಗಳಿಸಿದ್ದರು. ಹೀಗಾಗಿ ಈ ಮೂವರಿಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವಿದೆ. ಇಲ್ಲಿ ಇದೀಗ ಹೊಸದಾಗಿ ಕೃಷ್ಣಯ್ಯ ಶೆಟ್ಟಿ ಕೂಡ ಪ್ರಾಬಲ್ಯ ಗಳಿಸಿದ್ದಾರೆ. ನಾಲ್ವರೂ ತಮ್ಮದೇ ಆದ ಪರ ಮತ್ತು ವಿರೋಧದ ವಾತಾವರಣ ಎದುರಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದು ಯಾರೇ ಗೆಲುವು ಸಾಧಿಸಿದರು ಅವರ ಅಂತರ ಅತ್ಯಂತ ಕಡಿಮೆ ಇರಲಿದೆ.
    2.ಶಿವಾಜಿನಗರ- ತ್ರಿಕೋನ ಸ್ಪರ್ಧೆ:
    ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ನ್ಯಾಯ ದೇಗುಲ ಹೈಕೋರ್ಟ್ ಸೇರಿದಂತೆ ಹಲವು ಪ್ರಮುಖ ತಾಣಗಳನ್ನು ಒಳಗೊಂಡಿರುವ ಶಿವಾಜಿನಗರ ಕ್ಷೇತ್ರ ಅಲ್ಪಸಂಖ್ಯಾತರ ಭದ್ರಕೋಟೆ ಎನ್ನಲಾಗಿದೆ ಆದರೂ ಕೂಡ ಇಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎರಡು ಬಾರಿ ಆಯ್ಕೆಯಾಗಿದ್ದು ವಿಶೇಷ.
    ಕ್ಷೇತ್ರ ಪುನರ್ ವಿಂಗಡಣೆ ನಂತರ ಜಯಮಹಲ್ ಕ್ಷೇತ್ರ ಕಣ್ಮರೆಯಾಗಿ ಅಲ್ಲಿಂದ ಆಯ್ಕೆಯಾಗುತ್ತಿದ್ದ ರೋಷನ್ ಬೇಗ್ ಶಿವಾಜಿನಗರಕ್ಕೆ ಬಂದರೆ, ಕಟ್ಟಾ ಸುಬ್ರಮಣ್ಯ ನಾಯ್ಡು ನೆರೆಯ ಹೆಬ್ಬಾಳಕ್ಕೆ ತೆರಳಿದರು.
    ಅಲ್ಪಸಂಖ್ಯಾತರು ತೆಲುಗು ಮತ್ತು ತಮಿಳು ಭಾಷೆಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯುವನಾಯಕ ರಿಜ್ವಾನ್ ಹರ್ಷದ್ ಮರು ಆಯ್ಕೆ ಬಯಸಿದರೆ, ಬಿಬಿಎಂಪಿ ಸದಸ್ಯ ಚಂದ್ರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಾಂತ್ರಿಕ ಕಾರಣಗಳಿಂದ ಜೆಡಿಎಸ್ ನ ಅಭ್ಯರ್ಥಿಯ ನಾಮಪತ್ರ ರದ್ದುಗೊಂಡಿದ್ದು ಆಮ್ ಆದ್ಮಿಯಿಂದ ಕಣಕ್ಕಿಳಿದಿರುವ ಉದ್ಯಮಿ ಪ್ರಕಾಶ್ ನೆಡುಂಗಡಿ ಎರಡೂ ಪಕ್ಷಗಳಿಗೆ ಸ್ಪರ್ಧೆ ಒಡ್ಡಿದ್ದಾರೆ.
    ಐಎಂಎ ಹಗರಣದ ಸುಳಿಯಲ್ಲಿ ಸಿಲುಕಿದ ಮಾಜಿ ಸಚಿವ ರೋಶನ್ ಬೇಗ್ ಕಾಂಗ್ರೆಸ್ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಲ್ಲಿ ಗುರುತಿಸಿಕೊಂಡರು. ಈ ಬಾರಿ ತಮಗೆ ಅಥವಾ ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದರು. ಆದರೆ ಬಿಜೆಪಿಯಿಂದ ಅಂತಹ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಇದೆ ಮೊದಲ ಬಾರಿಗೆ ರೋಷನ್ ಬೇಗ್ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ ಕೊನೆಯ ಕ್ಷಣದಲ್ಲಿ ಇವರು ಯಾರ ಪರ ನಿಲ್ಲುತ್ತಾರೋ ಅವರಿಗೆ ಗೆಲುವಿನ ಅವಕಾಶ ಹೆಚ್ಚು. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರಾ ನೇರ ಸ್ಪರ್ಧೆ ಇರುವಂತೆ ಕಂಡುಬಂದರೂ ಅಮ್ ಆದ್ಮಿ ಪಾರ್ಟಿ ಮಾಡುತ್ತಿರುವ ಸದ್ದಿಲ್ಲದ ಪ್ರಚಾರ ತಂತ್ರ ಕುತೂಹಲ ಮೂಡಿಸಿದ್ದು ಫಲಿತಾಂಶದ ಚಿತ್ರಣ ಬದಲಾಯಿಸುವ ಸಾಧ್ಯತೆ ಇದೆ.
