ಬೆಂಗಳೂರು,ಜೂ.4-ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ವಂಚನೆಗಿಳಿದಿದ್ದ ಖತರ್ನಾಕ್ ನಿರ್ಮಾಪಕ ಸೇರಿ ನಾಲ್ವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚನೆ ನಡೆಸಿದ್ದ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗು ಚಂದ್ರಶೇಖರ್ ಬಂಧಿತ ಆರೋಪಿಯಾಗಿದ್ದಾರೆ.
ಆರೋಪಿ ಮಂಜುನಾಥ್ ಹಾಸ್ಯನಟ ಕೋಮಲ್ ಕುಮಾರ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣ ಮಾಡಿ ಕೋಟ್ಯಂತರ ರೂ. ಬಂಡವಾಳ ಹಾಕಿದ್ದು ಆ ಸಿನಿಮಾ ಬಿಡುಗಡೆಯಾಗಿ ಸೋತಿದ್ದರಿಂದ ಲಕ್ಷಾಂತರ ರೂಗಳ ನಷ್ಟ ಅನುಭವಿಸಿದ್ದ.
ಈ ಬೆನ್ನಲ್ಲೇ ನಿರ್ಮಾಪಕ ಮಂಜುನಾಥ್ ರಾಜಾಜಿನಗರದಲ್ಲಿ ಮನೆ, ನಿವೇಶನಗಳನ್ನು ಮಾರಾಟ ಮಾಡಿಸುವ ರಿಯಲ್ ಎಸ್ಟೇಟ್ ಕಂಪನಿ ತೆಗೆದಿದ್ದ. ಈಗಲ್ ಟ್ರೀ ಬಿಲ್ಡರ್ಸ್ ಹಾಗು ಡೆವಲಪರ್ಸ್ ಡಾಟ್ ಎಂಬ ಕಂಪನಿ ಹೆಸರಲ್ಲಿ ಕಚೇರಿ ತೆರೆದು ನಿವೇಶನ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ.
ಪುಷ್ಪಕುಮಾರ್ ಎಂಬಾತ ಜಾಹಿರಾತು ನೋಡಿ ನಿರ್ಮಾಪಕ ಮಂಜುನಾಥ್ನನ್ನು ಸಂಪರ್ಕಿಸಿದ್ದು ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹಂತ ಹಂತವಾಗಿ 2 ಲಕ್ಷ ರೂಗಳನ್ನು ಆರೋಪಿ ಮಂಜುನಾಥ್ ತೆಗೆದುಕೊಂಡಿದ್ದ. ಅಷ್ಟೇ ಅಲ್ಲದೇ ಬೇರೆ ಯಾರದ್ದೋ ನಿವೇಶನ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದು, ತಕ್ಕ ದಾಖಲೆಗಳು ಕೇಳಿದಾಗ ನಿರ್ಮಾಪಕನ ಬಂಡವಾಳ ಬಯಲಿಗೆ ಬಂದಿದೆ. ಈ ಸಂಬಂಧ ಪುಷ್ಪಕುಮಾರ್ ರಾಜಾಜಿನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್, ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ
Previous Articleರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪುತ್ಥಳಿ ಅನಾವರಣ
Next Article ರಿಶಬ್ ಶೆಟ್ಟಿಯ ಕಾಂತಾರ ಸೆ.30ಕ್ಕೆ ರಿಲೀಸ್