2026-27 ನೇ ಸಾಲಿನ ಕರ್ನಾಟಕ ಬಜೆಟ್ ಇಲ್ಲಿದೆ.
ಸನ್ಮಾನ್ಯ ಸಭಾಧ್ಯಕ್ಷರೇ,
1. 2026-27ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಲು ನನಗೆ ಸಂತೋಷವಾಗುತ್ತಿದೆ.
2. ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿಯಾದ ನಾನು ಸರ್ವರ ಏಳಿಗೆಯನ್ನು ಬಯಸಿ 17ನೇ ಆಯವ್ಯಯವನ್ನು ಮಂಡಿಸುತ್ತಿದ್ದೇನೆ. ನಾಡಿನ ಏಳು ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ನಾವು ಅರಿತಿದ್ದೇವೆ, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಆಯವ್ಯಯವು ನಾಡಿನ ರೈತರ, ದಮನಿತರ, ಕಾರ್ಮಿಕರ, ಮಹಿಳೆಯರ, ಅಶಕ್ತರ, ಅಲ್ಪಸಂಖ್ಯಾತರ, ವಿದ್ಯಾರ್ಥಿ-ಯುವಜನರ, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಲ್ಲಿ ತೊಡಗಿಕೊಂಡವರ ಕನಸುಗಳು ಮತ್ತು ಆತ್ಮವಿಶ್ವಾಸವನ್ನು ಪ್ರತಿಧ್ವನಿಸುವ ಜೀವಂತ ದಾಖಲೆಯಾಗಿದೆ.
ಧನಶೀಲ ಮನಶೀಲ ತನುಶೀಲ
ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ
ಇಂತೀ ವ್ರತಸಂಪದವೆಲ್ಲವೂ
ಅದಾರ ಕುರಿತು ಮಾಡುವ ನೇಮ
ಎಂಬುದ ತಾನರಿಯಬೇಕು
-ವಚನಕಾರ್ತಿ ಅಕ್ಕಮ್ಮ
3. ನಾವು ರೂಪಿಸುವ ಯೋಜನೆಗಳು, ವಿನಿಯೋಗಿಸುವ ಅನುದಾನಗಳು ಯಾರ ಏಳಿಗೆಯನ್ನು ಬಯಸುತ್ತವೆ, ಅವುಗಳು ಸದುದ್ದೇಶದಿಂದ ರೂಪುಗೊಂಡಿವೆಯೆ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ. ಜನಕೇಂದ್ರಿತ ಆರ್ಥಿಕ ತತ್ವಗಳ ಮೂಲಬಿಂದು ಇದೇ ಆಗಿದೆ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ʻಸರ್ವೋದಯವಾಗಲಿ ಸರ್ವರಲಿʼ ಎಂಬ ಕವಿವಾಣಿಯು ನಮ್ಮ ಸಮಗ್ರ ಅಭಿವೃದ್ಧಿಯ ದೀಕ್ಷೆಯೂ ಆಗಿದೆ.
4. ಕರ್ನಾಟಕವು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಣಿಜ್ಯ ರಂಗದಲ್ಲಿ ಅದ್ವಿತೀಯ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆಯ (AI) ಕ್ರಾಂತಿಕಾರಕ ಬೆಳವಣಿಗೆಗಳಿಂದ ಜಾಗತಿಕ ಉತ್ಪಾದನಾ ವಿಧಾನಗಳು ದಿನ ದಿನಕ್ಕೂ ಬದಲಾಗುತ್ತಿವೆ. ವಿಜ್ಞಾನ-ತಂತ್ರಜ್ಞಾನಗಳಲ್ಲಿನ ಹೊಸತನಗಳು ರಾಜ್ಯದ ಸ್ಥಿತಿ-ಗತಿಗಳನ್ನು ನಿರ್ಧರಿಸುವ ನಿರ್ಣಾಯಕ ಸಂಗತಿಗಳಾಗಿವೆ. ಈ ಸಂದರ್ಭದಲ್ಲಿ ನಾವು ಬೆಂಕಿಯನ್ನು ಬೆಳಕಾಗಿಸಿಕೊಳ್ಳುವ ಸಂಕಲ್ಪ ಹೊತ್ತು ಮುನ್ನಡೆಯಬೇಕಾಗಿದೆ ಎಂಬ ಎಚ್ಚರದಿಂದಲೆ ಈ ಆಯವ್ಯಯವನ್ನು ಮಂಡಿಸುತ್ತಿದ್ದೇನೆ.
5. ರಾಷ್ಟ್ರದ ಅಭಿವೃದ್ಧಿಯ ಸರ್ವಕ್ಷೇತ್ರಗಳಲ್ಲೂ ನಮ್ಮ ರಾಜ್ಯವು ಮುಂಚೂಣಿಯಲ್ಲಿದೆ. ಅತಿ ಹೆಚ್ಚು ತೆರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಿ ಕೊಡುವ ಪ್ರಮುಖ ರಾಜ್ಯವಾಗಿದೆ. ಹೆಚ್ಚು ಹಾಲು ಕೊಡುವ ಹಸು/ಎಮ್ಮೆಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವೂ ಇರುತ್ತದೆ. ಅವು ಬಡವಾದರೆ ಗೋವಳಿಗನೂ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂಬುದು ಭೀಷ್ಮನ ತತ್ವ. ಇದನ್ನು ಅರಿತು ಒಕ್ಕೂಟ ಸರ್ಕಾರವು ರಾಜ್ಯದ ಬೇಡಿಕೆಗಳ ಬಗ್ಗೆ ಸಂವೇದನಾಶೀಲತೆಯಿಂದ ವರ್ತಿಸಬೇಕೆಂದು ಆಗ್ರಹಿಸುತ್ತೇವೆ. ಭಾರತದಂಥ ವೈವಿಧ್ಯಮಯ ಸಂಸ್ಕೃತಿಗಳ ರಾಷ್ಟ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಯಿಂದ ಮಾತ್ರವೇ ಅಭಿವೃದ್ಧಿ ಸಾಧಿಸಬಹುದಾಗಿದೆ.
6. 2023ರಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೆ ʻಸಾರ್ವತ್ರಿಕ ಮೂಲ ಆದಾಯʼ ಪರಿಕಲ್ಪನೆಗಳಾದ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಸುಭದ್ರತೆ ಮತ್ತು ಸಾಮಾಜಿಕ ಸುಸ್ಥಿರತೆ ಒದಗಿಸುವುದಕ್ಕೆ ಆದ್ಯತೆ ನೀಡಿದೆವು. ಈ ಯೋಜನೆಗಳು ಇಂದು ಕೋಟ್ಯಾಂತರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಜನರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ದೇಶ ವಿದೇಶಗಳ ಪ್ರಮುಖ ಅಧ್ಯಯನಗಳು ತೋರಿಸಿಕೊಡುತ್ತಿವೆ.
7. ಕಲ್ಯಾಣ ಯೋಜನೆಗಳ ಜೊತೆಗೆ ಹೆಚ್ಚಿನ ಬಂಡವಾಳ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ದೀರ್ಘಕಾಲೀನ ಆರ್ಥಿಕ ಪರಿವರ್ತನೆಗಳತ್ತಲೂ ಗಮನ ಹರಿಸಿದ್ದೇವೆ. ʻಮಾನವ ಅಭಿವೃದ್ಧಿಯಲ್ಲಿನ ಹೂಡಿಕೆಯನ್ನು ನಿರ್ಲಕ್ಷಿಸಿದ ಆರ್ಥಿಕ ಅಭಿವೃದ್ಧಿಯು ಅಸ್ಥಿರ ಮಾತ್ರವಲ್ಲ ಅನೈತಿಕವಾದುದು’ ಎಂಬ ಅಮರ್ತ್ಯ ಸೇನ್ ಅವರ ಪ್ರಮೇಯವನ್ನು ಅರಿತು ಜನಕಲ್ಯಾಣದ ಯೋಜನೆಗಳಿಗಾಗಿ ಹೂಡಿಕೆ ಮಾಡುತ್ತಿದ್ದೇವೆ.
8. ನಾವು ಕರ್ನಾಟಕದ್ದೇ ಆದ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ರೂಪಿಸುತ್ತಿದ್ದೇವೆ. ಅವುಗಳನ್ನು 11ಜಿ ಮಾದರಿ ಆರ್ಥಿಕತೆಗಳೆಂದು ವ್ಯಾಖ್ಯಾನಿಸಲಾಗುತ್ತಿದೆ.
i. ಗ್ಯಾರಂಟಿ ಎಕಾನಮಿ-ಕಲ್ಯಾಣ ಹಾಗೂ ಲಿಂಗ ಸಮಾನತೆಯ ಹಾದಿಯತ್ತ ಕರ್ನಾಟಕ
ii. ಗುಡ್ ಪಬ್ಲಿಕ್ ಎಜುಕೇಶನ್-ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣ
iii. ಗುಡ್ ಹೆಲ್ತ್ ಟು ಆಲ್-ಸಮಗ್ರ ಆರೋಗ್ಯ – ಸದೃಢ ಕರ್ನಾಟಕ
iv. ಗ್ರಾಸ್ ರೂಟ್ ಎಕಾನಮಿ- ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು
v. ಗುಡ್ ಗವರ್ನೆನ್ಸ್- ಜನಸ್ನೇಹಿ ಆಡಳಿತ
vi. ಗಿಗ್ ಎಕಾನಮಿ – ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು
vii. ಜಿಯೋಗ್ರಾಫಿಕಲ್ ಈಕ್ವಾಲಿಟಿ- ಪ್ರಾದೇಶಿಕ ಅಸಮಾನತೆಯ ನಿವಾರಣೆ
viii. ಗ್ಲೋಬಲ್ ಟ್ರೇಡ್ ಎಕಾನಮಿ ಅಥವಾ ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ
ix. ಗ್ಲೋಬ್ ಟ್ರೋಟಿಂಗ್ ಎಕಾನಮಿ- ಪ್ರವಾಸೋದ್ಯಮ ಆರ್ಥಿಕತೆ
x. ಗ್ರೀನ್ ಎಕಾನಮಿ- ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳು
xi. ಗ್ರೋಯಿಂಗ್ ಅರ್ಬನ್ ಎಕಾನಮಿ- ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ
9. ಈ ಆರ್ಥಿಕ ಪ್ರಮೇಯಗಳನ್ನು ಆಧಾರವಾಗಿಟ್ಟುಕೊಂಡು ನಾವು ನಾಡಿನ ಅಭಿವೃದ್ಧಿ ರಥವನ್ನು ಮುನ್ನಡೆಸುತ್ತಿದ್ದೇವೆ. ಈ ಪ್ರಮೇಯಗಳು ಹೇಗೆ ಕರ್ನಾಟಕದ್ದೇ ಆದ ಅಭಿವೃದ್ಧಿ ಮಾದರಿಯನ್ನು ವ್ಯಾಖ್ಯಾನಿಸುತ್ತವೆ ಎಂಬುದನ್ನು ಆಯವ್ಯಯದ ಇಲಾಖಾವಾರು ಖಂಡಿಕೆಗಳಲ್ಲಿ ಗಮನಿಸಬಹುದಾಗಿದೆ. ಕರ್ನಾಟಕದ 45ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ಜಿಐ ಮಾನ್ಯತೆಗಳು ದೊರೆತಿವೆ. ಈ ಮಾನ್ಯತೆಗಳು ನಮ್ಮ ಜನರ ಪಾರಂಪರಿಕ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು ಹೊಸ ಉದ್ಯೋಗಗಳ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
10. ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ನಾವು ಆದ್ಯತೆ ನೀಡಿದ್ದೇವೆ. ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸಡಿಲಿಕೆ ನೀಡಿದ್ದೇವೆ.
11. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ಕಳೆದ ವರ್ಷ ರಸ್ತೆ ಮತ್ತು ಮೂಲಸೌಕರ್ಯಗಳ
ಅಭಿವೃದ್ಧಿಗಾಗಿ “ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ”ವನ್ನು ಜಾರಿಗೊಳಿಸಿ 8,600 ಕೋಟಿ ರೂ. ಗಳ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರ 2ನೇ ಹಂತವಾಗಿ 2026-27ನೇ ಸಾಲಿನಲ್ಲಿ 4,000 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
12. ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ.
13. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಪ್ರೊ.ಎಂ.ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಐದನೇ ಹಣಕಾಸು ಆಯೋಗ, ಆಡಳಿತ ಸುಧಾರಣಾ ಆಯೋಗಗಳ ಶಿಫಾರಸ್ಸುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ.
14. ಕರ್ನಾಟಕದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಸ್ಟಾರ್ಟ್ಅಪ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಕ್ಷೇತ್ರಗಳಲ್ಲಿನ ಸಾಧನೆಗಳು ಜಾಗತಿಕ ಹೂಡಿಕೆ ಮತ್ತು ಪ್ರತಿಭೆಗಳನ್ನು ಸೆಳೆಯುತ್ತಿವೆ. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಹೆಚ್ಚಿನ ಬಂಡವಾಳವನ್ನು ಆಕರ್ಷಿಸುತ್ತಿದೆ. ರಾಜ್ಯವು ರೂಪಿಸಿರುವ ಹೊಸ ಕೈಗಾರಿಕಾ ನೀತಿಯಿಂದ ಹಂತ-2 ಮತ್ತು ಹಂತ-3 ನಗರಗಳಲ್ಲಿಯೂ ಅಭಿವೃದ್ಧಿ ಸಾಧ್ಯವಾಗಲಿದೆ.
15. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರವು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಕೇಂದ್ರ ಸರ್ಕಾರವು ಒಕ್ಕೂಟ ತತ್ವದ ಸಾಂವಿಧಾನಿಕ ನಿಯಮಗಳನ್ನೂ ಪಾಲಿಸದೆ ರಾಜ್ಯಕ್ಕೆ ನಿರಂತರ ಅನ್ಯಾಯವೆಸಗುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ತನ್ನ ಪಾಲಿನ ಕಡಿತ, ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ, 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯ, ಅದೇ ಆಯೋಗವು ಮಾಡಿದ್ದ ವಿಶೇಷ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡದ ಕಾರಣ ಉಂಟಾದ ಆರ್ಥಿಕ ನಷ್ಟ ಮತ್ತು ಜಿಎಸ್ಟಿ ದರಗಳನ್ನು ತರ್ಕಬದ್ಧಗೊಳಿಸುವ ಅಕಾಲಿಕ ನಿರ್ಧಾರದಿಂದ ರಾಜ್ಯದ ಬೊಕ್ಕಸದ ಮೇಲೆ ಬಿದ್ದ ಹೆಚ್ಚುವರಿ ಹೊರೆ ಹಾಗೂ ಒತ್ತಡಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ.
16. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ದುರ್ಬಲಗೊಳಿಸಿರುವುದರಿಂದ ಜನರ ಉದ್ಯೋಗದ ಹಕ್ಕುಗಳು ಮೊಟಕಾಗಲಿವೆ ಮತ್ತು ರಾಜ್ಯಗಳ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಲಿದೆ. ಈ ಕಾರಣಗಳಿಂದ ರಾಜ್ಯದ ಹಿತಾಸಕ್ತಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ.
17. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ನಮ್ಮ ಸಂಕಲ್ಪವನ್ನು ಈ ಆಯವ್ಯಯ ದೃಢಪಡಿಸುತ್ತದೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಆರ್ಥಿಕ ಬೆಳವಣಿಗೆಯೊಂದಿಗೆ ವಿತ್ತೀಯ ಶಿಸ್ತು ಪಾಲಿಸಲು ಸಾಧ್ಯವಾಗಿರುವುದು ನಮ್ಮ ಆಡಳಿತ ವಿಧಾನದ ಮಾದರಿಯಾಗಿದೆ.
18. ಈ ಆಯವ್ಯಯವು ನಾಡಿನ ಉಜ್ವಲ ಭವಿಷ್ಯವನ್ನು ಕಟ್ಟುವ ದೃಷ್ಟಿಯಿಂದ ರೂಪಿತವಾಗಿದೆ. ನಾಡಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವುದು ನಮ್ಮೆಲ್ಲರ ಹೊಣೆಯಾಗಿದೆ.
ʻʻನ್ಯಾಯವು ನಮ್ಮ ಪರವಾಗಿರುವಾಗ, ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ. ಈ ಹೋರಾಟವು ನನಗೆ ಹರ್ಷದಾಯಕ ಸಂಗತಿಯಾಗಿದೆ. ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ.ʼʼ
-ಡಾ|| ಬಿ.ಆರ್. ಅಂಬೇಡ್ಕರ್
ರಾಜ್ಯದ ಆರ್ಥಿಕತೆ
19. ರಾಜ್ಯದ ಜಿ.ಎಸ್.ಡಿ.ಪಿಯು, 2025–26ನೇ ಸಾಲಿನಲ್ಲಿ ಶೇ.8.1 ರಷ್ಟು ನೈಜ ಬೆಳವಣಿಗೆಯನ್ನು ದಾಖಲಿಸಿದ್ದು, ದೇಶದ ಜಿ.ಡಿ.ಪಿ ಬೆಳವಣಿಗೆ ಶೇ.7.4 ಕ್ಕಿಂತ ಹೆಚ್ಚಿಗೆ ಇರುತ್ತದೆ. ಆರ್ಥಿಕತೆಯಲ್ಲಿನ ಈ ಸದೃಢ ಬೆಳವಣಿಗೆಯು ರಾಜ್ಯದ ಎಲ್ಲಾ ವಲಯಗಳ ಸಮಗ್ರ ಬೆಳವಣಿಗೆಯಿಂದ ಸಾಧ್ಯವಾಗಿದೆ.
20. 2025–26ನೇ ಸಾಲಿನಲ್ಲಿ, ರಾಜ್ಯದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಮತೋಲಿತ ಬೆಳವಣಿಗೆ ಕಂಡುಬಂದಿದೆ. ಉತ್ತಮ ಮುಂಗಾರಿನಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ.9.1 ರಷ್ಟು, ಕೈಗಾರಿಕಾ ವಲಯದಲ್ಲಿ ಶೇ.6.7 ರಷ್ಟು ಹಾಗೂ ಸೇವಾ ವಲಯದಲ್ಲಿ ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ.
21. ಸರ್ಕಾರವು ಹೆಚ್ಚಿಸಿದ ಬಂಡವಾಳ ಹೂಡಿಕೆಯ ಜೊತೆಗೆ, ಖಾಸಗಿ ಹೂಡಿಕೆಯಲ್ಲಿನ ಹೆಚ್ಚಳವು ರಾಜ್ಯದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. 2025–26ರ ಮೊದಲಾರ್ಧದಲ್ಲಿ, ರಾಜ್ಯಕ್ಕೆ
9.4 ಬಿಲಿಯನ್ ಅಮೇರಿಕನ್ ಡಾಲರ್ಗಳಷ್ಟು ವಿದೇಶಿ ಹೂಡಿಕೆಯಾಗಿರುತ್ತದೆ. ಇದು ದೇಶದ ಒಟ್ಟು ವಿದೇಶಿ ಒಳಹರಿವಿನ ಶೇ.26.7 ರಷ್ಟಿರುತ್ತದೆ ಹಾಗೂ ಕಳೆದ ವರ್ಷಕ್ಕಿಂತ 2.6 ಪಟ್ಟು ಹೆಚ್ಚಳವನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 2025–26ರ ಮೊದಲಾರ್ಧದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ವಿದೇಶಿ ಒಳಹರಿವು ಕಡಿಮೆಯಾದರೂ ನಮ್ಮ ರಾಜ್ಯಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಯಾಗಿದೆ. ಕೈಗಾರಿಕಾ ನೀತಿ 2025–30 ಅನ್ನು ಜಾರಿಗೊಳಿಸುವುದರಿಂದ ಇನ್ನೂ ಹೆಚ್ಚು ಹೂಡಿಕೆಯನ್ನು ನಿರೀಕ್ಷಿಸಲಾಗಿದೆ.
22. ಭಾರತದಲ್ಲಿ ಜಾಗತಿಕವಾಗಿ ಸಮೀಕೃತವಾಗಿರುವ ರಾಜ್ಯ ಆರ್ಥಿಕತೆಗಳಲ್ಲಿ ಕರ್ನಾಟಕವು ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಐಟಿ ಸಂಬಂಧಿತ ಸೇವೆಗಳು, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಿನ್ಯಾಸ, ಸ್ಟಾರ್ಟ್-ಅಪ್ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ನಮ್ಮ ರಾಜ್ಯದ ನಾಯಕತ್ವವು ಭಾರತದ ರಫ್ತು ಕ್ಷೇತ್ರ ಮತ್ತು ವಿದೇಶಿ ನೇರ ಹೂಡಿಕೆಯ ಒಳಹರಿವುಗಳಿಗೆ ಪ್ರಮುಖ ಕೊಡುಗೆದಾರರನ್ನಾಗಿ ಮಾಡಿದೆ. ಆದರೆ, ವಿದೇಶಿ ವಿನಿಮಯಗಳಲ್ಲಿ ಇತ್ತೀಚಿಗೆ ಪ್ರಸ್ತಾಪಿಸಲಾಗಿರುವ ಸುಂಕ ಕ್ರಮಗಳು ಮತ್ತು ಅಮೇರಿಕ ಸೇರಿದಂತೆ ಇತರ ಪ್ರಮುಖ ದೇಶಗಳೊಂದಿಗೆ ವಾಣಿಜ್ಯ ಒಪ್ಪಂದವು ನಮ್ಮ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.
23. ಕರ್ನಾಟಕದಂತಹ ಜಾಗತಿಕವಾಗಿ ಸಮೀಕೃತ ರಾಜ್ಯಗಳ ಹಿತಾಸಕ್ತಿಗಳನ್ನು ವ್ಯಾಪಾರ ನೀತಿ ರೂಪಿಸುವಲ್ಲಿ ಪರಿಗಣಿಸುವುದು ಅಷ್ಟೇ ಮುಖ್ಯವಾಗುತ್ತದೆ. ಸಹಕಾರಿ ಒಕ್ಕೂಟದ ನಿಜಾರ್ಥದಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಡನಾಟವು, ದೇಶದ ವಿದೇಶಿ ವ್ಯವಹಾರಗಳನ್ನು ಬಲಪಡಿಸುವುದರ ಜೊತೆಗೆ ಪ್ರಾದೇಶಿಕ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ದೇಶದ ಆರ್ಥಿಕ ಅಭಿವೃದ್ಧಿಗೆ ರಾಜ್ಯವು ಸದಾ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ಈ ಸಹಕಾರವನ್ನು ಮುಂದುವರೆಸಲಾಗುವುದು.
ರಾಜ್ಯದ ಹಣಕಾಸು ಪರಿಸ್ಥಿತಿ
24. ಕರ್ನಾಟಕವು ತನ್ನ ಸದೃಢ ವಿತ್ತೀಯ ನಿರ್ವಹಣೆ ಮತ್ತು ಸಂಪನ್ಮೂಲ ಕ್ರೋಢೀಕರಣ ಸಾಮರ್ಥ್ಯದೊಂದಿಗೆ ಮುಂದೆ ಸಾಗುತ್ತಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಜಾರಿಗೆ ತಂದ ತೆರಿಗೆ ನೀತಿ ಬದಲಾವಣೆಗಳಿಂದ ರಾಜ್ಯದ ರಾಜಸ್ವ ಸಂಗ್ರಹಣೆಗೆ ಸವಾಲುಗಳು ಎದುರಾಗಿವೆ. ಈ ಸವಾಲುಗಳ ನಡುವೆಯೂ, ನಮ್ಮ ಸರ್ಕಾರವು ಕೈಗೊಂಡ ಪರಿಣಾಮಕಾರಿ ಸಂಪನ್ಮೂಲ ಕ್ರೋಢೀಕರಣ ಕ್ರಮಗಳ ಫಲವಾಗಿ ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆಯಲ್ಲಿ ಸ್ಥಿರತೆ ಸಾಧಿಸಲಾಗಿದೆ. 2024–25ರ ರಾಜಸ್ವ ಸಂಗ್ರಹಣೆಗೆ ಹೋಲಿಸಿದರೆ 2025–26ರ ಪರಿಷ್ಕೃತ ಅಂದಾಜುಗಳಲ್ಲಿ ರಾಜ್ಯದ ಸ್ವಂತ ರಾಜಸ್ವವು ಶೇ.8.3ರಷ್ಟು ಬೆಳವಣಿಗೆ ದಾಖಲಿಸಿದೆ.
25. ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ರಾಜ್ಯದ ತೆರಿಗೆ ಆದಾಯದ ಪ್ರಮುಖ ರಾಜಸ್ವವಾಗಿದೆ. ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಜಿ.ಎಸ್.ಟಿ ರಾಜಸ್ವವು ಶೇ.43 ರಷ್ಟು ಪಾಲು ಹೊಂದಿದೆ. ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
26. ಕೇಂದ್ರ ಸರ್ಕಾರವು ಆರ್ಥಿಕ ವರ್ಷದ ಮಧ್ಯದಲ್ಲಿ ಅನಿರೀಕ್ಷಿತವಾಗಿ ಜಿ.ಎಸ್.ಟಿ ದರ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯದ ರಾಜಸ್ವ ಸಂಗ್ರಹಣೆಯು ಮತ್ತಷ್ಟು ಇಳಿಕೆಯಾಗಿದೆ. 2025-26ನೇ ಸಾಲಿನಲ್ಲಿ ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಗೂ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ರಾಜಸ್ವ (ನಿವ್ವಳ ಮರುಪಾವತಿ) ಸಂಗ್ರಹಣೆಯು ಶೇ.10 ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ತರ್ಕಬದ್ಧಗೊಳಿಸುವಿಕೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4 ಕ್ಕೆ ಕಡಿಮೆಯಾಗಿದೆ. ಪ್ರಸ್ತಾವಿತ ದರ ಪರಿಷ್ಕರಣೆಯಿಂದ ಪ್ರಸಕ್ತ ಸಾಲಿಗೆ ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು ಅಂದಾಜು 10,000 ಕೋಟಿ ರೂ.ಗಳ ಕೊರತೆ ಉಂಟಾಗಿದೆ. ಮುಂದಿನ ವರ್ಷದಲ್ಲಿ 15,000 ಕೋಟಿ ರೂ.ಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದೆ.
27. ರಾಷ್ಟ್ರೀಯ ಮಟ್ಟದಲ್ಲಿಯೂ ಸಹ, ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯು ನಿರಾಶಾದಾಯಕವಾಗಿದೆ. 2025–26ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಅಂದಾಜುಗಳಿಗೆ ಹೋಲಿಸಿದರೆ, ಪರಿಷ್ಕೃತ ಅಂದಾಜುಗಳಲ್ಲಿ ಜಿ.ಎಸ್.ಟಿ ಸಂಗ್ರಹಣೆಯು ಶೇ.11 ರಷ್ಟು ಇಳಿಕೆಯಾಗಿದೆ ಹಾಗೂ 2026–27ರ ಆಯವ್ಯಯ ಅಂದಾಜುಗಳಲ್ಲಿ ಶೇ.13.4 ರಷ್ಟು ಇಳಿಕೆಯಾಗಿದೆ. ಇದನ್ನು 2024-25ರ ವಾಸ್ತವ ಸಂಗ್ರಹಣೆಗಿಂತಲೂ ಕಡಿಮೆಯಾಗಿದೆ. ದೇಶದ ಜಿ.ಎಸ್.ಟಿ ಸಂಗ್ರಹಣೆಯು ಪ್ರಸಕ್ತ ಸಾಲಿನಲ್ಲಿ 1.3 ಲಕ್ಷ ಕೋಟಿ ರೂ.ಗಳು ಮತ್ತು ಮುಂದಿನ ವರ್ಷದಲ್ಲಿ 2 ಲಕ್ಷ ಕೋಟಿ ರೂ.ಗಳು ಕೊರತೆಯಾಗಲಿದೆ. ಇದರ ಪರಿಣಾಮವಾಗಿ ರಾಜ್ಯಗಳಿಗೆ ನೀಡುವ ತೆರಿಗೆ ಹಂಚಿಕೆಯೂ ಕಡಿಮೆಯಾಗಲಿದೆ.
28. ಜಿ.ಎಸ್.ಟಿ ಸಂಗ್ರಹಣೆಯಲ್ಲಿನ ಕುಸಿತದಿಂದ ರಾಜ್ಯಗಳಲ್ಲಿ ಹೆಚ್ಚಿನ ಹಣಕಾಸು ಒತ್ತಡ ಉಂಟಾಗಿದೆ. ತೆರಿಗೆ ರಚನೆಯಲ್ಲಿನ ಬದಲಾವಣೆ ಮತ್ತು ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಾಗಿ ರಾಜ್ಯಗಳ ರಾಜಸ್ವ ಸಂಗ್ರಹಣೆಯ ಮೇಲೆ ನೇರವಾಗಿ ಪ್ರಭಾವ ಬೀರಿದೆ. ರಾಜ್ಯಗಳು ರಾಜಸ್ವ ನಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮಾದಕ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳ ಮೇಲೆ ಸೆಸ್ ಮತ್ತು ಇತರೆ ತೆರಿಗೆಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರವು ರಾಜಸ್ವವನ್ನು ಸಂಗ್ರಹಿಸುತ್ತಿದ್ದು, ಈ ಆದಾಯದ ಸಂಪೂರ್ಣ ಮೊತ್ತವು ಕೇಂದ್ರ ಸರ್ಕಾರದ ಬೊಕ್ಕಸವನ್ನು ಸೇರಲಿದೆ.
29. ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯನ್ನು ರಾಜ್ಯ ಸರ್ಕಾರ ತಾತ್ವಿಕವಾಗಿ ಬೆಂಬಲಿಸುತ್ತದೆ. ಆದರೆ, ಇದರಿಂದ ರಾಜ್ಯಗಳಿಗೆ ಉಂಟಾಗುವ ರಾಜಸ್ವ ನಷ್ಟವನ್ನು ಪರಿಹರಿಸುವುದರ ಜೊತೆಗೆ ರಾಜ್ಯಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ, ಕರ್ನಾಟಕವು ಇತರೆ ಏಳು ರಾಜ್ಯಗಳೊಂದಿಗೆ ಸೇರಿ ಜಿ.ಎಸ್.ಟಿ ಮಂಡಳಿಗೆ ಜಂಟಿ ಜ್ಞಾಪಕ ಪತ್ರವನ್ನು ಸಲ್ಲಿಸಿತ್ತು. ಈ ದರ ಪರಿಷ್ಕರಣೆಯು ರಾಜ್ಯಗಳ ರಾಜಸ್ವಕ್ಕೆ ವ್ಯತಿರಿಕ್ತ ಪರಿಣಾಮ ಬೀರದೆ ರಾಜ್ಯದ ರಾಜಸ್ವ ಸಂಗ್ರಹಣೆಯನ್ನು ರಕ್ಷಿಸುವ ರೀತಿಯಲ್ಲಿ ರೂಪಿತವಾಗಬೇಕು. ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಯಿಂದ, ಉಂಟಾಗಿರುವ ರಾಜಸ್ವ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ ಅಗತ್ಯ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಮ್ಮ ಒತ್ತಾಯವು ಮುಂದುವರೆಯಲಿದೆ.
30. ರಾಜ್ಯಗಳ ಸ್ವಂತ ತೆರಿಗೆ ರಾಜಸ್ವದ ಮೇಲಿನ ಈ ನಿರ್ಬಂಧಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ತೆರಿಗೆ ಹಂಚಿಕೆಯು ಇನ್ನಷ್ಟು ನಿರ್ಣಾಯಕವಾಗುತ್ತದೆ. 14ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಹಂಚಿಕೆಯ ಪಾಲನ್ನು ಶೇ.4.713 ರಷ್ಟು ಶಿಫಾರಸ್ಸು ಮಾಡಿತ್ತು. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯದ ತೆರಿಗೆ ಪಾಲು ಶೇ.3.647 ಕ್ಕೆ ಇಳಿಕೆಯಾಗಿದ್ದು, ಇದು ಹಿಂದಿನ ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.23 ರಷ್ಟು ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷಗಳ ಅವಧಿಯಲ್ಲಿ ಒಟ್ಟಾರೆ ಸುಮಾರು 65,000 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಇದಲ್ಲದೆ,
15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ 5,495 ಕೋಟಿ ರೂ.ಗಳ ವಿಶೇಷ ಅನುದಾನ ಮತ್ತು
6,000 ಕೋಟಿ ರೂ.ಗಳ ರಾಜ್ಯ ಕೇಂದ್ರಿತ ಅನುದಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ. ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡಲು ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸ್ಸು ಮಾಡಬೇಕು ಎಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿತ್ತು. ಆದಾಯ ಅಂತರಕ್ಕೆ ನಿಗದಿಪಡಿಸಲಾದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿ, ವಿತ್ತೀಯ ನಿರ್ವಹಣೆ ಮತ್ತು ದೇಶದ ಆರ್ಥಿಕತೆಗೆ ರಾಜ್ಯದ ಕೊಡುಗೆಯ ಮಾನದಂಡವನ್ನು ತೆರಿಗೆ ಹಂಚಿಕೆ ಸೂತ್ರ ನಿರ್ಧರಿಸಲು ಪರಿಗಣಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ.
31. 16ನೇ ಹಣಕಾಸು ಆಯೋಗವು 2026–31ರ ಅವಧಿಗೆ ತನ್ನ ವರದಿಯನ್ನು ಸಲ್ಲಿಸಿದೆ ಮತ್ತು ಕರ್ನಾಟಕಕ್ಕೆ ಶೇ.4.131 ರಷ್ಟು ತೆರಿಗೆ ಪಾಲನ್ನು ಶಿಫಾರಸ್ಸು ಮಾಡಿದೆ, ಇದು 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲಿಗಿಂತ ಶೇ.13 ರಷ್ಟು ಹೆಚ್ಚಳವಾಗಿರುತ್ತದೆ. 14ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಶೇ.4.713 ರಷ್ಟು ತೆರಿಗೆ ಪಾಲನ್ನು ರಾಜ್ಯವು ನಿರೀಕ್ಷಿಸಿದ್ದರೂ, 16ನೇ ಹಣಕಾಸು ಆಯೋಗದ ಶಿಫಾರಸ್ಸು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆದ ಅನ್ಯಾಯವನ್ನು ಭಾಗಶಃ ಪರಿಹರಿಸಿದೆ.
32. ತೆರಿಗೆ ಹಂಚಿಕೆ ಸೂತ್ರವನ್ನು ನಿರ್ಧರಿಸುವ ಸಂದರ್ಭದಲ್ಲಿ 16ನೇ ಹಣಕಾಸು ಆಯೋಗವು, ರಾಜ್ಯಗಳ ಆರ್ಥಿಕ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶದಿಂದ, ದೇಶದ ಜಿ.ಡಿ.ಪಿಗೆ ರಾಜ್ಯದ ಕೊಡುಗೆಯನ್ನು ಮಾನದಂಡವಾಗಿ ಪರಿಗಣಿಸಿರುವುದು ಆರ್ಥಿಕ ಆಯೋಗದ ತತ್ವಗಳಲ್ಲಿ ಒಂದು ಮಹತ್ವದ ಬೆಳೆವಣೆಗೆಯಾಗಿದ್ದು, ರಾಜ್ಯವು ಇದನ್ನು ಸ್ವಾಗತಿಸುತ್ತದೆ. ಮುಂದಿನ ಹಣಕಾಸು ಆಯೋಗವು ಸಹ ಆರ್ಥಿಕ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸುವ ಮೂಲಕ ಕರ್ನಾಟಕ ರಾಜ್ಯವು ಸೇರಿದಂತೆ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಇತರೆ ರಾಜ್ಯಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಿದೆ ಎಂದು ನಾವು ಭಾವಿಸುತ್ತೇವೆ.
33. ರಾಜಸ್ವ ಸಂಗ್ರಹಣೆಗಿರುವ ಈ ನಿರ್ಬಂಧಗಳ ನಡುವೆಯೂ, ರಾಜ್ಯವು ಆರ್ಥಿಕ ಬೆಳವಣಿಗೆ, ಜನ ಕಲ್ಯಾಣ ಮತ್ತು ವಿತ್ತೀಯ ಶಿಸ್ತನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ವೆಚ್ಚ ನಿರ್ವಹಣೆಗೆ ಆದ್ಯತೆ ನೀಡಿದೆ. ರಾಜ್ಯವು ಸಮಾಜದ ಕಲ್ಯಾಣಕ್ಕೆ ನೀಡಿದ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಪಾಲಿಸುವುದರೊಂದಿಗೆ ಜನ ಸಾಮಾನ್ಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿರುತ್ತದೆ.
34. ಜಿ.ಎಸ್.ಟಿ ದರಗಳ ತರ್ಕಬದ್ಧಗೊಳಿಸುವಿಕೆ ಹಾಗೂ ಕೇಂದ್ರದಿಂದ ಸ್ವೀಕೃತವಾಗುವ ತೆರಿಗೆ ಪಾಲಿನ ಕಡಿತದ ಪರಿಣಾಮವಾಗಿ ರಾಜಸ್ವ ಸಂಗ್ರಹಣೆ ಕಡಿಮೆಯಾಗಿದ್ದು, ಇಂತಹ ಆರ್ಥಿಕ ಸವಾಲಿನ ಪರಿಸ್ಥಿತಿಯಲ್ಲಿಯೂ, ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಿಂದ ವಿತ್ತೀಯ ಶಿಸ್ತನ್ನು ಜವಾಬ್ದಾರಿಯುತವಾಗಿ ಮತ್ತು ದೃಢವಾಗಿ ಪಾಲಿಸಿಕೊಂಡು ಬಂದಿದೆ. ನಾಲ್ಕನೇ ವರ್ಷದಲ್ಲಿಯೂ ಸಹ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ನಿಯಮಾನುಸಾರ, ರಾಜ್ಯದ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.3 ರೊಳಗೆ ಹಾಗೂ ಒಟ್ಟು ಸಾರ್ವಜನಿಕ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿಯ ಶೇ.25 ರೊಳಗೆ ನಿರ್ವಹಿಸಲಾಗಿದೆ. ಈ ಮೂಲಕ ವಿತ್ತೀಯ ಶಿಸ್ತಿನ ಪಾಲನೆಯೊಂದಿಗೆ ದೀರ್ಘಾವಧಿಯ ಹಣಕಾಸಿನ ಸುಸ್ಥಿರತೆಗೆ ರಾಜ್ಯದ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ.