    3.ಚಿಕ್ಕಪೇಟೆ -ಚತುಷ್ಕೋನ ಸ್ಪರ್ಧೆ:
    ಬೆಂಗಳೂರಿನ ಹೃದಯ ಭಾಗದ ಮತ್ತೊಂದು ವಾಣಿಜ್ಯ ಪ್ರದೇಶವಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಈ ಬಾರಿ ಚತುಷ್ಕೋನ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದೆ. ಪ್ರತಿ ಬಾರಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುತ್ತಿತ್ತು ಇದೆ ಮೊದಲ ಬಾರಿಗೆ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ ಜೊತೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಉಡುಗೊರೆಗಳ ಮೂಲಕ ದೊಡ್ಡ ರೀತಿಯ ಸದ್ದು ಮಾಡಿದ ಕೋಟ್ಯಾಧಿಪತಿ ಕೆ ಜಿ ಎಫ್ ಬಾಬು ಇದೀಗ ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
    ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇವರಾಜ್ ಇದು ತಮ್ಮ ಕೊನೆಯ ಚುನಾವಣೆ ಎಂದು ಕ್ಷೇತ್ರದಲ್ಲಿ ಭರಾಟೆಯ ಪ್ರಚಾರ ನಡೆಸುತ್ತಿದ್ದರೆ ಕೊನೆಯ ಹಂತದವರೆಗೆ ಟಿಕೆಟ್ ಕೈತಪ್ಪಲಿದೆ ಎನ್ನಲಾಗಿದ್ದ ಬಿಜೆಪಿಯ ಉದಯ್ ಗರುಡಾಚಾರ್ ಕೊನೆ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿದ್ದು ಬಿರುಸಿನ ಪ್ರಚಾರ ನಡೆಸಿದ್ದಾರೆ. ನೆರೆಯ ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದ ಇಮ್ರಾನ್ ಪಾಷಾ ಇಲ್ಲಿಂದ ಕಣಕ್ಕಿಳಿದಿದ್ದಾರೆ ಆಮ್ ಆದ್ಮಿ ಪಕ್ಷದಿಂದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಸ್ಪರ್ಧೆ ಮಾಡಿದ್ದು ಅಖಾಡಕ್ಕೆ ರಂಗು ಬಂದಿದೆ.
    ವ್ಯಾಪಾರಿಗಳು ಕೂಲಿ ಕಾರ್ಮಿಕರು ಅಲ್ಪಸಂಖ್ಯಾತರು ಮತ್ತು ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮತದಾರರ ನಾಡಿ ಮಿಡಿತ ಹಿಡಿಯುವುದು ತುಂಬಾ ಕಷ್ಟ ಹೀಗಾಗಿ ಯಾರೇ ಗೆದ್ದರೂ ಅಂತರ ಕೇವಲ ಕೆಲವೇ 100 ಮತಗಳನ್ನು ಮಾತ್ರ.
    4.ಮಲ್ಲೇಶ್ವರಂ- ನೇರಾ ನೇರ:
    ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ಸ್ಪರ್ಧೆಯ ಮೂಲಕ ದೇಶದ ಗಮನ ಸೆಳೆದಿರುವ ಈ ಕ್ಷೇತ್ರ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಪ್ರಮುಖ ಹೆಸರು ಗಳಿಸಿದೆ ಒಮ್ಮೆ ಸಿಪಿಐನಿಂದ ಕಾರ್ಮಿಕ ಮುಖಂಡ ಎಂ ಎಸ್ ಕೃಷ್ಣನ್ ಆಯ್ಕೆಯಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಂ ಆರ್ ಸೀತಾರಾಮ್ ಸತತವಾಗಿ ಎರಡು ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದರು ಆನಂತರದಲ್ಲಿ ಮೂರು ಬಾರಿ ಆಯ್ಕೆಯಾಗಿ ದಾಖಲೆ ಮಾಡಿರುವ ಅಶ್ವಥ್ ನಾರಾಯಣ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ನಾಲ್ಕು ಅವಧಿಯಲ್ಲೂ ಅಶ್ವಥ್ ನಾರಾಯಣ್ ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಬದಲಾಗಿರುವುದು ವಿಶೇಷ. ಈ ಕ್ಷೇತ್ರ ಕೂಡ ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿ ಹಿಂದೊಮ್ಮೆ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಮರುದಿನವೇ ವಿದೇಶಕ್ಕೆ ತೆರಳಿ ನಾಪತ್ತೆಯಾಗಿದ್ದರು.
    ಇಂತಹ ಹೊಂದಾಣಿಕೆ ಕ್ಷೇತ್ರದಲ್ಲಿ ಈ ಬಾರಿ ಒಪ್ಪಂದದ ಸದ್ದಿಲ್ಲ. ಒಕ್ಕಲಿಗ ಬ್ರಾಹ್ಮಣ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಕಾಂಗ್ರೆಸ್ ಹೊಸ ಮುಖ ಅನೂಪ್ ಅಯ್ಯಂಗಾರ್ ಅವರನ್ನು ಕಣಕ್ಕಿಳಿಸುವ ಮೂಲಕ ತನ್ನ ಸಾಂಪ್ರದಾಯಿಕ ಮತ ಬ್ಯಾಂಕಿನ ಜೊತೆಗೆ ಬ್ರಾಹ್ಮಣ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದು ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವಂತೆ ಕಂಡುಬರುತ್ತದೆಯಾದರು ಜೆಡಿಎಸ್ ನಿಂದ ಸ್ಪರ್ಧಿಸಿರುವ ಯುವಕ ಉತ್ಕರ್ಷ ಕುಮಾರ್ ಪಡೆಯುವ ಮತಗಳು ಗೆಲುವನ್ನು ನಿರ್ಧರಿಸಲಿದೆ.
    5.ರಾಜಾಜಿನಗರ- ತ್ರಿಕೋನ ಸ್ಪರ್ಧೆ:
    ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಅವರ ಸ್ಪರ್ಧೆಯಿಂದ ಗಮನ ಸೆಳೆಯುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸ ಪ್ರಯೋಗ ಮಾಡಿದೆ ವಿಧಾನ ಪರಿಷತ್ತಿಗೆ ಸತತವಾಗಿ ಆಯ್ಕೆಯಾಗುತ್ತಿರುವ ಬಿ ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸಿದೆ. ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಾದರೂ ನಂತರದಲ್ಲಿ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಪುಟ್ಟಣ್ಣ ಪರವಾಗಿ ಕೆಲಸ ಮಾಡುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ.
    ಜೆಡಿಎಸ್ ಇಲ್ಲಿ ಖ್ಯಾತ ವೈದ್ಯ ಒಕ್ಕಲಿಗರ ಸಂಘದ ಮುಖಂಡ ಡಾ. ಆಂಜಿನಪ್ಪ ಅವರನ್ನು ಕಣಕ್ಕಿಳಿಸಿದೆ ಇವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಒಕ್ಕಲಿಗ ಲಿಂಗಾಯತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಸುರೇಶ್ ಕುಮಾರ್ ಅವರಿಗೆ ಅವಕಾಶ ಇಲ್ಲ ಎಂಬ ವರದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಸುರೇಶ್ ಕುಮಾರ್ ಮತ್ತೆ ಟಿಕೆಟ್ ಗಿಟ್ಟಿಸಿದ್ದು ಮತದಾರರ ಮನೆಗೆ ಎಡತಾಕುವಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಮೂವರೂ ಅಭ್ಯರ್ಥಿಗಳು ತಮ್ಮದೇ ಆದ ಮತ ಬ್ಯಾಂಕನ್ನು ಹೊಂದಿರುವ ಪರಿಣಾಮ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
    6.ಬಸವನಗುಡಿ- ತ್ರಿಕೋನ ಸ್ಪರ್ಧೆ:
    ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ಯುಬಿ ವೆಂಕಟೇಶ್ ಅವರನ್ನು ಕಣಕ್ಕಿಳಿಸುವ ಮೂಲಕ ರಣತಂತ್ರ ರೂಪಿಸಿದೆ. ಕಳೆದ ಒಂದುವರೆ ವರ್ಷದಿಂದ ಯು ಬಿ ವೆಂಕಟೇಶ್ ಅವರು ಬಸವನಗುಡಿಯಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ ಅಂದಿನಿಂದಲೇ ವಿಧಾನಸಭೆ ಚುನಾವಣೆಗೆ ತಯಾರಾಗಿದ್ದ ಇವರು ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಬಿಜೆಪಿಯ ರವಿ ಸುಬ್ರಮಣ್ಯ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
    ಬಿಜೆಪಿಯಲ್ಲಿ ಒಂದು ಮನೆಗೆ ಒಂದೇ ಟಿಕೆಟ್ ಎಂಬ ತತ್ವವಿದೆ ಹೀಗಾಗಿ ರವಿ ಸುಬ್ರಮಣ್ಯ ಅವರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಸಂಸದರಾಗಿರುವ ಹಿನ್ನೆಲೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ದಿವಂಗತ ಅನಂತಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ದಟ್ಟವಾಗಿದ್ದವು ಆದರೆ ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿದ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಇದರಿಂದ ಬಿಜೆಪಿಯ ಹಲವು ಟಿಕೆಟ್ ಆಕಾಂಕ್ಷಿಗಳು ಬೇಸರಗೊಂಡರು ಪಕ್ಷ ಎಂಬ ಕಾರಣಕ್ಕೆ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ ಆದರೆ ತೇಜಸ್ವಿನಿ ಅನಂತಕುಮಾರ್ ತಟ್ಟಸ್ಥರಾಗಿರುವುದು ಗಮನ ಸೆಳೆಯುತ್ತಿದೆ.
    ಒಕ್ಕಲಿಗ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಇಲ್ಲಿಂದ ಜೆಡಿಎಸ್ ಇದೇ ಸಮುದಾಯಕ್ಕೆ ಸೇರಿದ ಸ್ಥಳೀಯ ಅರಮನೆ ಶಂಕರ್ ಅವರನ್ನ ಕಣಕ್ಕಿಳಿಸಿದ್ದು ಅವರು ಕೂಡ ಕಳೆದ ಒಂದುವರೆ ವರ್ಷದಿಂದ ಚುನಾವಣೆಗಾಗಿ ತಯಾರಿ ನಡೆಸಿದ್ದರು ಹೀಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಮೊದಲ ಬಾರಿಗೆ ಭಾರಿ ಪ್ರತಿರೋಧ ಎದುರಿಸುತ್ತಿದೆ.
    7. ಚಾಮರಾಜಪೇಟೆ-ಜಮೀರ್ ಓಟಕ್ಕೆ ಅಡ್ಡಗಾಲು.
    ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿನ ಸಂಖ್ಯೆಯ ಮತದಾರರಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಖಾಡ ಕದನ ಕೌತುಕ ಮೂಡಿಸಿದೆ. ಕಾಂಗ್ರೆಸ್ಸಿನ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕಟ್ಟಿ ಹಾಕಬೇಕೆಂದು ತಂತ್ರ ಮಾಡಿರುವ ಬಿಜೆಪಿ ಆಮ್ ಆದ್ಮಿ ಪಕ್ಷದಿಂದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕರೆತಂದು ತನ್ನ ಹುರಿಯಾಳಾಗಿ ಮಾಡಿದೆ. ಭಾಸ್ಕರ್ ರಾವ್ ಪೊಲೀಸ್ ಅಧಿಕಾರಿಯಾಗಿ ಈ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಕೋವಿಡ್ ಸೇರಿದಂತೆ ಸಂಕಷ್ಟ ಸಮಯದಲ್ಲಿ ಜಮೀರ್ ಅಹ್ಮದ್ ಖಾನ್ ಕೇವಲ ಅವರ ಸಮುದಾಯದವರಿಗೆ ಮಾತ್ರ ಸಹಾಯ ಮಾಡಿದರು ಎಂಬ ಆರೋಪವನ್ನು ಪ್ರಮುಖ ಅಸ್ತ್ರವನ್ನಾಗಿಸಿ ಕೊಂಡಿರುವ ಬಿಜೆಪಿ ಈದ್ಗಾ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಜೊತೆಗೆ ಗಣೇಶೋತ್ಸವ ಆಚರಣೆ ತನ್ನ ಕಾರ್ಯ ಸೂಚಿ ಎಂದು ಮತದಾರರ ಮುಂದಿಡುವ ಮೂಲಕ ಅಖಾಡಕ್ಕೆ ಭರ್ಜರಿ ರಂಗು ಬರುವಂತೆ ಮಾಡಿದೆ.
    ಕಾಂಗ್ರೆಸ್ಸಿನ ಜಮೀರ್ ಅಹ್ಮದ್ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದು ಅಲ್ಪಸಂಖ್ಯಾತರು ಮತ್ತು ಕೊಳಗೇರಿ ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವ ಶಾಲಿ ಆದರೆ ಇತರೇ ಭಾಗಗಳಲ್ಲಿ ಅಷ್ಟೇ ಪ್ರಮಾಣದ ಪ್ರತಿರೋಧ ಎದುರಿಸುತ್ತಿದ್ದಾರೆ.
    ಜೆಡಿಎಸ್ ನಿಂದ ಗೋವಿಂದರಾಜು ಮತ್ತು ಆಮ್ ಆದ್ಮಿ ಪಕ್ಷದಿಂದ ಪ್ರಕಾಶ್ ಚಂದ್ರ ಕಣದಲ್ಲಿದ್ದಾರೆ. ಈ ಇಬ್ಬರು ಪಡೆಯುವ ಮತಗಳು ನಿರ್ಣಾಯಕವಾಗಲಿವೆ.
    8. ವಿಜಯನಗರ-ಎಂ ಕೃಷ್ಣಪ್ಪ ಗೆಲುವಿಗೆ ಅಡ್ಡಿ:
    ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಲೇಔಟ್ ಕೃಷ್ಣಪ್ಪ ಎಂಬ ಖ್ಯಾತಿಯ ಕಾಂಗ್ರೆಸ್ಸಿನ ಎಂ ಕೃಷ್ಣಪ್ಪ ಅವರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಬೆವರು ಹರಿಸುತ್ತಿದೆ.
    ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗ ಮತಗಳ ಜೊತೆಗೆ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಂ ರವೀಂದ್ರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕಳೆದ ಚುನಾವಣೆಯಲ್ಲಿ ಇವರು ಎಂ ಕೃಷ್ಣಪ್ಪ ಅವರಿಗೆ ಬಾರಿ ಪೈಪೋಟಿ ನೀಡಿದ್ದರು ಅದೇ ಆಧಾರದಲ್ಲಿ ಇವರಿಗೆ ಮತ್ತೆ ಟಿಕೆಟ್ ನೀಡುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.
    ಆದರೆ ಕೋವಿಡ್ ಸಮಯ ಸೇರಿದಂತೆ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರ ಪಾಲಿಗೆ ಆಸರೆಯಾದ ಶಾಸಕ ಎಂ ಕೃಷ್ಣಪ್ಪ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಶಕ್ತಿಯುತರಾಗಿರುವಂತೆ ಕಾಣುತ್ತಿದ್ದಾರೆ. ಜೆಡಿಎಸ್ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಆರ್‌ಪಿಐ ನ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ.
    9. ಗೋವಿಂದರಾಜ ನಗರ: ಸಪ್ಪೆಯಾದ ಸ್ಪರ್ಧೆ-
    ಬಿಜೆಪಿ ಹಿರಿಯ ನಾಯಕ ವಿ. ಸೋಮಣ್ಣ ಅವರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆಯುತ್ತಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಖಾಡ ಈ ಬಾರಿ ಅಂತಹ ಕುತೂಹಲ ಮೂಡಿಸಿಲ್ಲ.
    ಒಕ್ಕಲಿಗ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ವಿ. ಸೋಮಣ್ಣ ಒಂದು ಬಾರಿ ಸೋತು ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮೂರನೇ ಬಾರಿ ಈ ಕ್ಷೇತ್ರದಿಂದ ತಮ್ಮ ಪುತ್ರ ಅರುಣ್ ಸೋಮಣ್ಣ ಅವರನ್ನು ಆಯ್ಕೆ ಮಾಡಿಸಬೇಕು ಎಂಬ ಅವರ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಲಿಲ್ಲ ಬದಲಿಗೆ ಅವರನ್ನು ಚಾಮರಾಜನಗರ ಮತ್ತು ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮಾಡಿದೆ. ಹೀಗಾಗಿ ಈ ಕ್ಷೇತ್ರದಿಂದ ಸೋಮಣ್ಣ ಅವರ ಆಪ್ತ ಉಮೇಶ್ ಶೆಟ್ಟಿ, ಬಿಜೆಪಿ ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್ ನಿಂದ ಶಾಸಕ ಎಂ ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಜೆಡಿಎಸ್ ನಿಂದ ಆ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಕಣಕ್ಕಿಳಿದಿದ್ದು ಪ್ರಿಯಕೃಷ್ಣ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಸೋಮಣ್ಣ ಅವರು ಪ್ರಿಯಕೃಷ್ಣ ಅವರ ಸಾಂಪ್ರದಾಯಿಕ ಎದುರಾಳಿ, ಆದರೆ ಈ ಬಾರಿ ಅವರು ಕಣದಲ್ಲಿ ಇಲ್ಲದಿರುವುದು ಬಿಜೆಪಿಯ ಸ್ಪರ್ಧೆ ಅಷ್ಟಾಗಿ ಸದ್ದು ಮಾಡುತ್ತಿಲ್ಲ.
    ಮಹಾಲಕ್ಷ್ಮಿ ಲೇಔಟ್-ವ್ಯಕ್ತಿಕೇಂದ್ರಿತ ಸ್ಪರ್ಧೆ
    ಮಂಡ್ಯ ತುಮಕೂರು ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಉದ್ಯೋಗ ಅರಸಿ ಬಂದ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಹಲವಾರು ನಾಗರಿಕ ಸಮಸ್ಯೆಗಳಿವೆ ಇವುಗಳಿಗೆಲ್ಲ ತಕ್ಷಣಕ್ಕೆ ಸ್ಪಂದಿಸಿ ಪರಿಹಾರ ಕಲ್ಪಿಸುವಲ್ಲಿ ಶ್ರಮಿಸಿದ ಹೆಗ್ಗಳಿಕೆಯೊಂದಿಗೆ ಮತ್ತೊಮ್ಮೆ ಕಣದಲ್ಲಿರುವ ಸಚಿವ ಗೋಪಾಲಯ್ಯ ಎಲ್ಲರಿಗಿಂತಲೂ ಜನಪ್ರಿಯತೆಯಲ್ಲಿ ಮುಂದಿದ್ದಾರೆ.
    ಈ ಮೊದಲು ಜೆ ಡಿ ಎಸ್ ನಿಂದ ಆಯ್ಕೆ ಆಗಿದ್ದ ಗೋಪಾಲಯ್ಯ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿ ಮರು ಆಯ್ಕೆಯಾಗಿದ್ದಾರೆ ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿದಿರುವ ಅವರಿಗೆ ಕಾಂಗ್ರೆಸ್ಸಿನ ಕೇಶವಮೂರ್ತಿ ಎದುರಾಳಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಹೊಂದಿದೆಯಾದರೂ ಗೋಪಾಲಯ್ಯ ಅವರ ನಾಗಾಲೋಟದ ಮುಂದೆ ಲೆಕ್ಕಕ್ಕಿಲ್ಲ. ಜೆಡಿಎಸ್ ಕೂಡ ಕೆ.ಸಿ.ರಾಜಣ್ಣ ಅವರನ್ನು ಕಣಕ್ಕಿಳಿಸಿದೆ ಅವರು ಕೂಡ ತನ್ನ ಸಾಂಪ್ರದಾಯಿಕ ಮತ ಬ್ಯಾಂಕನ್ನು ನೆಚ್ಚಿಕೊಂಡಿದ್ದಾರೆ. ಇಲ್ಲಿ ಇಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಇದ್ದರೂ ಕೂಡ ಗೋಪಾಲಯ್ಯ ಅವರ ವೈಯಕ್ತಿಕ ವರ್ಚಸ್ಸು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.
    10. ಯಶವಂತಪುರ -ಅನುಕಂಪದ ಅಲೆ ದಡ ಸೇರಿಸಬಹುದೇ.?
    ವಲಸಿಗರು ಮತ್ತು ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ವಿಸ್ತೀರ್ಣದಲ್ಲಿ ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಕ್ಷೇತ್ರವಾಗಿದೆ. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೊದಲ ಬಾರಿಗೆ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದರು ಆನಂತರ ಎರಡು ಬಾರಿ ಕಾಂಗ್ರೆಸ್ ನಿಂದ ಎಸ್ ಟಿ ಸೋಮಶೇಖರ್ ಆಯ್ಕೆಯಾಗಿದ್ದು ಇದೀಗ ಬಿಜೆಪಿ ಸೇರಿ ಅವರು ಕಮಲ ಪಾಳಯದ ಸಿಪಾಯಿ ಆಗಿದ್ದಾರೆ. ಈ ಬಾರಿ ಅವರು ಜೆಡಿಎಸ್ ನ ಜವರಾಯಿಗೌಡ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ ಮೂರು ಬಾರಿ ಸೋಮಶೇಖರ್ ವಿರುದ್ಧ ಸ್ಪರ್ಧಿಸಿ ಸೋತಿರುವ ಜವರಾಯಿಗೌಡ ಅದೇ ಅನುಕಂಪವನ್ನು ಮತದಾರರ ಮುಂದೆ ಇಟ್ಟು ತನ್ನನ್ನು ದಡ ಸೇರಿಸಿ ಎಂದು ಮೊರೆ ಇಡುತ್ತಿದ್ದಾರೆ ಕಾಂಗ್ರೆಸ್ಸಿನಿಂದ ಇಲ್ಲಿ ಬಾಲರಾಜ ಗೌಡ ಸ್ಪರ್ಧಿಸಿದ್ದರೂ ಈ ಇಬ್ಬರ ಪೈಪೋಟಿಯ ಮುಂದೆ ಅವರೇನೂ ಅಲ್ಲ ಎಂಬಂತೆ ಆಗಿದೆ. ಚುನಾವಣೆಗೂ ಮುನ್ನ ನನ್ನ ಗೆಲುವು ನಿಶ್ಚಿತ ಎಂದು ಬೀಗುತ್ತಿದ್ದ ಎಸ್ ಟಿ ಸೋಮಶೇಖರ್ ಅವರಿಗೆ ಜವರಾಯಿ ಗೌಡ ನೀಡಿರುವ ಸವಾಲು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.
    11.ರಾಜರಾಜೇಶ್ವರಿ ನಗರ: ಪ್ರಬಲ ಪೈಪೋಟಿ.
    ಕಾಂಗ್ರೆಸ್ ನಿಂದ ಆಯ್ಕೆಯಾಗಿ ಬಿಜೆಪಿ ಸೇರಿ ಮಂತ್ರಿಯಾಗಿರುವ ಮುನಿರತ್ನ ಈ ಬಾರಿ ಮತ್ತೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ ಶಾಸಕರಾಗಿ ಮತ್ತು ಮಂತ್ರಿ ಆಗಿ ತಾವು ಕೈಗೊಂಡ ಹಲವು ಜನಪರ ಯೋಜನೆಗಳು ಕೋವಿಡ್ ಸಮಯದಲ್ಲಿ ತಾವು ನೀಡಿದ ನೆರವು ತಮ್ಮ ಕೈ ಹಿಡಿಯಲಿದೆ ಎಂದು ನಂಬಿದ್ದಾರೆ. ಆದರೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದ ಮತದಾರರು ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರು ಇಲ್ಲಿಯವರೆಗೆ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್ ದಿವಂಗತ ಡಿ.ಕೆ. ರವಿ ಅವರ ಪುತ್ರಿ ಕುಸುಮಾ ಹನುಮಂತ ರಾಯಪ್ಪ ಅವರನ್ನು ಕಣಕ್ಕಿಳಿಸಿದ್ದು ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಸಂಸದ ಡಿಕೆ ಸುರೇಶ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವುದು ಅಖಾಡಕ್ಕೆ ಬಾರಿ ರಂಗು ತಂದು ಕೊಟ್ಟಿದೆ. ಜೆಡಿಎಸ್ ನಿಂದ ಡಾ. ನಾರಾಯಣಸ್ವಾಮಿ ಕನ್ನಡದಲ್ಲಿದ್ದು ತನ್ನ ಸಾಂಪ್ರದಾಯಿಕ ಮತ ಬ್ಯಾಂಕನ್ನು ನೆಚ್ಚಿಕೊಂಡಿದ್ದಾರೆ ಮೇಲ್ನೋಟಕ್ಕೆ ಸ್ಪರ್ಧೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ.
    12. ಬೆಂಗಳೂರು ದಕ್ಷಿಣ-ಯಾರಾಗಲಿದ್ದಾರೆ ಅಧಿಪತಿ
    ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದೆ ಹಿರಿಯ ನಾಯಕ ಎಂ ಶ್ರೀನಿವಾಸ್ ಅವರ ಸೋದರ ಎಂ ಕೃಷ್ಣಪ್ಪ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ ಈ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ವರು ಬೇರೆ -ಬೇರೆ ಅಭ್ಯರ್ಥಿಗಳನ್ನು ವಿರುದ್ಧ ಕಣಕ್ಕಿಳಿಸಿದೆ. ಜೆಡಿಎಸ್ ನಿಂದ ಸತತ ಸ್ಪರ್ಧೆ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ ಇದರಿಂದ ಮುನಿಸಿಕೊಂಡಿರುವ ಅವರು ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಪರವಾಗಿ ಭರಾಟೆ ಪ್ರಚಾರ ನಡೆಸುತ್ತಿದ್ದಾರೆ ಆರ್ ಕೆ ರಮೇಶ್ ಕಳೆದೊಂದು ವರ್ಷದಿಂದ ತಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಲಸ ಮಾಡುತ್ತಿರುವುದು ಅವರಿಗೆ ಸಾಕಷ್ಟು ಅನುಕೂಲ ತಂದಿದೆ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಪ್ರಭಾಕರ್ ರೆಡ್ಡಿ ಇವರ ಬೆಂಬಲಿಸಿರುವುದು ಮತ್ತಷ್ಟು ಶಕ್ತಿ ಬರುವಂತೆ ಮಾಡಿದೆ. ಜೆಡಿಎಸ್ ಎಚ್ ಪಿ ರಾಜೇಶ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ ರೆಡ್ಡಿ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ಮತದಾರರು ಈ ಕ್ಷೇತ್ರದಲ್ಲಿದ್ದು ಅಷ್ಟೇ ಪ್ರಮಾಣದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಇದ್ದಾರೆ. ಇವರನ್ನು ಜೆಡಿಎಸ್ ಬಲವಾಗಿ ನಂಬಿದೆ ಎರಡು ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ಸಮೀಪ ಬಂದಿತ್ತು ಆದರೆ ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಕೃಷ್ಣಪ್ಪ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
    13. ಪದ್ಮನಾಭನಗರ-ಸಾಮ್ರಾಟ್ ಕಿರೀಟ ಕಳಚುವುದೇ..
    ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿದ್ದ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಆರ್.ಅಶೋಕ್ ಕ್ಷೇತ್ರ ಪುನರ್ ವಿಂಗಡಣೆ ನಂತರ ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ನಾಲ್ಕನೇ ಬಾರಿ ಇಲ್ಲಿಂದ ಆಯ್ಕೆ ಬಯಸಿರುವ ಅವರಿಗೆ ಇದೆ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಪ್ರಬಲ ಪೈಪೋಟಿ ಎದುರಾಗಿದೆ. ಹೊಂದಾಣಿಕೆ ರಾಜಕಾರಣದ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ರಾಜಕೀಯ ಚಿತ್ರಣ ಬದಲಾಗಿದೆ ಎನಿಸಿದರೂ ಕೂಡಾ ಜೆಡಿಎಸ್ ಅಭ್ಯರ್ಥಿಯ ನಡೆ ರಾಜಕೀಯ ಒಳ ಒಪ್ಪಂದದ ಬಗ್ಗೆ ಮತ್ತೆ ಅನುಮಾನ ಬರುವಂತೆ ಮಾಡಿದೆ. ವಿಶೇಷವೆಂದರೆ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬದಲಾಯಿಸುತ್ತಲೇ ಬಂದಿದೆ. ಹೈಕಮಾಂಡ್ ಸೂಚನೆಯಂತೆ ಆರ್ ಅಶೋಕ್ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ವಿರುದ್ಧ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪದ್ಮನಾಭನಗರ ಕ್ಷೇತ್ರದ ಸ್ಪರ್ಧೆ ಕುತೂಹಲ ಮೂಡಿಸಿದೆ. ಜೆಡಿಎಸ್ ನಿಂದ ಬಿ ಮಂಜುನಾಥ್ ಸ್ಪರ್ಧೆ ಮಾಡಿದ್ದರೂ ಕಾಂಗ್ರೆಸ್ ನ ರಘುನಾಥ ನಾಯ್ಡು ಮತ್ತು ಆರ್ ಅಶೋಕ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
    14. ಜಯನಗರ- ನೇರ ಹಣಾಹಣಿ:
    ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಎರಡನೇ ಬಾರಿ ಆಯ್ಕೆ ಬಯಸಿರುವ ಈ ಕ್ಷೇತ್ರದಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿದೆ. ತನ್ನ ಕೈಜಾರಿ ಕಾಂಗ್ರೆಸ್ ಪಾಲಾಗಿರುವ ಕ್ಷೇತ್ರವನ್ನು ಮರು ವಶಪಡಿಸಿಕೊಳ್ಳಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿ ಕೆ ರಾಮಮೂರ್ತಿ ಅವರನ್ನು ಕಣಕ್ಕಿಳಿಸಿದೆ. ಬಿಬಿಎಂಪಿ ಸದಸ್ಯರಾಗಿ ರಾಮಮೂರ್ತಿ ಮಾಡಿರುವ ಕೆಲಸಗಳು ಮತ್ತು ಪ್ರಬಲ ಹಿಂದುತ್ವ ಪ್ರತಿಪಾದನೆ ಯೊಂದಿಗೆ ಬಿಜೆಪಿ ಸೌಮ್ಯ ರೆಡ್ಡಿ ಅವರಿಗೆ ಪ್ರಬಲ ಸ್ಪರ್ಧೆ ಕೊಟ್ಟಿದೆ. ಕ್ಷೇತ್ರದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಮೆಚ್ಚಿಕೊಂಡಿರುವ ಸೌಮ್ಯ ರೆಡ್ಡಿ ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರ ಶ್ರೀರಕ್ಷೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದು ಜೆಡಿಎಸ್ ಸ್ಪರ್ಧೆ ಕೇವಲ ನೆಪ ಮಾತ್ರ ಎಂಬಂತಾಗಿದೆ. ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ತಮ್ಮದೇ ಪಡೆಯೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಗಮನ ಸೆಳೆದಿದ್ದಾರೆ ರಾಮಲಿಂಗಾರೆಡ್ಡಿ ನೆರೆಯ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು ಕೂಡ ತಮ್ಮ ಬಹುತೇಕ ಸಮಯವನ್ನು ತಮ್ಮ ಪುತ್ರಿಯ ಗೆಲುವಿಗಾಗಿ ಮೀಸಲಿಟ್ಟಿರುವುದು ಕುತೂಹಲ ಮೂಡಿಸಿದೆ.
    15.ಬಿ ಟಿ ಎಂ ಲೇಔಟ್: ಕಮಲ ಅರಳಿಸುವ ಯತ್ನ
    ಬೆಂಗಳೂರು ನಗರದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಅಸ್ತಿತ್ವಕ್ಕೆ ಬಂದ ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಸಾದ್ ರೆಡ್ಡಿ ಅವರಿಂದ ಪ್ರಬಲ ಪೈಪೋಟಿ ಎದುರಿಸಿದ್ದ ರಾಮಲಿಂಗ ರೆಡ್ಡಿ ಅವರಿಗೆ ಆ ನಂತರದಲ್ಲಿ ಅಂತಹ ಎದುರಾಳಿ ಎದುರಾಗಿಲ್ಲ ಜೆಡಿಎಸ್ ಅಭ್ಯರ್ಥಿಯಾಗಿ ವೆಂಕಟೇಶ್ ಕಣದಲ್ಲಿ ಇದ್ದರು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಬಿಜೆಪಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರೆಡ್ಡಿ ಸಮುದಾಯದ ಮತದಾರರ ಶ್ರೀಧರರೆಡ್ಡಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಮಲಿಂಗ ರೆಡ್ಡಿ ಅವರಿಗೆ ಪ್ರಬಲ ಪೈಪೋಟಿ ನೀಡಿದೆ. ಆದರೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಮಲಿಂಗ ರೆಡ್ಡಿ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುತ್ತಾ ಪ್ರಚಾರ ನಡೆಸಿರುವುದು ಬಿಜೆಪಿಗೆ ದೊಡ್ಡ ಅಡ್ಡಿಯಾಗಿದೆ.
    16. ಬೊಮ್ಮನಹಳ್ಳಿ-ಗೆಲುವಿನ ಓಟಕ್ಕೆ ಕಡಿವಾಣ:
    ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿಯ ಸತೀಶ್ ರೆಡ್ಡಿ ಸತತವಾಗಿ ಆಯ್ಕೆಯಾಗುತ್ತಿದ್ದು ಕಾಂಗ್ರೆಸ್ ಈ ಬಾರಿ ಇದನ್ನು ಕೈವಶ ಮಾಡಿಕೊಳ್ಳಲು ಸಾಕಷ್ಟು ಬೆವರು ಹರಿಸತೊಡಗಿದೆ.
    ಕ್ಷೇತ್ರದಲ್ಲಿ ಸತೀಶ್ ರೆಡ್ಡಿ ಎದುರಿಸುತ್ತಿರುವ ವಿರೋಧ ಮತ್ತು ಆಡಳಿತ ವಿರೋಧಿ ಅಲೆಯನ್ನು ಪ್ರಬಲವಾಗಿ ನೆಚ್ಚಿಕೊಂಡಿರುವ ಕಾಂಗ್ರೆಸ್, ಯುವ ಉದ್ಯಮಿ ಉಮಾಪತಿ ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು ದಲಿತ ಮತ್ತು ಒಕ್ಕಲಿಗರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸಿದೆ. ಜೆಡಿಎಸ್ ನಿಂದ ನಾರಾಯಣ ರಾಜು ಕಣದಲ್ಲಿದ್ದರೂ ಕೂಡ ಸ್ಪರ್ಧೆ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ
    17. ಮಹಾದೇವಪುರ-ನೇರ ಸ್ಪರ್ಧೆ
    ಸಾಕಷ್ಟು ಪ್ರಮಾಣದಲ್ಲಿ ಐಟಿ ಕಂಪನಿಗಳು ಹೊರರಾಜ್ಯದಿಂದ ವಲಸೆ ಬಂದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಕುಡಿಯುವ ನೀರು ಒತ್ತುವರಿ ದೊಡ್ಡ ಸಮಸ್ಯೆ ಇಂತಹ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಬೇರೆ ಲೆಕ್ಕಾಚಾರದಲ್ಲಿ ಅವರ ಪತ್ನಿ ಶ್ರೀಮತಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಈ ಹಿಂದೆ ಮುಳಬಾಗಿಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ವೈಟ್ ಫೀಲ್ಡ್ ನ ನಿವಾಸಿ ಎಚ್ ನಾಗೇಶ್ ಅವರನ್ನು ಕಣಕ್ಕಿಳಿಸಿದೆ. ತಾವು ಸ್ಥಳೀಯ ಎಂದು ಪ್ರಚಾರ ಮಾಡುತ್ತಿದ್ದ ನಾಗೇಶ್ ಅವರಿಗೆ ತಿರುಗೇಟು ನೀಡಲು ಬಿಜೆಪಿ ಸ್ಥಳೀಯರಾದ ಅರವಿಂದ ಲಿಂಬಾವಳಿ ಅವರ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ಎದುರೇಟು ನೀಡಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕರು ಎದುರಿಸುತ್ತಿರುವ ಸ್ಥಳೀಯ ವಿರೋಧ ಮತ್ತು ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ನಾಗೇಶ್ ತಮ್ಮ ಪರವಾದ ಅಲೆಯನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸಿದರೆ, ಮಂಜುಳಾ ಲಿಂಬಾವಳಿಯವರು ತಾವೇನು ಕಡಿಮೆ ಇಲ್ಲ ಎಂಬಂತೆ ನೀಡಿರುವ ಪೈಪೋಟಿ ಕುತೂಹಲ ಮೂಡಿಸದೆ ಜೆಡಿಎಸ್ ಇಲ್ಲಿ ಆರ್‌ಪಿಐಗೆ ಬೆಂಬಲ ಘೋಷಿಸಿದೆ.

    Verbattle
    Verbattle
    Verbattle
    ಕಾಂಗ್ರೆಸ್ Election ತುಮಕೂರು ತೇಜಸ್ವಿ ಸೂರ್ಯ ನ್ಯಾಯ ರಾಜಕೀಯ ವಾಣಿಜ್ಯ Business ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleರಾಹುಲ್ ಗಾಂಧಿ-ಕುಮಾರಸ್ವಾಮಿ ಮಾಡಿದ್ದರೆ?
    Next Article `ರಾಧಿಕಾ’ ನಿರ್ಮಾಪಕರಿಂದ ಕಾವ್ಯಾಗೆ ‘ಶಾಸ್ತಿ’ ಧಿಡೀರ್ ಹೊರಕ್ಕೆ! Kavya Shastri
    vartha chakra
    • Website

    Related Posts

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    February 11, 2026

    ಭೂಸ್ವಾಧೀನ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಗೆಲುವು

    February 11, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಜೋರಾಗಿ ಕೆಮ್ಮೋದು ತಪ್ಪಾ..?

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn on ರೆಸಾರ್ಟ್ ಮತ್ತು ಹೋಂ ಸ್ಟೇ ಗಳ ಭದ್ರತೆ ಹೆಚ್ಚಳ
    • StellaHewly on ATM ಸರ್ಕಾರದ ಸಾರಥಿ ಸಿದ್ದರಾಮಯ್ಯ? | ATM Sarkara
    • Glennhof on ಎ.ಐ ಹುಡುಗಿ ನೋಡಿ ಹಳ್ಳಕ್ಕೆ ಬಿದ್ದ!
    Latest Kannada News

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    February 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.