ಬೆಳಗಾವಿ,
ಅಧಿಕಾರ ಹಸ್ತಾಂತರ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲಕರ ಘಟ್ಟ ತಲುಪಿವೆ. ಹೈಕಮಾಂಡ್ ಅಭಯ ತನ್ನ ಮೇಲಿದೆ ಹೀಗಾಗಿ ಯಾರು ಆತಂಕಕ್ಕೆ ಒಳಗಾಗಬೇಡಿ ಧೈರ್ಯದಿಂದ ಇರುವಂತೆ ತಮ್ಮ ಬೆಂಬಲಿಗರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಕುರಿತ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಭೋಜನಕೋಟ ನಡೆಸಿದ್ದರು. ಇದರೊಂದಿಗೆ ಅಧಿಕಾರ ಹಸ್ತಾಂತರ ಕುರಿತಾದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು
ಇದರ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಕೂಡ ಭೋಜನಕೂಟ ರಾಜಕಾರಣ ಆರಂಭಿಸಿದ್ದಾರೆ ಕಳೆದ ರಾತ್ರಿ ಬೆಳಗಾವಿಯ ತಮ್ಮ ಆಪ್ತ ಗಣಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ದೊಡ್ಡಣ್ಣವರ್ ಅವರ ಫಾರ್ಮ್ ಹೌಸ್ನಲ್ಲಿ ತಮ್ಮ ಆಪ್ತಪಣದ ಶಾಸಕರು ಮತ್ತು ಮಂತ್ರಿಗಳಿಗೆ ಭೋಜನ ಕೂಟ ಆಯೋಜಿಸಿದ್ದರು.
ಇದರಲ್ಲಿ ಎಚ್ ಸಿ ಬಾಲಕೃಷ್ಣ – ಮಾಗಡಿ, ಬಸವರಾಜ್ ಶಿವಗಂಗಾ- ಚನ್ನಗಿರಿ, ಇಕ್ಬಾಲ್ ಹುಸೇನ್ – ರಾಮನಗರ,ಉದಯ ಕೆ ಎಂ – ಮದ್ದೂರು,ಬಾಬಾ ಸಾಹೇಬ್ ಪಾಟೀಲ್ -ಕಿತ್ತೂರು,ಮಹೇಂದ್ರ ತಮ್ಮಣ್ಣ – ಕುಡುಚಿ,ನಯನ ಮೋಟಮ್ಮ – ಮೂಡಿಗೆರೆ,ಎಚ್ ಡಿ ರಂಗನಾಥ್ – ಕುಣಿಗಲ್,ಸಿಪಿ ಯೋಗೇಶ್ವರ್ – ಚನ್ನಪಟ್ಟಣ,ಲಕ್ಷ್ಮಣ ಸವದಿ – ಅಥಣಿ,ಶ್ರೀನಿವಾಸ್ – ನೆಲಮಂಗಲ, ಶಿವಣ್ಣ – ಆನೇಕಲ್,ಎಸ್ ಆರ್ ಶ್ರೀನಿವಾಸ್ – ಗುಬ್ಬಿ,ಪುಟ್ಟಸ್ವಾಮಿ ಗೌಡ – ಪಕ್ಷೇತರ ಶಾಸಕ ( ಗೌರಿ ಬಿದನೂರು),ರಮೇಶ್ ಬಂಡಿಸಿದ್ದೇಗೌಡ – ಶ್ರೀರಂಗಪಟ್ಟಣ,ರಾಜೇಗೌಡ – ಶೃಂಗೇರಿ,ಅಶೋಕ್ ರೈ – ಪುತ್ತೂರು,ಎನ್ ಎ ಹ್ಯಾರಿಸ್ – ಶಾಂತಿನಗರ,ಎಚ್ ಡಿ ತಮ್ಮಯ್ಯ – ಚಿಕ್ಕಮಗಳೂರು, ತನ್ವೀರ್ ಸೇಠ್ – ನರಸಿಂಹ ರಾಜ,ಶರತ್ ಬಚ್ಚೇಗೌಡ – ಹೊಸಕೋಟೆ,ಹರೀಶ್ ಗೌಡ -ಚಾಮರಾಜ ಕ್ಷೇತ್ರ,ದರ್ಶನ್ ಧ್ರುವನಾರಾಯಣ್ – ನಂಜನಗೂಡು,
ಭೀಮಣ್ಣ ನಾಯ್ಕ್ – ಶಿರಸಿ,ಕೆ. ಷಡಾಕ್ಷರಿ- ತಿಪಟೂರು
ಮಂತರ್ ಗೌಡ, ಮಡಿಕೇರಿ,ಎನ್.ವೈ.ಗೋಪಾಲಕೃಷ್ಣ, ಮೊಳಕಾಲ್ಮೂರು,ಶ್ರೀನಿವಾಸ ಮಾನೆ-ಹಾವೇರಿ, ಕೋನರೆಡ್ಡಿ -ನವಲಗುಂದ,ಅಪ್ಪಾಜಿ ನಾಡಗೌಡ -ಬಾಗಲಕೋಟೆ,ಭರತ್ ರೆಡ್ಡಿ-ಬಳ್ಳಾರಿ, ಶಿವರಾಂ ಹೆಬ್ಬಾರ್,ಎಸ್.ಟಿ.ಸೋಮಶೇಖರ್ ಸಚಿವರಾದ ಮಂಕಾಳ ವೈದ್ಯ,ಡಿ.ಸುಧಾಕರ್ , ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ 15ಕ್ಕೂ ಹೆಚ್ಚು ವಿಧಾನ ಪರಿಷತ್ ಸದಸ್ಯರು ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಯಾರೂ ಕೂಡ ಉದ್ವೇಗ ಮತ್ತು ಆವೇಗಕ್ಕೆ ಒಳಗಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಹೈಕಮಾಂಡ್ ಅಭಯ ನನ್ನ ಮೇಲೆ ಇದೆ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಕೆಲವು ಸಲಹೆಗಳನ್ನು ನೀಡಿದ್ದಾರೆ ಇದರ ಜೊತೆಗೆ ನಮ್ಮವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಅವರು ನನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಅದರಂತೆ ಮುಂದುವರಿಯಬೇಕಾಗಿದೆ ಕೆಲವರು ನಿಮ್ಮನ್ನು ಪ್ರಚೋದಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುವಂತೆ ಮಾಡುತ್ತಿದ್ದಾರೆ ಅದಕ್ಕೆ ನೀವು ಬಲಿಯಾಗಬಾರದು ತಾಳ್ಮೆಯಿಂದ ಇರುವಂತೆ ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಈ ತಿಂಗಳ 14 ರಂದು ದೆಹಲಿಯಲ್ಲಿ ಮತಗಳ್ಳತನದ ವಿರುದ್ಧ ಹೋರಾಟ ನಡೆಯುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ಎಲ್ಲರೂ ಬರಬೇಕು ಅವಕಾಶ ಸಿಕ್ಕಿದರೆ ರಾಹುಲ್ ಗಾಂಧಿ ಅವರ ಜೊತೆ ಮಾತುಕತೆ ನಡೆಸೋಣ ಇಲ್ಲವಾದರೆ ಡಿಸೆಂಬರ್ 21ರಂದು ಬಹುತೇಕ ಹೈಕಮಾಂಡ್ ನಮ್ಮ ಜೊತೆ ಮಾತನಾಡುವ ಸಾಧ್ಯತೆ ಇದೆ ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಸಲಹೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷವಿಲ್ಲ:
ಈ ನಡುವೆ ಕಳೆದ ರಾತ್ರಿ ನಡೆದ ಭೋಜನ ಕೂಟ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ
ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತ ಬೆಳಗಾವಿ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಊಟಕ್ಕೆ ಬರುವಂತೆ ಕಳೆದ 15 ವರ್ಷಗಳಿಂದ ಕರೆಯುತ್ತಿದ್ದರು ಅದಕ್ಕೆ ಸಮಯ ಬಂದಿರಲಿಲ್ಲ ಹೀಗಾಗಿ ಕಳೆದ ರಾತ್ರಿ ಹೋಗಿದ್ದೇನೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವರು ಊಟಕ್ಕೆ ಬರುವಂತೆ ಕರೆಯುತ್ತಿದ್ದಾರೆ ಅದರಂತೆ ಎರಡು ದಿನ ಬಿಟ್ಟು ಶಾಸಕ ಆಸಿಫ್ ಸೇಠ್ ಅವರು ಊಟಕ್ಕೆ ಬರುವಂತೆ ಕರೆದಿದ್ದಾರೆ ಅವರ ಮನೆಗೂ ಹೋಗುತ್ತಿದ್ದೇನೆ ಎಂದು ಹೇಳಿದರು.
ಕರೆದಿಲ್ಲ:
ಇನ್ನು ಡಿಸಿಎಂ ಏರ್ಪಡಿಸಿದ್ದ ಭೋಜನ ಕೂಟದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟಕ್ಕೆ ಸೇರಿದರೆ ನಾನೇನು ಮಾಡಬೇಕು ಜೊತೆಯಲ್ಲಿ ಕೂತು ಊಟ ಮಾಡಿದ್ದಾರೆ ಎಂದರು.
ದೆಹಲಿಗೆ ಬರುವಂತೆ ಹೈಕಮಾಂಡ್ ನ ಯಾವುದೇ ನಾಯಕರು ಇಲ್ಲಿಯವರೆಗೆ ನಮಗೆ ಕರೆದಿಲ್ಲ ಅವರು ಕರೆದಿಲ್ಲ ಎಂದ ಮೇಲೆ ನಾವು ಯಾಕೆ ಹೋಗಬೇಕು ಅವರು ಕರೆದಿದ್ದಾರೆ ಎಂದು ನಿಮಗೆ ಯಾರು ಹೇಳಿದ್ದು ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು ಅವರ ಭೋಜನಕೂಟದ ಬಗ್ಗೆ ನನಗೇನು ಗೊತ್ತಿಲ್ಲ ಮುಖ್ಯಮಂತ್ರಿ ಹುದ್ದೆಯ ಕುರಿತಂತೆ ಈಗಾಗಲೇ ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ ಅದಕ್ಕೆ ನಾನು ಬದ್ಧ ಎಂದರು.
ಒಟ್ಟಾಗಿದ್ದೇವೆ:
ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಕಳೆದ ರಾತ್ರಿಯ ಭೋಜನ ಕೂಟದಲ್ಲಿ ಯಾವುದೇ ರಾಜಕೀಯ ಇಲ್ಲ ಎಲ್ಲರೂ ಒಟ್ಟಾಗಿ ಊಟ ಮಾಡಿದ್ದೇವೆ ಎಂದು ಹೇಳಿದರು.
ವಿಧಾನಮಂಡಲದ ಅಧಿವೇಶನ ಮುಗಿದ ನಂತರ ರಾಜ್ಯದ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಅಲ್ಲಿಯವರೆಗೆ ನಾವು ಕಾಯುತ್ತೇವೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.
Previous Articleಕಡ್ಡಾಯವಾಗಿ ಕನ್ನಡ ನಾಮಫಲಕ ಅಳಡಿಸದಿದ್ದರೆ ದಂಡ
Next Article ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು

