ಬೆಂಗಳೂರು:ವಿಧಾನಪರಿಷತ್ ನಲ್ಲಿ ನಡೆದ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂಎಲ್ಸಿ ಸಿಟಿರವಿ ಪ್ರಕರಣದ ಸಂಬಂಧ ದೂರು, ಪ್ರತಿದೂರುಗಳು ದಾಖಲಾಗುತ್ತಿವೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ 13 ಪುಟಗಳ ದೂರನ್ನು
ಸಲ್ಲಿಸಿರುವ ಸಿಟಿ ರವಿ ಬಂಧನದ ವೇಳೆ ನಡೆಸಿದ ಪೊಲೀಸ್ ದೌರ್ಜನ್ಯದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಿಂಸೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಜಿಪಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಒಂದೆಡೆ ಸಿಐಡಿ ಅಧಿಕಾರಿಗಳು ಪ್ರಕರಣದ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಸಿಟಿ ರವಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯಪಾಲರಿಗೆ, ಡಿಐಜಿ ಅಲೋಕ್ ಮೋಹನ್ ಅವರಿಗೆ ಸಿಟಿ ರವಿ ದೂರು ನೀಡಿದ್ದು, ನನಾ ಕೊಟ್ಟ ದೂರಿನ ಸಂಬಂಧ ಇನ್ನು ಎಫ್ಐಆರ್ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ ಪ್ರಕರಣದಲ್ಲಿ ಸಿಐಡಿಗೆ ಅತಿದೊಡ್ಡ ಸವಾಲ್ ಅಂದರೆ ಪರಿಷತ್ನಲ್ಲಿ ಮಹಜರು ನಡೆಸುವುದು. ಈ ಸಂಬಂಧ ಈಗಾಗಲೇ ಸಭಾಪತಿಗಳಿಗೆ ಪತ್ರ ಬರೆದು ಮಹಜರಿಗೆ ಅನುಮತಿ ಕೇಳಿದ್ದಾರೆ. ಆದರೆ ಹೇಗೆ ಮಹಜರು ಮಾಡ್ತೀರಾ ಎಂದು ವಿವರವಾಗಿ ತಿಳಿಸುವಂತೆ ಸಭಾಪತಿ ಹೊರಟ್ಟಿ ಪ್ರಶ್ನಿಸಿದ್ದರು. ಸಿಐಡಿ ಉತ್ತರ ಬಂದ ಬಳಿಕ ಮಹಜರು ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಸದನದೊಳಗೆ ನಡೆದ ಘಟನೆಯಾಗಿದ್ದರಿಂದ ಸಭಾಪತಿಗಳದ್ದೇ ಅಂತಿಮ ತೀರ್ಮಾನ ಎಂದು ಹೇಳಿದ್ದರು.
ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿರುವುದಕ್ಕೆ ಆಕ್ರೋಶಗೊಂಡಿರುವ ಸಿ.ಟಿ.ರವಿ ಇತ್ತೀಚೆಗೆ ಡಿಜಿ& ಐಜಿಪಿ ಅಲೋಕ್ ಮೋಹನ್ ಭೇಟಿ ಆಗಿ 8 ಪುಟಗಳ ದೂರು ನೀಡಿದ್ದರು. ಇಡೀರಾತ್ರಿ ಅಲೆದಾಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು