ಬೆಂಗಳೂರು, ಮಾ.3- ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ
ನಗರದ ವರ್ಚಸ್ಸಿಗೆ ಮಸಿ ಬೆಳೆಯುವ ವ್ಯವಸ್ಥಿತ ಪಿತೂರಿ ಆಗಿದೆ ಎಂದು ಗೃಹ ಸಚಿವ ಪರಮೇಶ್ವರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿಗೆ ಹಲವಾರು ಜಾಗತಿಕ ಮಟ್ಟದ ಉದ್ಯಮಿಗಳು ಆಗಮಿಸುತ್ತಿವೆ ದೊಡ್ಡ ಪ್ರಮಾಣದ ವ್ಯವಹಾರಿಕ ನಗರವಾಗಿ ಬೆಂಗಳೂರು ಬೆಳೆಯುತ್ತಿದೆ ನಗರದ ಈ ಬೆಳವಣಿಗೆಯ ಗತಿಗೆ ಕಡಿವಾಣ ಹಾಕಬೇಕು ಎಂದು ಯಾರೋ ಕೆಲವರು ಮಾಡಿರುವ ಪಿತೂರಿಯ ಭಾಗ ಈ ಸ್ಫೋಟ ಪ್ರಕರಣ ಎಂದು ಹೇಳಿದರು.
ಸ್ಪೋಟ ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾ ಗುತ್ತಿದೆ , ವ್ಯಾವಹಾರಿಕ ವೈಷಮ್ಯ, ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆಯವರು 2ದುಷ್ಕøತ್ಯ ನಡೆಸಿರುವ ಸಾಧ್ಯತೆ, ಬೆಂಗಳೂರು ಮಹಾನಗರಕ್ಕೆ ಬಂಡವಾಳ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲದ ನಗರ ಎಂಬ ಹಣೆಪಟ್ಟಿ ಕಟ್ಟುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು ಇವಿಷ್ಟೇ ಅಲ್ಲದೆ, ನಾವು ಬೇರೆಬೇರೆ ಆಯಾಮಗಳಲ್ಲೂ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದೇವೆ. ಹೋಟೆಲ್ ಮಾಲಿಕರು 11 ಶಾಖೆಗಳನ್ನು ಮಾಡಿದ್ದು, 12ನೇ ಶಾಖೆ ಪ್ರಾರಂಭ ಮಾಡಲು ಮುಂಗಡ ಕೊಟ್ಟಿದ್ದು, ಉದ್ಯಮದ ವೈಷಮ್ಯವಿರಬಹುದು ಎಂದೂ ಕೂಡ ಇಲ್ಲಿನವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ತನಿಖೆ ನಡೆಸುತ್ತಿದ್ದೇವೆ. ಭಯೋತ್ಪಾದಕ ಸಂಘಟನೆಗಳು ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆ ಹಿನ್ನೆಲೆಯಲ್ಲಿ ಎನ್ಐಎ, ಎನ್ಎಸ್ಜಿ ತಂಡಗಳು ಕೂಡ ಪರಿಶೀಲನೆ ನಡೆಸುತ್ತಿವೆ.
ಒಟ್ಟಾರೆ ಪ್ರಕರಣ ಸವಾಲಾಗಿ ಪರಿಣಮಿಸಿದ್ದು, ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕ್ಯಾಮೆರಾಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ 26 ಬಸ್ಗಳು ಬಂದು ಹೋಗಿವೆ. ಆ ಬಸ್ಗಳಲ್ಲಿ ಕ್ಯಾಮೆರಾಗಳನ್ನು ಕೂಡ ಪರಿಶೀಲನೆ ಮಾಡಲಾಗಿದ್ದು, ಮಾಸ್ಕ್ ಮತ್ತು ಕ್ಯಾಪ್ ಧರಿಸಿದ ವ್ಯಕ್ತಿ ಪ್ರಯಾಣಿಸಿದ ಬಸ್ಸನ್ನು ಗುರುತಿಸಲಾಗಿದೆ. ಹೆಚ್ಚಿನ ತಾಂತ್ರಿಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದರು.
ಎನ್ ಐ ಎ ತನಿಖೆ:
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಮೇಶ್ವರ ಕಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್.ಐ.ಎ ಗೆ ವಹಿಸುವ ಬಗ್ಗೆ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು. 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು ಎಂದು ಕೇಳಿದರು. ಇದು ಎನ್.ಐ.ಎ, RAW ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.
ರಾಜೀನಾಮೆ ಕೊಟ್ಟರೆ ನೆಮ್ಮದಿ:
ಇನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲ ಇಡೀ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿಯ ಭರವಸೆ ಲಭಿಸಲಿದೆ ಎಂದು ಹೇಳಿದರು.
, ಈ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು? ಈ ಸರ್ಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಯಾರನ್ನು ಓಲೈಸುತ್ತಿದೆ? ಎಫ್ಎಸ್ಎಲ್ ವರದಿ ಬಿಡುಗಡೆ ಮಾಡದೆ ಇರಲು ಸರ್ಕಾರದ ಮೇಲೆ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರ ಒತ್ತಡ ಇದೆಯೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮನಸ್ಸನ್ನು ಪೂರ್ತಿ ಕಲ್ಮಶ ಮಾಡುವ ಕಡೆಗೆ ಹೋಗುತ್ತಿದೆ. ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧ ರಾಜ್ಯದ ಹೃದಯವಿದ್ದಂತೆ. ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಅಕ್ಷಮ್ಯ ಎಂದು ತಿಳಿಸಿದರು.ಅಲ್ಪಸಂಖ್ಯಾತರು ತಮಗೆ ಮತ ಹಾಕಿದರೆ ಸಾಕು, ಬಹುಸಂಖ್ಯಾತರನ್ನು ಬಗ್ಗು ಬಡಿಯುತ್ತೇವೆ ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು ಎಂದು ಅವರು ತಿಳಿಸಿದರು
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರೆಂಬ ಇಲಿಗಳು ಬಿಲಕ್ಕೆ ಬಂದು ಹುಲಿಗಳಾಗಿವೆ. ನಮ್ಮನ್ನೇನೂ ಮಾಡುವುದಿಲ್ಲ ಎಂಬ ಮನಸ್ಥಿತಿ ಭಯೋತ್ಪಾದಕರದ್ದಾಗಿದೆ. ಇದು ದೊಡ್ಡ ಆಘಾತ ತಂದಿದೆ. ಸರ್ಕಾರವು ಅವರ ಬಗ್ಗೆ ಸಹಾನುಭೂತಿ ತೋರುವುದು ಆಘಾತಕಾರಿ ವಿಚಾರ ಎಂದು ತಿಳಿಸಿದರು.

1 Comment
Betano Casino https://betanogame.org/no/ – bygget for store vinnere. Ta din €500 bonus i dag og dykk ned i live gaming. Fra slots til sport tilbyr vi det ultimate underholdningspakken.