Bengaluru
ಸುದೀರ್ಘ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೊಂದಿಗೆ ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ಅತಿ ಹೆಚ್ಚಿನ ಬಜೆಟ್ ಮಂಡಿಸಿರುವ ದಾಖಲೆ ನಿರ್ಮಿಸಲು ಸಜ್ಜಾದ ಹಣಕಾಸು ಮಂತ್ರಿ ಸಿದ್ದರಾಮಯ್ಯ ಇದೀಗ ಕಳೆದ ಬಜೆಟ್ ಗಾತ್ರವನ್ನು ಮರು ನಿಗಧಿ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕಲ್ಯಾಣ ರಾಜ್ಯ ಪರಿಕಲ್ಪನೆಯೊಂದಿಗೆ 16 ಬಜೆಟ್ ಗಳನ್ನು ಮಂಡಿಸಿರುವ ಸಿದ್ದರಾಮಯ್ಯ ಇದೀಗ 17ನೇ ಬಜೆಟ್ ಮಂಡಿಸಲು ಸಜ್ಜಾಗುತ್ತಿದ್ದಾರೆ ಆದರೆ ಈ 17ನೇ ಬಜೆಟ್ ಅವರಿಗೆ ದೊಡ್ಡ ಸವಾಲಾಗಿದೆ.
ಪ್ರಮುಖವಾಗಿ ಹದಿನಾರನೇ ಹಣಕಾಸು ಆಯೋಗ ಜನಸಂಖ್ಯೆ ಆಧಾರದಲ್ಲಿ ಸಂಪನ್ಮೂಲ ಹಂಚುವ ತೀರ್ಮಾನ ತೆಗೆದುಕೊಂಡಿದೆ ಇದನ್ನು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆ ಮಾಡುತ್ತಿದೆ ಇದರಿಂದಾಗಿ ಜನಸಂಖ್ಯೆ ನಿಯಂತ್ರಣ ಗುರಿ ಸಾಧಿಸಿರುವ ಕರ್ನಾಟಕಕ್ಕೆ ದೊಡ್ಡ ಹೊಡೆತ ಬಿದ್ದಿದೆ ಅದೇ ರೀತಿ ತೆರಿಗೆ ಪಾಲು ನೀಡುವಲ್ಲೂ ಕೂಡ ಜನಸಂಖ್ಯೆಯೇ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ಇದಲ್ಲದೆ ಕೇಂದ್ರ ಸರ್ಕಾರ ಜಿಎಸ್ಟಿ ಪದ್ಧತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರ್ಪಾಟು ಮಾಡಿದೆ ಇದರಿಂದ ರಾಜ್ಯಕ್ಕೆ ಬರಬೇಕಾಗಿದ್ದ ತೆರಿಗೆಯಲ್ಲಿ ಸುಮಾರು 12 ಸಾವಿರ ಕೋಟಿ ರೂಪಾಯಿ ಖೋತಾ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26 ನೇ ಸಾಲಿನಲ್ಲಿ ಒಟ್ಟು 4,09,549 ಕೋಟಿ ರೂಪಾಯಿ ಬಜೆಟ್ ಗಾತ್ರ ನಿಗದಿ ಮಾಡಲಾಗಿದೆ ಇದರಲ್ಲಿ ಒಟ್ಟು ಆದಾಯ 4,08,647 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ವಿತ್ತೀಯ ಕೊರತೆ 90,428 ಕೋಟಿ,ರಾಜಸ್ವ ಕೊರತೆ 19,262 ಕೋಟಿಯಾಗಿದೆ ಇದರಿಂದಾಗಿ 2025-26 ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7.6 ಲಕ್ಷ ಕೋಟಿ ರೂಪಾಯಿ ತಲುಪುವ ಅಂದಾಜಿದೆ.
ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕೆ ದಾಖಲೆಯ 4.09 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆಯಾಗಿದ್ದರೂ ಸರಕಾರದ ಸ್ವಂತ ತೆರಿಗೆ ಮೂಲಗಳಿಂದ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹವಾಗುವುದು ಕಷ್ಟಸಾಧ್ಯವೆನಿಸಿದೆ
ಗುರಿ ತಲುಪಲು ಮಾರ್ಚ್ ಅಂತ್ಯದೊಳಗೆ 48,306 ಕೋಟಿ ರೂಪಾಯಿ ಸಂಗ್ರಹವಾಗಬೇಕಿದ್ದು, ಅಬಕಾರಿ ಇಲಾಖೆ ಹೊರತುಪಡಿಸಿ ಉಳಿದ ಮೂರು ಮೂಲಗಳಿಂದ ವಾರ್ಷಿಕ ಗುರಿ ಸಾಧನೆ ಅನುಮಾನವಾಗಿದೆ.
ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆಯಿಂದ ಸುಮಾರು 15,000 ಕೋಟಿ ರೂಪಾಯಿಯಷ್ಟು ಆದಾಯ ಕೈತಪ್ಪುವ ಲಕ್ಷಣ ಕಾಣುತ್ತಿದೆ. ಇದು ಸರಕಾರದ ವೆಚ್ಚ, ಬಜೆಟ್ ಗಾತ್ರದ ಮೇಲೆ ಪರಿಣಾಮ ಬೀರಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ 83,200 ಕೋಟಿ ರೂಪಾಯಿ ವಿನಿಯೋಗಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ತೆರಿಗೆ ಆದಾಯ ತಗ್ಗಿದರೆ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗುವ ಅನುದಾನ ಕಡಿತವಾಗಲಿದೆ.
ಅಬಕಾರಿ ಇಲಾಖೆಯಿಂದ ಮಾತ್ರ ಪ್ರಸಕ್ತ ಸಾಲಿನ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹ ನಿರೀಕ್ಷೆ ಇದೆ. 40,000 ಕೋಟಿ ರೂಪಾಯಿ ವಾರ್ಷಿಕ ಗುರಿಯಡಿ ಜನವರಿ ಅಂತ್ಯಕ್ಕೆ 33,371ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕಳೆದ 2024-25ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ 29,460 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅಂದರೆ ಹಿಂದಿನ ಸಾಲಿಗೆ ಹೋಲಿಸಿದರೆ ಶೇ.13.27ರಷ್ಟು ಬೆಳವಣಿಗೆ ಸಾಧಿಸಿದೆ. ಮಾಸಿಕ ಸರಾಸರಿ 3,000 ಕೋಟಿ ರೂಪಾಯಿ ಆದಾಯ ಸಂಗ್ರಹದಿಂದಾಗಿ ಮಾರ್ಚ್ ಅಂತ್ಯದ ವೇಳೆಗೆ ಗುರಿ ಮೀರಿ ಸಾಧನೆಯಾಗುವ ವಿಶ್ವಾಸ ಹೊಂದಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆ ಸಮಯದಲ್ಲಿ ಅಧಿಕಾರಿಗಳು ನಿಗದಿತ ಗುರಿ ಮುಟ್ಟುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ತೆರಿಗೆ ಮೂಲದಿಂದ ಜನವರಿ ಅಂತ್ಯದವರೆಗೆ 90,229 ಕೋಟಿ ರೂಪಾಯಿ ಸಂಗ್ರಹವಾಗಿದೆ. ಜಿಎಸ್ಟಿಯಿಂದ 66,605 ಕೋಟಿ ರೂಪಾಯಿ ಮಾರಾಟ ತೆರಿಗೆಯಿಂದ 22,387 ಕೋಟಿ ರೂಪಾಯಿ ಹಾಗೂ ವೃತ್ತಿ ತೆರಿಗೆಯಿಂದ 1,236 ಕೋಟಿ ರೂಪಾಯಿ ಬೊಕ್ಕಸಕ್ಕೆ ಬಂದಿದೆ. ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್ 22ರಿಂದ ನಾಲ್ಕು ಶ್ರೇಣಿಯ ಜಿಎಸ್ಟಿ ಬದಲಿಗೆ ಎರಡೇ ಶ್ರೇಣಿಯ ದರಗಳನ್ನು ಜಾರಿಗೊಳಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ ವಾಣಿಜ್ಯ ತೆರಿಗೆಯಿಂದ ವಾರ್ಷಿಕ 11000 ಕೋಟಿ ರೂಪಾಯಿ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿದಂತೆ ಇತರೆ ಶುಲ್ಕ ರೂಪದಲ್ಲಿ ಜನವರಿವರೆಗೆ 20,500 ಕೋಟಿ ರೂ. ಆದಾಯ ಗಳಿಸಿದೆ. ಬಾಕಿ ಎರಡು ತಿಂಗಳಲ್ಲಿ 7,500 ಕೋಟಿ ರೂಪಾಯಿ ಸಂಗ್ರಹ ಅಸಾಧ್ಯವೆನಿಸಿದ್ದು, 3,000 ಕೋಟಿ ರೂಪಾಯಿಯಷ್ಟು ಆದಾಯ ಕೈತಪ್ಪುವ ಸಾಧ್ಯತೆ ಇದೆ
ಸಾರಿಗೆ ವಲಯದಲ್ಲಿ ತೆರಿಗೆ ಗುರಿ ಮುಟ್ಟುವುದು ಕಷ್ಟ
ಮೋಟಾರು ವಾಹನ ತೆರಿಗೆ ಸೇರಿದಂತೆ ಇತರೆ ಮೂಲಗಳಿಂದ ಮಾರ್ಚ್ ಅಂತ್ಯಕ್ಕೆ 15,000 ಕೋಟಿ ರೂಪಾಯಿ ಸಂಗ್ರಹ ಗುರಿ ನೀಡಲಾಗಿದೆ. ಆದರೆ ಜನವರಿವರೆಗೆ ಕೇವಲ 10,594 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಎರಡು ತಿಂಗಳಲ್ಲಿ4,406 ಕೋಟಿ ರೂಪಾಯಿಗಳಿಸಬೇಕಿದೆ. ಮಾರ್ಚ್ ಅಂತ್ಯಕ್ಕೆ 15,000 ಕೋಟಿ ರೂಪಾಯಿ ಆದಾಯ ಸಂಗ್ರಹ ಸವಾಲಾಗಿದ್ದು, 13,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ಹಾಗಾಗಿ ವಾರ್ಷಿಕ ಗುರಿಯಲ್ಲಿ 2000 ಕೋಟಿ ರೂಪಾಯಿಯಷ್ಟು ಕೈತಪ್ಪುವ ಸಂಭವವಿದೆ. ಒಟ್ಟಾರೆಯಾಗಿ ಈ ಎಲ್ಲಾ ಲೆಕ್ಕಾಚಾರಗಳನ್ನು ಆಧರಿಸಿ ಹೇಳುವುದಾದರೆ ರಾಜ್ಯ ಸರ್ಕಾರದ ಬಜೆಟ್ ಗಾತ್ರದಲ್ಲಿ ಒಟ್ಟಾರೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ಖೋತಾ ಉಂಟಾಗುವ ಸಾಧ್ಯತೆ ಇದೆ
ಹೀಗಾಗಿ ಸಿದ್ದರಾಮಯ್ಯ ಅವರು ಈ ವರ್ಷ ಸಂಗ್ರಹಿಸಿದ ತೆರಿಗೆ ಹಾಗೂ ತೆರಿಗೆಯೇತರ ಆದಾಯ, ಕೇಂದ್ರ ಸರ್ಕಾರದ ಅನುದಾನ ಹಾಗೂ ಸಾಲ ಮೊತ್ತವನ್ನು ಆಧರಿಸಿ ವೆಚ್ಚದ ಬಾಬ್ತಿನ ನಿರ್ವಹಣೆ ಮಾಡಬೇಕು.ಹೀಗಾಗಿ ಬಜೆಟ್ ಗಾತ್ರ ಪರಿಷ್ಕರಣೆ ಅನಿವಾರ್ಯವಾಗಿದೆ.

